ನೂತನ ಸಂಪುಟ ರಚನೆಗೆ ಕಸರತ್ತು

ಬೆಂಗಳೂರು : ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆ ಖಚಿತವಾಗಿದ್ದು, ಅವರು ಪ್ರಮಾಣ ವಚನ ಸ್ವೀಕಾರ ಮಾಡುವುದು ನಿಶ್ಚಿತವಾಗಿದೆ. ಈ ಮಧ್ಯೆ ನೂತನ ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಗೊಂದಲ ಸೃಷ್ಟಿಸಿದೆ. ಆ ಹಿನ್ನೆಲೆಯಲ್ಲೇ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಮಾಡುವ ಕಾರ್ಯಕ್ರಮವು ವಿಳಂಬವಾಗುವ ಸಾಧ್ಯತೆಗಳಿವೆ.
ನೂತನ ಸರಕಾರ, ಸಚಿವ ಸಂಪುಟ ರಚನೆಯ ಸಂಬಂಧ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ವರಿಷ್ಠರೊಡನೆ ಸಮಾಲೋಚನೆ ನಡೆಸಿ, ಸಚಿವರ ಪಟ್ಟಿ ಸಿದ್ಧಪಡಿಸಿಕೊಳ್ಳಲಿದ್ದಾರೆಂದು ಹೇಳಲಾಗಿದೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು, ನೂತನ ಸಂಪುಟದಲ್ಲಿ ಸೇರ್ಪಡೆಯಾಗಲು ದಿಲ್ಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ.
ಹೊಸ ಸರಕಾರದಲ್ಲಿ ಎಷ್ಟು ಮಂದಿ ಉಪಮುಖ್ಯಮಂತ್ರಿಗಳಿರಬೇಕು, ಯಾವ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕು, ನೂತನ ಸಚಿವ ಸಂಪುಟದಲ್ಲಿ ಸಮುದಾಯ, ಪ್ರಾದೇಶಿಕವಾರು ಆದ್ಯತೆ ನೀಡುವ ಸಂಬಂಧ ಡಿ.ಕೆ.ಶಿವಕುಮಾರ್ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಮೂರು ವರ್ಷಗಳಿಂದ ಕಾರ್ಯನಿರ್ವಹಿಸಿದ ಹಿರಿಯರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಿ 10ರಿಂದ 15 ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಹೊಸ ರೀತಿಯ ಆಡಳಿತಕ್ಕೆ ಅಣಿಗೊಳಿಸಲಾಗುತ್ತಿದೆ. ಹೀಗಾಗಿ ಇನ್ನೂ ಎರಡು-ಮೂರು ದಿನಗಳಲ್ಲಿ ನೂತನ ಸಚಿವರ ಹೆಸರುಗಳು ಅಂತಿಮವಾಗಲಿವೆ ಎಂದು ಗೊತ್ತಾಗಿದೆ.
ಜೂನ್ 5ಕ್ಕೆ ಪ್ರಮಾಣ?: ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕ, ಸಮಯ ನೀಡುವಂತೆ ಗುರು ದ್ವಾರಕನಾಥ್ ಗುರೂಜಿಗೆ ಮನವಿ ಮಾಡಿದ್ದು, ಇದೀಗ ಅದರಂತೆ ದ್ವಾರಕನಾಥ್ ಗುರೂಜಿ, ‘ಜೂನ್ 5, 6 ಅಥವಾ 7ರಂದು ಪ್ರಮಾಣ ವಚನಕ್ಕೆ ಶುಭ ದಿನ’ ಎಂದು ಶಿವಕುಮಾರ್ ಅವರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಖಾಸಗಿ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ದ್ವಾರಕನಾಥ್ ಗುರೂಜಿ, ‘ಈಗಾಗಲೇ ಮುಹೂರ್ತ ನಿಗದಿ ಮಾಡಲಾಗಿದೆ. ನಾಳೆಯ ಶಾಸಕಾಂಗ ಪಕ್ಷದ ಸಭೆಗೆ ನಾನೇ ಮುಹೂರ್ತ ನೀಡಿದ್ದೆ. ಇದೀಗ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರಕ್ಕೆ ಜೂನ್ 5, 6 ಅಥವಾ 7ರಂದು ದಿನ ಚೆನ್ನಾಗಿದೆ. ದೇವರ ಅನುಗೃಹದಿಂದ ಶಿವಕುಮಾರ್ ಅವರಿಗೆ ಸಿಎಂ ಪದವಿ ಸಿಕ್ಕಿದೆ’ ಎಂದು ಹೇಳಿದ್ದಾರೆ.
ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಬೇಕಿದೆ. ಬಳಿಕ ಈ ಕುರಿತು ತೀರ್ಮಾನ ಆಗಲಿದೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ






