ಜಾತಿಗಣತಿ ವರದಿ ಅನುಷ್ಠಾನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ.ಕೆ. ಹರಿಪ್ರಸಾದ್

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್
ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ವೇಳೆ ಜಾತಿಗಣತಿ ಮಾಡುವ ಭರವಸೆ ನೀಡಲಾಗಿತ್ತು. ಇಂದಲ್ಲ, ನಾಳೆ ರಾಜ್ಯದಲ್ಲಿ ಆ ವರದಿ ಅನುಷ್ಥಾನಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯನ್ನು ತಡೆಯುತ್ತಿರುವುದು ಯಾರೆಂದು ಗೊತ್ತಿಲ್ಲ. ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತರುವಾಗ ಸಾಕಷ್ಟು ಬದಲಾವಣೆಗಳು, ವಿರೋಧಗಳು ಸಹಜ. ಆದರೆ, ಪಕ್ಷದ ಭರವಸೆಯನ್ನು ದಿಟ್ಟವಾಗಿ ಜಾರಿಗೆ ತರಬೇಕಿದೆ ಎಂದರು.
ಪಕ್ಷದ ಪ್ರಣಾಳಿಕೆಯಲ್ಲಿ ಜಾತಿ ಸಮೀಕ್ಷಾ ವರದಿಯನ್ನು ಬಹಿರಂಗ ಪಡಿಸುವುದಾಗಿ ತಿಳಿಸಲಾಗಿತ್ತು. ಇದನ್ನು ಕೆಲವರು ಒಪ್ಪುವುದಿಲ್ಲ ಎಂದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಮ್ಮ ಪಕ್ಷವು ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆಂಬ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ. ಹಾಗೆಯೇ ಸಮೀಕ್ಷಾ ವರದಿಯೂ ಅನುಷ್ಠಾನಗೊಳ್ಳಲಿದೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.





