‘ಮುಡಾ’ ರಾಜಕೀಯಗೊಳಿಸಿ ಸಿಎಂಗೆ ಕಪ್ಪುಚುಕ್ಕೆ ತರಲು ಯತ್ನ: ಪ್ರತಿಪಕ್ಷಗಳ ವಿರುದ್ಧ ಕಾಂಗ್ರೆಸ್ ಶಾಸಕರ ಆಕ್ರೋಶ

Screengrab : x/@INCKarnataka
ಬೆಂಗಳೂರು : ಮಡಾ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಅನಗತ್ಯವಾಗಿ ರಾಜಕಾರಣ ಮಾಡುತ್ತಿದ್ದು, ಕಪ್ಪುಚುಕ್ಕೆಯಿಲ್ಲದ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪುಚುಕ್ಕೆ ತರಲು ಪ್ರತಿಪಕ್ಷಗಳು ಹೊರಟಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಯು.ಟಿ.ಖಾದರ್ ಕ್ರಮವನ್ನು ಸಮರ್ಥಿಸಿಕೊಂಡರು. ಅಲ್ಲದೆ, ಬಿಜೆಪಿ ಅವಧಿಯಲ್ಲಿ ನಡೆದಿದ್ದ ಮುಡಾ ಅಕ್ರಮ ಪ್ರಕರಣದಲ್ಲಿ ದಾಖಲಾತಿಗಳನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ನಾಟಕ ಮಾಡುತ್ತಿರುವ ಬಿಜೆಪಿ-ಜೆಡಿಎಸ್ಗೆ ಬುದ್ಧಿ ಕಲಿಸಬೇಕು. ಮುಡಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆದಿದೆ. ಇದು 20 ವರ್ಷಗಳ ಹಿಂದಿನ ಪ್ರಕರಣ. ಹಾಗಾಗಿ ಸ್ಪೀಕರ್ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಅದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಏನೋ ಆಗಿದೆ ಎಂಬುದಾಗಿ ರಾಜಕೀಯ ಬಣ್ಣ ಕಟ್ಟುತ್ತಿದ್ದಾರೆ. ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದರು.
3.15 ಎಕರೆ ಜಮೀನು 1935ರಲ್ಲಿ ನಿಂಗಾ ಬಿನ್ ಜವರ ಎಂಬುವರಿಗೆ ಹರಾಜು ಮೂಲಕ ಬಂದಿತ್ತು. ಬ್ರಿಟಿಷರ ಅವಧಿಯಲ್ಲಿ ಬಿಡ್ ಮೂಲಕ ಬಂದ ದಾಖಲೆ ಇಲ್ಲಿದೆ. ಹರಾಜು ಕೂಗುವವರಿಗೆ ಭೂಮಿ ಕೊಡುವುದಿತ್ತು. ಹಾಗಾಗಿ ನಿಂಗಾಗೆ ಈ ಭೂಮಿ ನೀಡಲಾಗಿತ್ತು. ನಿಂಗಾ ಎಂಬುವರಿಗೆ ಮೂವರು ಮಕ್ಕಳು. ಮೈಲಾರಯ್ಯ, ಮಲ್ಲಯ್ಯ, ದೇವರಾಜು. ಮೈಲಾರಯ್ಯ ಮೃತ ಪಟ್ಟಿದ್ದಾರೆ. ಅವರ ಪತ್ನಿ ಪುಟ್ಟಗೌರಮ್ಮ ಇದ್ದಾರೆ. 3.15 ಎಕರೆಯನ್ನು ದೇವರಾಜುಗೆ ಬಿಡುತ್ತಾರೆ ಎಂದು ಶಿವಲಿಂಗೇಗೌಡ ವಿವರಿಸಿದರು.
