ಬಿಜೆಪಿಯಂತೆ ನಡೆದುಕೊಂಡರೆ ಕಾಂಗ್ರೆಸ್ ಸರಕಾರದ ವಿರುದ್ಧವೂ ಹೋರಾಟ : ನೇಹಾ ಬೋರಾ ಎಚ್ಚರಿಕೆ

ಬೆಂಗಳೂರು : ಕೊಟ್ಟ ಭರವಸೆಗಳನ್ನು ಈಡೇರಿಸದೆ, ಬಿಜೆಪಿ ಪಕ್ಷದಂತೆ ಬರೀ ಮಾತುಗಳಿಗೆ ಸೀಮಿತವಾಗಿ ನಡೆದುಕೊಂಡರೆ ಇಲ್ಲಿ ಆಡಳಿತದಲ್ಲಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ(ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಎಚ್ಚರಿಕೆ ನೀಡಿದ್ದಾರೆ.
ರವಿವಾರ ನಗರದ ಕಬ್ಬನ್ ಉದ್ಯಾನದಲ್ಲಿರುವ ಎನ್ಜಿಒ ಸಭಾಂಗಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಕರ್ನಾಟಕ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿಗಳಲ್ಲಿ ಅಕ್ರಮ ಸೇರಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡೋಣ ಬನ್ನಿ ಕುರಿತ ಜೆನ್ ಝೀ ಮಾರ್ಚ್’ ಸಂವಾದದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ವಿರುದ್ಧ ಹೊಸದಿಲ್ಲಿಯಲ್ಲಿ ನಡೆದ ವಿದ್ಯಾರ್ಥಿಗಳ ಹಾಗೂ ಜೆನ್ ಝೀ ಹೋರಾಟವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರು ಬೆಂಬಲ ವ್ಯಕ್ತಪಡಿಸಿದರು. ಆದರೆ, ಕರ್ನಾಟಕದಲ್ಲಿ ಇದೇ ಜೆನ್ ಝೀ ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಕೂಡಲೇ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು.ಇಲ್ಲದಿದ್ದರೆ ಮತ್ತೊಂದು ಸುತ್ತಿನ ಹೋರಾಟವನ್ನು ಬೆಂಗಳೂರಿನಲ್ಲಿಯೇ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾವು ಬಿಜೆಪಿ ಸರಕಾರವನ್ನು ಮಾತ್ರ ವಿರೋಧಿಸುತ್ತೇವೆ ಎನ್ನುವ ವಾದ ಸರಿಯಲ್ಲ. ಯಾವ ಸರಕಾರ ಯುವ ಶಕ್ತಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದೆಯೂ ಅಂತಹ ಸರಕಾರಗಳ ವಿರುದ್ಧ ಹೋರಾಟ ನಡೆಸುತ್ತೇವೆ.ಅದು ಕಾಂಗ್ರೆಸ್ ಅದರೂ ಸರಿ, ಬಿಜೆಪಿ ಅದರೂ ಸರಿ ಎಂದ ಅವರು, ಕರ್ನಾಟಕದಲ್ಲಿ ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕು. ಯುವ ಶಕ್ತಿಗೆ ಉದ್ಯೋಗಗಳನ್ನು ಕಲ್ಪಿಸಬೇಕು. ಕೆಪಿಎಸ್ಸಿ ಹಗರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ, ಆರೆಸ್ಸೆಸ್ ಅನ್ನು ಚುನಾವಣೆ ರಾಜಕೀಯದಲ್ಲಿ ಸೋಲಿಸಿದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ.ಬದಲಾಗಿ ಭಾರತೀಯ ಮಣ್ಣಿನಿಂದ ಅದರ ಬೇರು ಮತ್ತು ಕಾಂಡಗಳನ್ನು ಕಿತ್ತು ಹಾಕುವ ಕೆಲಸ ಆಗಬೇಕು. ಇದನ್ನು ಇಂದಿನ ಯುವಪೀಳಿಗೆ ಶುರು ಮಾಡಿದ್ದು, ಮುಂದೆ ಬಿಜೆಪಿ, ಆರೆಸ್ಸೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಹೋರಾಟಗಾರ, ಸಂಗೀತಗಾರ ಟಿ.ಎಂ.ಕೃಷ್ಣ ಮಾತನಾಡಿ, ಸಂವಿಧಾನ ಎಂದರೆ ಬರೀ ಕಾನೂನಿನ ಪುಸ್ತಕವಲ್ಲ. ಇದರಲ್ಲಿ ಜನರ ಬದುಕು, ಸಾಂಸ್ಕೃತಿಕ ಜೀವನ ಶೈಲಿ ಅಡಗಿದೆ. ಈ ವ್ಯವಸ್ಥೆ ರೂಪಿಸಲು ಅನೇಕರು ತಮ್ಮ ಜೀವನವನ್ನೆ ತ್ಯಾಗ ಮಾಡಿದ್ದಾರೆ. ಸೈದ್ದಾಂತಿಕವಾಗಿ ಗಟ್ಟಿಯಾಗಿ ನಿಂತವರಿಂದಲೇ ಈ ಸಂವಿಧಾನ ಜಾರಿಗೆ ಬಂದಿದೆ. ಹೀಗಾಗಿ, ನಾವು ಸಂವಿಧಾನದಲ್ಲಿನ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿಯೊಬ್ಬರಿಗೂ ಹಕ್ಕು ದೊರೆಯುವಂತೆ ಆಗಬೇಕು. ಈ ಕುರಿತು ಚರ್ಚೆಗಳು ನಡೆಯಬೇಕು ಎಂದು ನುಡಿದರು.
ಚಿಂತಕ, ನಟ ಕಿಶೋರ್ ಮಾತನಾಡಿ, ಜಾತಿ ತಾರತಮ್ಯ, ಕೋಮುವಾದದ ಕುರಿತು ಇಂದಿನ ಯುವ ಪೀಳಿಗೆ ದನಿಗೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಸಮಾಜದಲ್ಲಿ ಚಳವಳಿಗಳ ಅವಶ್ಯಕತೆ ಇದೆ. ಇದರಿಂದ ಸಮಸ್ಯೆಗಳು ಬಗೆಹರಿಯುತ್ತದೆ ಎನ್ನುವುದನ್ನು ನಾನು ನಂಬುತ್ತೇನೆ ಎಂದು ಹೇಳಿದರು.
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಕರ್ನಾಟಕ ಘಟಕದ ಸಂಯೋಜಕ ತುಳಸಿದಾಸ್ ಮಾತನಾಡಿ, ಇಂದಿನ ಯುವಕರು, ವಿದ್ಯಾರ್ಥಿಗಳು ಚಳವಳಿಗಳ ಮೂಲಕ ಸರಕಾರಗಳನ್ನೆ ಬದಲಾವಣೆ ಮಾಡುವ ಶಕ್ತಿ ಹೊಂದಿರುವುದು ಒಳ್ಳೆಯ ಭರವಸೆ ಎಂದೇ ನೋಡಬಹುದು. ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀರ ಉಲ್ಬಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂವಾದದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಕರ್ನಾಟಕ ಘಟಕದ ಸಂಘಟನಾ ಸದಸ್ಯೆ ಶ್ರೀಗಂಗಾ ಪಿ. ಸೇರಿದಂತೆ ಪ್ರಮುಖರಿದ್ದರು.






