ರಾಜ್ಯದಲ್ಲಿ ಬಿಗಿ ಭದ್ರತೆ ನಡುವೆ ಯಶಸ್ವಿಯಾಗಿ ಮುಕ್ತಾಯಗೊಂಡ NEET ಮರುಪರೀಕ್ಷೆ

ಬೆಂಗಳೂರು: ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ) ಬಿಗಿ ಭದ್ರತೆಯ ನಡುವೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದು ಮರುಪರೀಕ್ಷೆಯಾಗಿದ್ದು, ಈ ಬಾರಿ ಪ್ರಶ್ನೆಪತ್ರಿಕೆ ಹಿಂದಿನ ಪರೀಕ್ಷೆಗಿಂತ ಹೆಚ್ಚು ಕಠಿಣವಾಗಿದ್ದು, ವಿಶೇಷವಾಗಿ ಭೌತಶಾಸ್ತ್ರ ವಿಭಾಗ ವಿದ್ಯಾರ್ಥಿಗಳಿಗೆ ತೀವ್ರ ಸವಾಲೊಡ್ಡಿದೆ ಎಂದು ಪರೀಕ್ಷಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.
ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರೆ ಅಕ್ರಮಗಳ ಆರೋಪಗಳು ದೇಶವ್ಯಾಪಿ ವಿವಾದಕ್ಕೆ ಕಾರಣವಾಗಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ಟಿಎ), ದೇಶಾದ್ಯಂತ 22,79,743 ವಿದ್ಯಾರ್ಥಿಗಳಿಗಾಗಿ ಮರುಪರೀಕ್ಷೆಯನ್ನು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ನಡೆಸಿತು.
ಇನ್ನು, ಬೆಂಗಳೂರಿನಲ್ಲಿ ಪರೀಕ್ಷೆ ಮುಗಿದ ಬಳಿಕ ವಿವಿಧ ಕೇಂದ್ರಗಳಿಂದ ಹೊರಬಂದ ವಿದ್ಯಾರ್ಥಿಗಳು ಈ ಬಾರಿ ಪ್ರಶ್ನೆಪತ್ರಿಕೆಯು ನಿರೀಕ್ಷೆಗಿಂತ ಕಠಿಣವಾಗಿತ್ತು ಎಂದು ಪ್ರತಿಕ್ರಿಯಿಸಿದರು.
ವಿಷಯವಾರು ನೋಡಿದರೆ ಭೌತಶಾಸ್ತ್ರ ವಿಭಾಗದ ಪ್ರಶ್ನೆಗಳು ದೀರ್ಘವಾಗಿದ್ದು, ವಿಶ್ಲೇಷಣಾತ್ಮಕ ಚಿಂತನೆಗೆ ಹೆಚ್ಚಿನ ಸಮಯ ಬೇಕಾಗಿತ್ತು. ರಸಾಯನಶಾಸ್ತ್ರ ವಿಭಾಗ ಸಾಧಾರಣದಿಂದ ಕಠಿಣ ಮಟ್ಟದಲ್ಲಿದ್ದರೆ, ಜೀವಶಾಸ್ತ್ರ ವಿಭಾಗದ ಪ್ರಶ್ನೆಗಳು ಸುಲಭವಾಗಿದ್ದರೂ ಅವುಗಳನ್ನು ಅರ್ಥೈಸಿ ಉತ್ತರಿಸಲು ಹೆಚ್ಚಿನ ಸಮಯ ತೆಗೆದುಕೊಂಡಿತು ಎಂದು ವಿದ್ಯಾರ್ಥಿಗಳು ತಿಳಿಸಿದರು. ಕೆಲವರು ಹಿಂದಿನ ಪರೀಕ್ಷೆಯ ಎರಡು ಅಥವಾ ಮೂರು ಪ್ರಶ್ನೆಗಳು ಪುನರಾವರ್ತನೆಯಾಗಿದ್ದವು ಎಂಬುದನ್ನೂ ಉಲ್ಲೇಖಿಸಿದರು.
ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ ಪರೀಕ್ಷೆಯ ಅವಧಿಯನ್ನು 15 ನಿಮಿಷಗಳ ಕಾಲ ವಿಸ್ತರಿಸಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪರೀಕ್ಷೆ ಸಂಜೆ 5.15 ಗಂಟೆವರೆಗೆ ನಡೆಯಿತು. ಹೆಚ್ಚುವರಿ ಸಮಯದಿಂದಾಗಿ ದೀರ್ಘ ಪ್ರಶ್ನೆಗಳಿಗೆ ಉತ್ತರಿಸಲು ಸ್ವಲ್ಪ ಅನುಕೂಲವಾಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಕೇಂದ್ರಗಳಲ್ಲಿ ಹೆಚ್ಚುವರಿ ಭದ್ರತೆ: ಹಿಂದಿನ ಪರೀಕ್ಷೆಯಲ್ಲಿ ಕಂಡುಬಂದ ಅಕ್ರಮಗಳು ಮರುಕಳಿಸದಂತೆ ಎನ್ಟಿಎ ಈ ಬಾರಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರಗಳಲ್ಲಿಯೇ ಪ್ರತಿಯೊಬ್ಬ ವಿದ್ಯಾರ್ಥಿಯ ದೈಹಿಕ ತಪಾಸಣೆ ನಡೆಸಲಾಯಿತು. ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಿಸಿ ಕ್ಯಾಮೆರಾಗಳ ಮೂಲಕ ಹೆಚ್ಚಿನ ನಿಗಾ ವಹಿಸಲಾಯಿತು. ಕೇಂದ್ರ ಮಟ್ಟದಲ್ಲಿಯೂ ವಿಶೇಷ ಮೇಲ್ವಿಚಾರಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೆಲವು ಪರೀಕ್ಷಾ ಕೇಂದ್ರಗಳ ಬಳಿ ನಿಗದಿತ ಸಮಯದ ನಂತರ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಯಿತು. ಇದರಿಂದಾಗಿ ಕೆಲವೆಡೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಅಸಮಾಮಾನ ವ್ಯಕ್ತವಾದ ಘಟನೆಗಳೂ ವರದಿಯಾದವು.
