ಶಾಸಕರ ಸಮಸ್ಯೆಗಳು, ನಿರೀಕ್ಷೆಗಳು ಏನು ಎಂಬುದನ್ನು ತಿಳಿದುಕೊಳ್ಳುತ್ತೇವೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ
"ಶಾಸಕರ ಸಭೆ ಬಳಿಕ ಸಚಿವರ ಸಭೆಯನ್ನು ಕರೆಯಲಾಗುವುದು"

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ದಿನದಿಂದಲೂ ಬಿಜೆಪಿಯವರು ಅವುಗಳ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೆ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 4 ಕೋಟಿ ಜನರಿಗೆ ನೀಡುತ್ತಿರುವ ಅನ್ನಭಾಗ್ಯ, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಗೃಹ ಲಕ್ಷ್ಮಿ, 1.66 ಕೋಟಿ ಕುಟುಂಬಗಳಿಗೆ ನೀಡುತ್ತಿರುವ ಗೃಹ ಜ್ಯೋತಿ, ಮಹಿಳೆಯರ ಸಬಲೀಕರಣಕ್ಕೆ ಶಕ್ತಿ, ಯುವಕರಿಗಾಗಿ ಯುವನಿಧಿ ಈ ಐದು ಗ್ಯಾರಂಟಿಗಳು ಬೇಡ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.
ಎಲ್ಲ ಶಾಸಕರ ಜೊತೆ ಚರ್ಚೆ:
ಎರಡು ದಿನಗಳಿಂದ ಮೈಸೂರು ಹಾಗೂ ಬೆಂಗಳೂರು ವಿಭಾಗದ ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ. ನಾಳೆಯೂ ಶಾಸಕರೊಂದಿಗೆ ಸಭೆ ಮುಂದುವರೆಯಲಿದೆ. ಆನಂತರ, ಸೋಮವಾರದಿಂದ ಆರು-ಎಳು ದಿನ ಶಾಸಕರನ್ನು ಭೇಟಿ ಮಾಡುತ್ತೇನೆ. ಶಾಸಕರ ಸಭೆ ಬಳಿಕ ಸಚಿವರ ಸಭೆಯನ್ನು ಕರೆಯಲಾಗುವುದು. ಆನಂತರ, ಸಂಸದರು, ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.
ಎರಡು ವರ್ಷಗಳಿಂದ ನಮ್ಮ ಶಾಸಕರು ಅವರವರ ಕ್ಷೇತ್ರಗಳಲ್ಲಿ ಏನು ಕೆಲಸ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟಂತಹ ಭರವಸೆಗಳನ್ನು ಯಾವ ರೀತಿ ಅನುಷ್ಠಾನ ಮಾಡಲಾಗಿದೆ. ಬ್ಲಾಕ್ ಕಾಂಗ್ರೆಸ್ ಸಮಿತಿಗಳು, ವಿಧಾನಸಭಾವಾರು ಸಮಿತಿಗಳ ಅಧ್ಯಕ್ಷರ ಸಭೆ ನಡೆಸಲಾಗುವುದು ಎಂದು ಸುರ್ಜೆವಾಲಾ ತಿಳಿಸಿದರು.
ಶಾಸಕರ ಸಮಸ್ಯೆಗಳು, ನಿರೀಕ್ಷೆಗಳು ಏನು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಸರಕಾರಕ್ಕೂ ಕೆಲವು ಇತಿಮಿತಿಗಳಿರುತ್ತವೆ. ನಾವು ಅವರ ನಿರೀಕ್ಷೆ, ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತೇವೆ. ಅದೇ ರೀತಿ, ಮುಂಚೂಣಿ ಘಟಕಗಳಾದ ಯುವ ಕಾಂಗ್ರೆಸ್, ಎನ್ಎಸ್ಯುಐ, ಸೇವಾದಳ, ಮಹಿಳಾ ಕಾಂಗ್ರೆಸ್, ಎಸ್.ಸಿ, ಎಸ್.ಟಿ, ಒಬಿಸಿ, ಅಲ್ಪಸಂಖ್ಯಾತರು, ರೈತರ ಘಟಕಗಳ ಕಾರ್ಯವೈಖರಿ ಯಾವ ರೀತಿಯಿದೆ, ಸಂಘಟನಾತ್ಮಕವಾಗಿ ಏನೆಲ್ಲ ಬದಲಾವಣೆಗಳು ಮಾಡಬಹುದು ಎಂಬುದರ ಕುರಿತು ಮಾಹಿತಿ ಪಡೆಯುತ್ತೇವೆ ಎಂದು ಅವರು ಹೇಳಿದರು.
‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಆದರೆ, ಜಿಲ್ಲಾ ಕಾಂಗ್ರೆಸ್ ಸಮಿತಿಗಳಲ್ಲಿ ಸರಕಾರ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬಂದಲ್ಲಿ ಅಂತಹ ಕಡೆ ಬದಲಾವಣೆಗಳನ್ನು ಮಾಡುತ್ತೇವೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಯಾವುದೆ ಅನುದಾನದ ಕೊರತೆಯಿಲ್ಲ ಎಂದು ಈಗಾಗಲೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ’
-ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
"ಕೇಂದ್ರ ಸರಕಾರ ದೇಶದ ಜನಸಾಮಾನ್ಯನ ಪರಿಸ್ಥಿತಿ ಜರ್ಜರಿತಗೊಳಿಸಿದೆ"
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದಾಗಿ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ದಿನ ಬಳಕೆಯ ವಸ್ತುಗಳಿಗೆ ಕೆಲವೇ ದಿನಗಳಲ್ಲಿ ‘ಝಡ್ ಪ್ಲಸ್’ ಭದ್ರತೆ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಹೆದ್ದಾರಿಗಳ ಟೋಲ್ ನಿಂದ ರೈಲ್ವೇ ಪ್ರಯಾಣ ದರದ ತನಕ, ಅಡುಗೆ ಅನಿಲ ಸಿಲಿಂಡರ್ ನಿಂದ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ದೇಶದ ಜನ ಸಾಮಾನ್ಯನ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಜರ್ಜರಿತಗೊಳಿಸಿದೆ. ಮೋದಿ ಹಾಗೂ ಬಿಜೆಪಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕ್ರೂರ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರೇ ಇದು ಆಡಳಿತ ನಡೆಸುವ ಮಾದರಿಯಲ್ಲ ಬದಲಾಗಿ ಹೆದ್ದಾರಿಗಳ್ಳತನ. ರೈಲ್ವೇ ಹಳಿಗಳ, ಹೆದ್ದಾರಿಗಳ ಮೂಲಕ ನಡೆಸುತ್ತಿರುವ ದರೋಡೆ. ಸಾರ್ವಜನಿಕವಾಗಿ ಜನರನ್ನು ಪಿಕ್ ಪಾಕೆಟ್ ಮಾಡುವ ಷಡ್ಯಂತ್ರ. ಭಾರತೀಯ ಜೇಬ್ ಕಾಟೋ ಪಾರ್ಟಿ (ಭಾರತೀಯ ಜನರ ಜೇಬು ಕತ್ತರಿಸುವ ಪಕ್ಷ) ಎಂದು ಬಿಜೆಪಿಯನ್ನು ವ್ಯಾಖ್ಯಾನಿಸಬಹುದು. ಕೂಡಲೇ ಬಿಜೆಪಿಯು ರೈಲ್ವೇ ಪ್ರಯಾಣ ದರ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.
ಜು.1ರಿಂದ ರೈಲ್ವೇ ಪ್ರಯಾಣ ದರಗಳನ್ನು ಹೆಚ್ಚಳ ಮಾಡಿ ಸುಮಾರು 700 ಕೋಟಿ ರೂ.ಗಳಷ್ಟು ಹೊರೆಯನ್ನು ಜನರ ಮೇಲೆ ಹಾಕಲಾಗುತ್ತಿದೆ. ಎ.1ರಂದು ಟೋಲ್ ಬೆಲೆ ಏರಿಕೆಯ ಕೊಡುಗೆ ನೀಡಿತ್ತು. ಈಗ ರೈಲ್ವೇ ಪ್ರಯಾಣ ದರ ಏರಿಕೆ ಮಾಡಿ ಹೊಸ ಕೊಡುಗೆ ನೀಡಿದೆ. ಈಗ ಬೆಂಗಳೂರು ಎಲೆವೇಟೆಡ್ ಕಾರಿಡಾರ್ ಟೋಲ್ ಬೆಲೆಯನ್ನು ಹೆಚ್ಚಳ ಮಾಡಿ ಬರೆ ಹಾಕಿದೆ ಎಂದು ಸುರ್ಜೆವಾಲಾ ಕಿಡಿಗಾರಿದರು.
ಬುಲೆಟ್ ಟ್ರೈನ್ ನೀಡುತ್ತೇವೆ ಎಂದು ರೈಲುಗಳನ್ನೇ ಮಾಯ ಮಾಡಿದ್ದಾರೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ರೈಲಿನಲ್ಲಿ ಜಾಗ ಸಿಗದೆ ನೇತಾಡುತ್ತಿದ್ದ ಪ್ರಯಾಣಿಕರು ರೈಲಿನಿಂದ ಬಿದ್ದು ಮಹಾರಾಷ್ಟ್ರದ ಥಾಣೆಯಲ್ಲಿ ಪ್ರಾಣ ಕಳೆದುಕೊಂಡರು. ಯಾವುದೇ ಸದ್ದು ಗದ್ದಲವಿಲ್ಲದೇ ನಿಧಾನವಾಗಿ ಟೋಲ್ ಹಾಗೂ ರೈಲ್ವೇ ಪ್ರಯಾಣ ದರ ಹೆಚ್ಚಳ ಮಾಡುತ್ತಲೇ ಇದ್ದಾರೆ ಎಂದು ಅವರು ಟೀಕಿಸಿದರು.
