ಶೀಘ್ರದಲ್ಲಿ ನೂತನ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬದಲಾದ ಮಾಧ್ಯಮ ಜಗತ್ತಿಗೆ ಅನುಗುಣವಾಗಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆವತಿಯಿಂದ ಪ್ರಸ್ತುತ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಜಾಹೀರಾತು ನೀತಿ-2013ಗೆ ಪೂರಕ ತಿದ್ದುಪಡಿಗಳನ್ನು ಮಾಡಿ ಶೀಘ್ರದಲ್ಲಿ ನೂತನ ಜಾಹೀರಾತು ನೀತಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರ ಜಾರಿಗೆ ತರುವ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಸರಕಾರದ ಜವಬ್ದಾರಿಯಾಗಿದೆ. ಅದರಂತೆ ಕಾಲ-ಕಾಲಕ್ಕೆ ವಿವಿಧ ಮಾಧ್ಯಮಗಳ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ ಎಂದರು.
ಪ್ರಸ್ತುತ ಜಾರಿಯಲ್ಲಿರುವ ಜಾಹೀರಾತು ಅನುಷ್ಠಾ ನ ನಿಯಮಗಳನ್ವಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಸಂದರ್ಭಾನುಸಾರ ರಾಜ್ಯ, ರಾಷ್ಟ್ರೀಯ ಹಬ್ಬ, ಮಹನೀಯರ ಜಯಂತಿ ಮತ್ತು ಸರಕಾರದ ಸಾಧನೆ ಹಾಗೂ ಯೋಜನೆ/ಕಾರ್ಯಕ್ರಮಗಳ ಕುರಿತು ಆಕರ್ಷಕ ಮತ್ತು ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಸಮುಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಾಹೀರಾತು ನೀಡುವುದಕ್ಕೆ ಸಂಬಂಧಿಸಿದಂತೆ 2020-21 ಆರ್ಥಿಕ ವರ್ಷದಲ್ಲಿ 111.15 ಕೋಟಿ ರೂ, 2021-22 ರಲ್ಲಿ 86.08 ಕೋಟಿ ರೂ, 2022-23 ರಲ್ಲಿ 113.20 ಕೋಟಿ ರೂ, 2023-24 ರಲ್ಲಿ 101.38 ಕೋಟಿ ರೂ. ಬಾಕಿ ಪಾವತಿಸಲಾಗಿದೆ. 2024-25 ರಲ್ಲಿ 95.45 ಕೋಟಿ ರೂ ವ್ಯಯಿಸಿಲಾಗಿದೆ ಎಂದು ಅವರು ವಿವರಿಸಿದರು.







