ಯುವಕರ ಸಾಮರ್ಥ್ಯವೇ ದೇಶದ ಭವಿಷ್ಯ : ನರೇಂದ್ರ ಮೋದಿ

ಮೈಸೂರು : ಇಂದು ಭಾರತವು ಯುವಶಕ್ತಿಯ ಬಲದಿಂದ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಚುರುಕಾದ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಯುವಕರ ಸಾಮರ್ಥ್ಯವೇ ದೇಶದ ಭವಿಷ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ರಾಮಕೃಷ್ಣ ಆಶ್ರಮದ ವತಿಯಿಂದ ನಿರ್ಮಿಸಲಾದ ವಿವೇಕ ಸ್ಮಾರಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಕಂಡ ಕನಸನ್ನು ಸಾಕಾರಗೊಳಿಸುವ ಹೊಣೆ ಯುವಜನರ ಮೇಲಿದೆ ಎಂದು ಹೇಳಿದರು. ಭಾಷಣದ ಆರಂಭದಲ್ಲಿ ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಶುಭಾಶಯ ಕೋರಿದರು. ಪ್ರಥಮವಾಗಿ ಚಾಮುಂಡೇಶ್ವರಿ ದೇವಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದರು.
ಸ್ವಾಮಿ ವಿವೇಕಾನಂದರು ಯುವಜನರ ಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಪ್ರಮುಖ ಆಧಾರವೆಂದು ಪರಿಗಣಿಸಿದ್ದರು. ಜಗತ್ತಿನ ಅನೇಕ ರಾಷ್ಟ್ರಗಳು ತಮ್ಮ ಯುವಕರನ್ನು ಶಿಕ್ಷಣ, ಕೌಶಲ್ಯ ಮತ್ತು ಶಿಸ್ತಿನ ಮೂಲಕ ಸಬಲಗೊಳಿಸಿ ಪ್ರಗತಿ ಸಾಧಿಸಿರುವುದನ್ನು ಅವರು ಗಮನಿಸಿದ್ದರು. ಅದೇ ರೀತಿ ಭಾರತದ ಯುವಕರೂ ದೇಶದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದ್ದರು. ದೇಶದ ಬಗ್ಗೆ ಸಮರ್ಪಣಾ ಭಾವನೆ ಹೊಂದಿ, ಸ್ವಾರ್ಥವನ್ನು ತ್ಯಜಿಸಿ, ರಾಷ್ಟ್ರಹಿತಕ್ಕಾಗಿ ಜೀವನವನ್ನು ಅರ್ಪಿಸುವ ಮನೋಭಾವ ನಮ್ಮಲ್ಲಿರಬೇಕು. ಭಾರತ ಮಾತೆಯ ಸೇವೆಯೇ ನಮ್ಮ ಜೀವನದ ಪರಮ ಗುರಿಯಾಗಬೇಕು ಎಂದರು.
ಭಾರತದ ಯುವಕರ ಪರಿಶ್ರಮ ಮತ್ತು ಪ್ರತಿಭೆಯಿಂದ ದೇಶವು ವಿಶ್ವದ ಪ್ರಮುಖ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ವಿಶ್ವದ ಅತಿದೊಡ್ಡ ಡಿಜಿಟಲ್ ಜಾಲತಾಣ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಿ, ಶಿಕ್ಷಣ, ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಿದೆ. ದೇಶದ ಡಿಜಿಟಲ್ ಕ್ರಾಂತಿ ಮತ್ತು ಅಭಿವೃದ್ಧಿಯ ಯಶಸ್ಸಿನ ಹಿಂದೆ ಭಾರತದ ಯುವಜನರ ಅಪಾರ ಕೊಡುಗೆ ಅಡಗಿದೆ. ಯುವಕರಿಗೆ ಸರಿಯಾದ ಅವಕಾಶಗಳು ಮತ್ತು ಸರಿಯಾದ ದಿಕ್ಕು ದೊರೆತಾಗ ಅವರ ಸಾಮರ್ಥ್ಯ ಸಂಪೂರ್ಣವಾಗಿ ಹೊರಹೊಮ್ಮುತ್ತದೆ ಎಂದರು.
ಮೈಸೂರು ಸಂಸ್ಥಾನದ ಪರಂಪರೆ ಹಾಗೂ ಅದರ ಆಧ್ಯಾತ್ಮಿಕ ವೈಭವ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸ್ವಾಮಿ ವಿವೇಕಾನಂದರು ಮೈಸೂರಿಗೆ ಬಂದ ಸಂದರ್ಭದಲ್ಲಿ ಅವರ ಚಿಂತನೆಗಳು ಮತ್ತು ವಿಚಾರಧಾರೆಗಳು ಅನೇಕ ಜನರ ಮೇಲೆ ಪ್ರಭಾವ ಬೀರಿದವು. ಆ ಸಮಯದಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ಹಾಗೂ ಅನೇಕ ಗಣ್ಯರು ಅವರಿಗೆ ನೀಡಿದ ಸಹಕಾರ ಅಮೂಲ್ಯವಾಗಿತ್ತು. ಸ್ವಾಮಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದರು ಮತ್ತು ಭಾರತದ ಮಹಿಮೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು ಎಂದು ತಿಳಿಸಿದರು.
ಬೇಲೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜೀ ಮಹಾರಾಜ್, ಸ್ವಾಮಿ ಮುಕ್ತಿದಾನಂದ ಮಹರಾಜ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಕೆ.ಹರೀಶ್ಗೌಡ, ದೇಶದ ವಿವಿಧ ಭಾಗಗಳ 120ಕ್ಕೂ ಹೆಚ್ಚು ಸಾಧು, ಸಂತರು ಮತ್ತು ವಿವಿಧ ಮಠ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.
ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ
ಸ್ವಾಮಿ ವಿವೇಕಾನಂದರು 1892ರಲ್ಲಿ ಮೈಸೂರಿಗೆ ಐತಿಹಾಸಿಕ ಭೇಟಿಯ ನೆನಪಿನಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ (ವಿವೇಕ ಸ್ಮಾರಕ) ಕೇಂದ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಿದರು.
ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ನಮಿಸಿ ಪೂಜೆ ಸಲ್ಲಿಸಿದರು. ಬಿಲ್ವಪತ್ರೆ ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು. ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇದ್ದರು.






