ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯುವುದಿಲ್ಲ: ಅಬಕಾರಿ ಸಚಿವ ತಿಮ್ಮಾಪುರ

ಬೆಳಗಾವಿ, (ಸುರ್ವಣ ವಿಧಾನಸೌಧ): ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಅವಶ್ಯಕವಿರುವ ಲೈಸನ್ಸ್ ನೀಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.
ಗುರುವಾರ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಾಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರಕಾರ ಹೊಸದಾಗಿ ಮದ್ಯದಂಗಡಿ ತೆರೆಯುವುದಾಗಲಿ, ಇಲ್ಲವೆ ಪರವಾನಗಿ ನೀಡುವ ಪ್ರಸ್ತಾವನೆ ಇಟ್ಟುಕೊಂಡಿಲ್ಲ. ಈ ಸಂಬಂಧದ ಕೆಲವು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಪ್ರಸ್ತುತ 3981 ಸಿಎಲ್-2, ಅದೇ ರೀತಿ 3631 ಸಿಎಲ್-9, 2465 ಸಿಎಲ್-7 ಸನ್ನದ್ದುದಾರರಿದ್ದಾರೆ. ಸಿಎಲ್-2 ಸನ್ನದ್ದುದಾರರಿಂದ 208.91 ಕೋಟಿ ರೂ., ಸಿಎಲ್-9 ಸನ್ನದ್ದುದಾರರಿಂದ 232.46 ಕೋಟಿ ರೂ., ಸಿಎಲ್-7 ಸನ್ನದ್ದುದಾರರಿಂದ 152.81ಕೋಟಿ ರೂ. ವಾರ್ಷಿಕ ಶುಲ್ಕ ಪಡೆದುಕೊಳ್ಳಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಅಂಗಡಿ ಮತ್ತಿತರ ಕಡೆಗಳಲ್ಲಿ ಮದ್ಯದ ಅಂಗಡಿಗಳನ್ನು, ಮದ್ಯವನ್ನು ಮಾರಾಟ ಮಾಡುತ್ತಾರೆ. ಇದನ್ನು ತಪ್ಪಿಸಲು ಸಿಎಲ್-7 ಕೆಲವು ವಿನಾಯಿತಿಗಳನ್ನು ನೀಡಲಾಗಿದೆಯೇ ಹೊರತು ಸರಕಾರ ಮದ್ಯಪಾನಕ್ಕೆ ಎಲ್ಲಿಯೂ ಉತ್ತೇಜನ ನೀಡಿಲ್ಲ ಎಂದು ತಿಮ್ಮಾಪುರ ವಿವರಿಸಿದರು.







