ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಎಂಟು ಮಂದಿ ತಜ್ಞರ ನಾಮ ನಿರ್ದೇಶನ

ಬೆಂಗಳೂರು: ರಾಜ್ಯ ಸರಕಾರವು ಎಂಟು ಮಂದಿ ಶಿಕ್ಷಣ ತಜ್ಞರನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಾಮ ನಿರ್ದೇಶನ ಮಾಡಿ ಬುಧವಾರ ಆದೇಶ ಹೊರಡಿಸಿದೆ.
ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಜಾ ಸಾಬ್, ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಸಿ.ಬೋರಲಿಂಗಯ್ಯ, ರಾಣಿ ಚನ್ನಮ್ಮ ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಮಚಂದ್ರಗೌಡ, ಬಳ್ಳಾರಿಯ ವಿಎಸ್ಕೆಯು ಮಾಜಿ ಕುಲಪತಿ ಪ್ರೊ.ಎಂ.ಎಸ್.ಸುಭಾಷ್, ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ನಿವೃತ್ತ ರಿಜಿಸ್ಟ್ರಾರ್ ಪ್ರೊ.ಸುನಂದಮ್ಮ, ಭಾರತೀಯ ಅಂಕಿ-ಅಂಶ ಸಂಸ್ಥೆಯ ಪ್ರೊ.ದೇವಿಕಾ ಪಿ.ಮಾದಳ್ಳಿ, ಶಿಕ್ಷಣ ತಜ್ಞ ಜಯರಾಂ ಮೇಲುಕೋಟೆ ಹಾಗೂ ಮಂಗಳೂರು ಅಕಾಡೆಮಿ ಆಫ್ ಪ್ರೊಫೆಷನಲ್ ಸ್ಟಡೀಸ್ ನಿರ್ದೇಶಕ ದಿನೇಶ್ ಕುಮಾರ್ ಆಳ್ವ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಈ ಶಿಕ್ಷಣ ತಜ್ಞರ ನಾಮ ನಿರ್ದೇಶನದ ಆದೇಶವು ಮುಂದಿನ ಐದು ವರ್ಷಗಳ ಅವಧಿಗೆ ಅಥವಾ ನಾಮ ನಿರ್ದೇಶಿತ ಸದಸ್ಯರಿಗೆ 70 ವರ್ಷ ತುಂಬುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ನಂದಕುಮಾರ್ ಬಿ.ಅಧಿಸೂಚನೆ ಹೊರಡಿಸಿದ್ದಾರೆ.





