ತಾಯಿ-ಮಗನ ಹತ್ಯೆ: ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ
![ತಾಯಿ-ಮಗನ ಹತ್ಯೆ: ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ತಾಯಿ-ಮಗನ ಹತ್ಯೆ: ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ](https://www.varthabharati.in/h-upload/2023/09/06/1187812-.webp)
ಬೆಂಗಳೂರು, ಸೆ.6: ತಾಯಿ ಮತ್ತು ಆಕೆಯ ಅಪ್ರಾಪ್ತ ಮಗನನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿನ ಬಾಗಲಗುಂಟೆಯ ರವೀಂದ್ರನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ರವೀಂದ್ರನಗರದ ತಾಯಿ ನವನೀತ(35), ಮಗ ಸೃಜನ್(11) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.5ರ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಜೋಡಿ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ಪೊಲೀಸ್ ತಂಡವೊಂದನ್ನು ರಚಿಸಲಾಗಿದೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ಹತ್ಯೆಯಾದ ನವನೀತ ಮೂಲತಃ ಆಂಧ್ರಪ್ರದೇಶದವರು. ಇವರು ತಮ್ಮ 11 ವರ್ಷದ ಮಗನೊಂದಿಗೆ ಕಳೆದ ಮೂರು ವರ್ಷಗಳಿಂದ ನಗರದ ರವೀಂದ್ರನಗರದಲ್ಲಿ ವಾಸಿಸುತ್ತಿದ್ದರು. ಇವರು ಕೌಟುಂಬಿಕ ಸಮಸ್ಯೆಯನ್ನು ಎದುರಿಸುತ್ತಿದ್ದರು. ಎರಡು ವರ್ಷಗಳಿಂದ ಪತಿಯಿಂದ ದೂರವಾಗಿ ವಾಸಿಸುತ್ತಿದ್ದರು.
ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಹನ್ನೊಂದು ವರ್ಷದ ಆಕೆಯ ಮಗನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಇಬ್ಬರ ಮೃತದೇಹಗಳು ಬೆಡ್ ಮೇಲೆ ಇದ್ದವು ಎಂದು ತಿಳಿದುಬಂದಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸರು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಪತಿ ಚಂದ್ರುವೇ ಕೊಂದಿರಬಹುದು ಎಂದು ಮೃತ ನವನೀತ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪರಾರಿಯಾಗಿರುವ ಚಂದ್ರು ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ ಮಾಹಿತಿ ನೀಡಿದ್ದಾರೆ.