2004ರಲ್ಲಿ ದೇವರಾಜು ಅವರು ಮಲ್ಲಿಕಾರ್ಜುನಸ್ವಾಮಿಗೆ ಆ ಭೂಮಿಯನ್ನು ನೀಡುತ್ತಾರೆ. ಮಲ್ಲಿಕಾರ್ಜುನಸ್ವಾಮಿ ಅವರು ಸಿದ್ದರಾಮಯ್ಯನವರ ಬಾಮೈದ. 2010ರಲ್ಲಿ ಆ ಭೂಮಿಯನ್ನು ಮಲ್ಲಿಕಾರ್ಜುನ್ಸ್ವಾಮಿ ಅವರು ಸಿದ್ದರಾಮಯ್ಯ ಪತ್ನಿಗೆ ದಾನಪತ್ರ ರೂಪದಲ್ಲಿ ಕೊಡುತ್ತಾರೆ. ಬಳಿಕ 3.15 ಎಕರೆ ಜಮೀನನ್ನು ಮುಡಾ ಸ್ವಾಧೀನ ಪಡಿಸಿಕೊಂಡು ಸೈಟ್ ಮಾಡಿ ಹಂಚಿಕೆ ಮಾಡುತ್ತಾರೆ. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಪತ್ನಿ, ಭೂಮಿ ವಾಪಸ್ ಮಾಡಿ ಇಲ್ಲವೇ ಸಮಾನಾಂತರ ಭೂಮಿ ನೀಡಿ ಎಂದು ಮುಡಾಗೆ ಪತ್ರ ಬರೆಯುತ್ತಾರೆ. ಆಗ ಅವರಿಗೆ 50ಃ50 ಅನುಪಾತದಲ್ಲಿ ಸೈಟ್ ನೀಡಲಾಗುತ್ತದೆ. ಸೈಟು ನೀಡುವಾಗ ಬಿಜೆಪಿಯವರು ಅಧಿಕಾರದಲ್ಲಿದ್ದರು ಎಂದು ಶಿವಲಿಂಗೇಗೌಡ ತಿಳಿಸಿದರು.
ಶಾಸಕ ನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಡಾದಲ್ಲಿ ಅರ್ಜಿ ಹಾಕಿ 21 ಸಾವಿರ ಚದರಡಿ ನಿವೇಶನ ಪಡೆದಿದ್ದಾರೆ. ಅವರಿಗೆ ಹೇಗೆ ನಿವೇಶನ ಕೊಟ್ಟರು. ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ ನಿವೇಶನ ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಪಡೆದರೆ ಮಾತ್ರ ಅಕ್ರಮವೇ?, ಕುಮಾರಣ್ಣ ನಾನು ಮೈಸೂರಿನಲ್ಲಿ ವಾಸವಿದ್ದೇನೆ. ನನಗೆ ಸೈಟು ಕೊಡಿ ಅಂತ ಸ್ವಂತ ಪತ್ರ ಬರೆದಿದ್ದರು. ಕುಮಾರಣ್ಣ ಏನಾದರೂ ಇಂಡಸ್ಟ್ರಿ ಮಾಡಿದ್ದಾರಾ?. ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಹಳೆಯ ಹಗರಣವನ್ನು ಉದ್ದೇಶಪೂರ್ವಕವಾಗಿ ಎತ್ತಿದ್ದಾರೆ. ಚರ್ಚೆಗೆ ಅವಕಾಶ ಕೇಳಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಈ ಹಗರಣದಲ್ಲಿ ಭಾಗಿಯಾಗಿಲ್ಲ. ಹಂಚಿಕೆ ಮಾಡಿದರಲ್ಲಿ ಸಿದ್ದರಾಮಯ್ಯ ಸಹಿ ಇಲ್ಲ. ಬಿಜೆಪಿ ಅವಧಿಯಲ್ಲಿ ಈ ಹಗರಣವಾಗಿದೆ. ಯಾವ ಉದ್ದೇಶದಿಂದ ಮೈಸೂರು ಪಾದಯಾತ್ರೆ ಮಾಡುತ್ತಾರೆ?, ಈಗಾಗಲೇ ಹಗರಣದ ತನಿಖೆ ನಡೆಯುತ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಪಾದಯಾತ್ರೆ ಮಾಡುತ್ತದೆಯೋ ಎಂದು ನಾರಾಯಣಸ್ವಾಮಿ ಕಿಡಿಕಾರಿದರು.
