ನನ್ನ ಸರಕಾರ ನನ್ನನ್ನು ಜೈಲಿಗೆ ಹಾಕಿ ದೊಡ್ಡ ಪುರಸ್ಕಾರ ನೀಡಿದೆ: ಪ್ರೊ.ಆನಂದ್ ತೇಲ್ತುಂಬ್ಡೆ

ಬೆಂಗಳೂರು: ನಿಮ್ಮ ಮಹಾರಾಷ್ಟ್ರ ಸರಕಾರ ನಿಮ್ಮನ್ನು ಪುರಸ್ಕರಿಸುವ ಮೊದಲೇ ನಮ್ಮ ಕರ್ನಾಟಕ ಸರಕಾರ ನಿಮ್ಮನ್ನು ಪುರಸ್ಕರಿಸಿದೆ ಎಂದು ಕೆಲವರು ನನಗೆ ಹೇಳುತ್ತಿದ್ದಾರೆ. ಆದರೆ ನನ್ನ ರಾಜ್ಯ ಸರಕಾರ ನನ್ನನ್ನು ಜೈಲಿಗೆ ಹಾಕಿ ಈಗಾಗಲೇ ಬಹಳ ದೊಡ್ಡ ಪುರಸ್ಕಾರ ನೀಡಿ ಬಿಟ್ಟಿದೆ ಎಂದು ಹೋರಾಟಗಾರ ಪ್ರೊ. ಆನಂದ್ ತೇಲ್ತುಂಬ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೀವಮಾನ ಸಾಧನೆಗಾಗಿ ನೀಡುವ ಪ್ರತಿಷ್ಠಿತ ‘ಬಸವ ಪ್ರಶಸ್ತಿ’ಯನ್ನು ಸ್ವೀಕಕರಿಸಿ ಮಾತನಾಡಿದ ಅವರು, ‘ಕರ್ನಾಟಕ ಸರಕಾರ ನೀಡಿರುವ ಬಸವ ಪುರಸ್ಕಾರ ನನಗೆ ವೈಯಕ್ತಿಕವಾಗಿ ನೀಡಿದ ಪ್ರಶಸ್ತಿಯಲ್ಲ. ಈ ಜಗತ್ತನ್ನು ಜನರಿಗೆ ಸ್ವಲ್ಪ ಉತ್ತಮವಾಗಿಸಲು ಬಿಡುವಿಲ್ಲದೆ ದುಡಿಯುತ್ತಿರುವ ಅಸಂಖ್ಯಾತ ಹೋರಾಟಗಾರರಿಗೆ ಈ ಗೌರವ ಸಲ್ಲುತ್ತದೆ ಎಂದು ಬಣ್ಣಿಸಿದರು.
ನಾನು ನಿಮೆಗೆಲ್ಲರಿಗೂ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಮತ್ತು ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜನರಿದ್ದರೆ ಸರಕಾರ ಇರಲು ಸಾಧ್ಯ. ಈ ರೀತಿಯ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ನಾನು ಇದುವರೆಗೂ ಭಾಗಿಯಾಗಿರಲಿಲ್ಲ ಎಂದು ಅವರು ತಿಳಿಸಿದರು.
ಬಸವಣ್ಣ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನಾನು ಪಡೆಯುತ್ತಿರುವುದಂತೂ ನನಗೆ ಇನ್ನೂ ಸಂತೋಷವುಂಟು ಮಾಡಿದೆ. ನಾನು ಸುಮಾರು 20 ವರ್ಷಗಳ ಹಿಂದೆ ಬಸವಣ್ಣನವರ ವಚನಗಳನ್ನು ಓದಿದ್ದೆ. ಇದರ ಜೊತೆ ಬಸವಣ್ಣ ಕುರಿತ ಕೆಲ ಸಾಹಿತ್ಯವನ್ನೂ ಓದಿದ್ದೆ. ಹನ್ನೆರಡೆ ಶತಮಾನದಿಂದ ಇದುವರೆಗೂ ಬಸವಾದಿ ಶರಣರ ಚಿಂತನೆ ಹರಿದು ಬಂದಿದೆ ಎಂದು ಅವರು ನುಡಿದರು.
ನನಗೆ ತಿಳಿದ ಮಟ್ಟಿಗೆ, ಬಸವಾದಿ ಶರಣರು ಲೋಕಾಯತ, ಬುದ್ಧರ ಚಿಂತನಾ ಕ್ರಮವನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಮಾತ್ರವಲ್ಲದೆ ಅಂದು ಚಾಲ್ತಿಯಲ್ಲಿದ್ದಂತ ಎಲ್ಲ ಗೊಡ್ಡು ಸಂಪ್ರದಾಯಗಳನ್ನು ಅವರು ತಿರಸ್ಕರಿಸಿದರು. ಸಾಮಾಜಿಕ ತಾರತಮ್ಯವನ್ನು ತಿರಸ್ಕರಿಸಿದರು. ದೇವರನ್ನೂ ನಿರಾಕರಿಸಿದರು. ಅವರ ಕಲ್ಪನೆಯ ದೇವರು ಭಿನ್ನವಾದುದು ಮತ್ತು ಸಂಕೀರ್ಣವಾದುದು. ದಯೆಯನ್ನು ಅವರು ಉತ್ತೇಜಿಸಿದ್ದಾರೆ. ಇಂತಹವರ ಹೆಸರಿನಲ್ಲಿ ನಾನು ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ಅಪಾರ ಸಂತೋಷವಿದೆ ಎಂದು ಪ್ರೊ.ಆನಂದ್ ತೇಲ್ತುಂಬ್ಡೆ ಬಾವುಕರಾದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ನನಗೆ ಒಂದು ತರದ ವಿಚಿತ್ರ ಭಾವನೆ ಉಂಟಾಗಿದೆ. ಅದೇನೆಂದರೆ ಇವರು ಪ್ರಾಯಶಃ ಬಸವಣ್ಣ ಅವರ ಪರಂಪರೆಯನ್ನೇ ಮುಂದುವರೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರಂತೆ ಸಾಮಾಜಿಕ ನ್ಯಾಯದ ಕುರಿತು ಕಾಳಜಿ ಉಳ್ಳವರು, ಜನರ ಬಗ್ಗೆ ಕಾಳಜಿ ಉಳ್ಳವರು ಇಂದು ವಿರಳವಾಗಿದ್ದಾರೆ. ಕರ್ನಾಟಕದ ಜನರೊಂದಿಗೆ ನನಗೆ ಒಂದು ವಿಶೇಷ ಸಂಬಂಧವಿದೆ ಎಂದು ಅವರು ಹೇಳಿದರು.