ಕಟ್ಟುನಿಟ್ಟಿನ ವಸ್ತ್ರಸಂಹಿತೆ ಪಾಲನೆ: ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಎನ್ಟಿಎ ಜಾರಿಗೊಳಿಸಿದ್ದ ವಸ್ತ್ರಸಂಹಿತೆಯನ್ನು ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಿದರು. ಸರಳ ಹಾಗೂ ಹಗುರ ಬಣ್ಣದ ಅರ್ಧ ತೋಳಿನ ಉಡುಪುಗಳನ್ನು ಧರಿಸಲು ಸೂಚಿಸಲಾಗಿತ್ತು. ಶೂಗಳ ಬದಲಿಗೆ ಚಪ್ಪಲಿ ಅಥವಾ ಕಡಿಮೆ ಹಿಮ್ಮಡಿಯ ಸ್ಯಾಂಡಲ್ಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ದೊಡ್ಡ ಗುಂಡಿಗಳಿರುವ ಉಡುಪುಗಳು, ಉಂಗುರ, ಸರ, ಬಳೆ, ಕಿವಿಯೋಲೆ ಸೇರಿದಂತೆ ಯಾವುದೇ ರೀತಿಯ ಆಭರಣಗಳನ್ನು ಧರಿಸಲು ಅವಕಾಶ ಇರಲಿಲ್ಲ.
ಮೂವರು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ: ನಗರದ ಪ್ರತಿಷ್ಠಿತ ಆರ್ಸಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ರವಿವಾರ ನಡೆದ ನೀಟ್ ಮರುಪರೀಕ್ಷೆಗೆ ನಿಗದಿತ ಸಮಯದ ಬಳಿಕ ಆಗಮಿಸಿದ್ದ ಇಬ್ಬರು ವಿದ್ಯಾರ್ಥಿಗಳು ಹಾಗೂ ಹಳೆಯ ಹಾಲ್ ಟಿಕೆಟ್ ತಂದಿದ್ದ ಮತ್ತೊಬ್ಬ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಲಾಯಿತು.
ಪರೀಕ್ಷಾ ಕೇಂದ್ರದ ಗೇಟ್ ಮುಚ್ಚಿದ್ದರಿಂದ ಒಳಗೆ ಬಿಡುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಮನವಿ ಮಾಡಿದರೂ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯ ಕಟ್ಟುನಿಟ್ಟಿನ ನಿಯಮಗಳ ಹಿನ್ನೆಲೆಯಲ್ಲಿ ಸಿಬ್ಬಂದಿ ಅವಕಾಶ ನೀಡಲಿಲ್ಲ. ಈ ವೇಳೆ ಪರೀಕ್ಷೆ ಬರೆಯುವ ಆತುರದಲ್ಲಿ ಓರ್ವ ವಿದ್ಯಾರ್ಥಿನಿ ಗೇಟ್ ಹಾರಿ ಒಳಗೆ ಹೋಗಲು ಯತ್ನಿಸಿದ ಘಟನೆ ಕೂಡ ನಡೆಯಿತು. ಸ್ಥಳೀಯರು ಮತ್ತು ಪೋಷಕರು ಆಕೆಯನ್ನು ತಡೆದರು.
ಇನ್ನೊಬ್ಬ ವಿದ್ಯಾರ್ಥಿ ಸಾರಿಗೆ ಸಮಸ್ಯೆಯಿಂದ ತಡವಾಗಿ ಆಗಮಿಸಿದ್ದರೆ, ಮಾಗಡಿ ಮೂಲದ ವಿದ್ಯಾರ್ಥಿನಿಯೊಬ್ಬರು ಹೊಸದಾದ ಹಾಲ್ ಟಿಕೆಟ್ ಬದಲಾಗಿ ಹಿಂದಿನ ಪರೀಕ್ಷೆಯ ಹಳೆಯ ಹಾಲ್ ಟಿಕೆಟ್ ತಂದಿದ್ದರಿಂದ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಆತಂಕಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ಪೊಲೀಸರು ಧೈರ್ಯ ತುಂಬಿ, ಕುಟುಂಬ ಸದಸ್ಯರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟರು.