ಶಾಸಕ ನರೇಂದ್ರಸ್ವಾಮಿ ಮಾತನಾಡಿ, ನಮ್ಮ ಸರಕಾರ ಬಂದು ವರ್ಷ ಮುಗಿಯಿತು. ಒಂದು ವರ್ಷ ದಿಂದ ಯಾಕೆ ಈ ವಿಚಾರ ಪ್ರಸ್ತಾಪಿಸಿಲ್ಲ. 2021ರ ಪ್ರಕರಣ ಇದು ಆಗ ಯಾಕೆ ಬಾಯ್ಬಿಡಲಿಲ್ಲ. ಆಗ ಸದನ ಕೂಡ ನಡೆದಿತ್ತು. ಅವತ್ತಿನ ಅಧ್ಯಕ್ಷ ಯಾವ ಪಕ್ಷದವರು?. ಅವತ್ತಿನ ನಗರಾಭಿವೃದ್ಧಿ ಸಚಿವರು ಯಾರು?. ಅವತ್ತು ಮುಖ್ಯಮಂತ್ರಿಯಾಗಿದ್ದವರು ಯಾರು?. ಅವರಿಗೆ ಶಿಕ್ಷೆಯಾಗಬೇಕು ಅಂತ ಯಾಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರ ಘನತೆ ಹಾಳು ಮಾಡಬೇಡಿ: ‘ಸಿಎಂ ಅನ್ನೋ ಕಾರಣಕ್ಕೆ ದೊಡ್ಡದು ಮಾಡುತ್ತಿದ್ದಾರೆ. ಸುಮ್ಮನೆ ಸಿದ್ದರಾಮಯ್ಯ ಘನತೆ ಹಾಳು ಮಾಡಬೇಡಿ. ರಾಜ್ಯದ ಜನ ಇದನ್ನು ನಂಬುವುದಿಲ್ಲ. ಸಿದ್ದರಾಮಯ್ಯ ವ್ಯಕ್ತಿತ್ವ ಜನರಿಗೆ ಗೊತ್ತಿದೆ. ಅವರನ್ನು ಪ್ರಕರಣದಲ್ಲಿ ಸಿಕ್ಕಿಸುತ್ತೇವೆ ಎಂಬ ಆಸೆ ಇದ್ದರೆ ಬಿಟ್ಟುಬಿಡಿ. ಅವರಿಗೆ ಸೈಟ್ ಕೊಟ್ಟವರು ನೀವೇ. ಈಗ ನಾಟಕ ಮಾಡುವುದನ್ನು ನಿಲ್ಲಿಸಿ. ಮುಡಾದವರು ಅಕ್ರಮ ಪ್ರವೇಶ ಮಾಡಿದ್ದೇಕೆ. 3.15 ಎಕರೆಯನ್ನು ವಾಪಸ್ ಮಾಡಿ. ಬಿಜೆಪಿಯವರೇ ಅವತ್ತು ಸೈಟ್ ಕೊಟ್ಟವರು. ಅದೇ ಜಾಗದಲ್ಲಿ ಕೊಡಿ ಅಂತ ಸಿದ್ದರಾಮಯ್ಯ ಕೇಳಿದ್ದರಾ?, ಅವರದ್ದೇನಾದರೂ ತಪ್ಪಾಗಿದ್ದರೆ ನಾವೇ ಶರಣಾಗುತ್ತೇವೆ’ ಎಂದು ಶಾಸಕ ಶಿವಲಿಂಗೇಗೌಡ ಸವಾಲೆಸೆದರು.