ಜನಸಾಮಾನ್ಯರ ಕತ್ತು ಹಿಸುಕುತ್ತಿದ್ದಾರೆ. ಇದೊಂದೆ ಅನಾಹುತ ಮಾಡಿಲ್ಲ. ಅಡುಗೆ ಅನಿಲ ಸಿಲಿಂಡರ್, ತರಕಾರಿ, ದಿನಸಿ ಬೆಲೆ ತಾರಕ್ಕೇರಿದೆ. ಮಧ್ಯಮ ವರ್ಗ ಸೇರಿದಂತೆ ಸಮಾಜದ ಎಲ್ಲ ಸ್ತರದ ಜನರು ಈ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಅಚ್ಚೇದಿನ್ ರೈಲುಗಳ ಮಂಗಮಾಯದ ಮೂಲಕ ಪ್ರಾರಂಭವಾಗಿದೆ. ವಿಕಾಸದಿಂದ ವಿನಾಶದ ಕಡೆಗೆ ದೇಶ ಹೆಜ್ಜೆ ಹಾಕುತ್ತಿದೆ ಎಂದು ಅವರು ಹೇಳಿದರು.
2024ರ ಎ.1ರಿಂದ 2025ರ ಎ.31ರ ವರೆಗಿನ ರೈಲ್ವೇ ಪ್ರಯಾಣಿಕರ ಅಂಕಿ ಅಂಶಗಳನ್ನು ತೆಗೆದುಕೊಂಡರೆ 715 ಕೋಟಿ ಪ್ರಯಾಣ ಒಂದು ವರ್ಷದಲ್ಲಿ ದಾಖಲಾಗಿದೆ. 2023-24 ರಲ್ಲಿ ನೈಋತ್ಯ ರೈಲ್ವೇಯ ಪ್ರಯಾಣಿಕರ ಸಂಖ್ಯೆ 2 ಕೋಟಿ 48 ಲಕ್ಷ. 2.56 ಲಕ್ಷ ಕೋಟಿ ರೂ. ವಹಿವಾಟು ನಡೆಸಿದ್ದು 3 ಸಾವಿರ ಕೋಟಿ ರೂ. ನಿವ್ವಳ ಲಾಭ ಮಾಡಿದೆ. ರೈಲ್ವೇ ಅಪಘಾತದಿಂದ 2.60 ಲಕ್ಷ ಜನರು ದೇಶದಲ್ಲಿ ಸತ್ತಿದ್ದಾರೆ. ಹಿರಿಯ ನಾಗರಿಕರಿಗೆ ರೈಲ್ವೇ ರಿಯಾಯಿತಿ ಕಿತ್ತುಕೊಳ್ಳಲಾಗಿದೆ. ಬ್ಲಾಂಕೆಟ್ ನೀಡುವುದಕ್ಕೆ ಹೆಚ್ಚುವರಿ ಹಣ ನೀಡಬೇಕಾಗಿದೆ ಎಂದು ಸುರ್ಜೆವಾಲಾ ತಿಳಿಸಿದರು.
ಕಳೆದ 10 ವರ್ಷಗಳಲ್ಲಿ ಶೇ.100ರಷ್ಟು ಟಿಕೆಟ್ ದರವನ್ನು ಕೇಂದ್ರ ಸರಕಾರ ಏರಿಕೆ ಮಾಡಿತ್ತು. 2014 ರಲ್ಲಿ ಇಡೀ ದೇಶದ ವಾರ್ಷಿಕ ಟೋಲ್ ಸಂಗ್ರಹ 17,700,59 ಕೋಟಿ ರೂ.ಗಳು. ಆದರೆ ಈಗ 85 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಲೂಟಿ ಮಾಡಲಾಗುತ್ತಿದೆ. ಇದನ್ನೇ ಬಿಜೆಪಿ ದೇಶದ ಜನರಿಗೆ ನೀಡಿರುವ ಕೊಡುಗೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಜನರಿಂದ ಕಳೆದ ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಟೋಲ್ ಮೂಲಕವೇ ಸಂಗ್ರಹ ಮಾಡಲಾಗಿದೆ. 2024 ರಲ್ಲಿ 4.86 ಸಾವಿರ ಕೋಟಿ ರೂ. ಟೋಲ್ ಅನ್ನು ಕರ್ನಾಟಕದ ಜನ ತೆತ್ತಿದ್ದಾರೆ. ಹೊಸೂರು ಟೋಲ್ ಪ್ಲಾಜಾದಲ್ಲಿ ಮತ್ತೆ ಕೇಂದ್ರ ಸರಕಾರ ಟೋಲ್ ಬೆಲೆ ಹೆಚ್ಚಳ ಮಾಡಿದೆ ಎಂದು ಸುರ್ಜೆವಾಲಾ ಕಿಡಿಗಾರಿದರು.
ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಉಪಾಧ್ಯಕ್ಷರಾದ ಬಿ.ಎಲ್.ಶಂಕರ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಉಪಸ್ಥಿತರಿದ್ದರು.







