‘ಪ್ರತಿಪಕ್ಷಗಳ ಸಭೆ’ ವಿಧಾನಸಭೆಯಲ್ಲಿ ಪ್ರತಿಧ್ವನಿ; ಕಲಾಪವನ್ನು ಪಂಚತಾರಾ ಹೊಟೇಲ್ಗೆ ಶಿಫ್ಟ್ ಮಾಡಿ ಎಂದ ಬಿಜೆಪಿ ಶಾಸಕ
![‘ಪ್ರತಿಪಕ್ಷಗಳ ಸಭೆ’ ವಿಧಾನಸಭೆಯಲ್ಲಿ ಪ್ರತಿಧ್ವನಿ; ಕಲಾಪವನ್ನು ಪಂಚತಾರಾ ಹೊಟೇಲ್ಗೆ ಶಿಫ್ಟ್ ಮಾಡಿ ಎಂದ ಬಿಜೆಪಿ ಶಾಸಕ ‘ಪ್ರತಿಪಕ್ಷಗಳ ಸಭೆ’ ವಿಧಾನಸಭೆಯಲ್ಲಿ ಪ್ರತಿಧ್ವನಿ; ಕಲಾಪವನ್ನು ಪಂಚತಾರಾ ಹೊಟೇಲ್ಗೆ ಶಿಫ್ಟ್ ಮಾಡಿ ಎಂದ ಬಿಜೆಪಿ ಶಾಸಕ](https://www.varthabharati.in/h-upload/2023/07/18/1169195-untitled-3-recovered-recovered-recovered-recovered-recovered-recovered-recovered.webp)
ಬೆಂಗಳೂರು, ಜು. 18: ನಗರದ ಖಾಸಗಿ ಹೊಟೇಲ್ನಲ್ಲಿ ನಡೆಯುತ್ತಿರುವ ‘ವಿರೋಧ ಪಕ್ಷಗಳ ಮುಖಂಡರ ಸಭೆ’ ವಿಚಾರ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು.
ಮಂಗಳವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಎದ್ದು ನಿಂತ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ, ‘ಸ್ಪೀಕರ್ ಅವರೇ ಯಾವುದೇ ಪಕ್ಷಕ್ಕೆ ಸೀಮಿತರಾಗಿಲ್ಲದ ತಾವು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋಗಿದ್ದು ನಿಜವೇ? ಈ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದೆ. ಇದು ಮಾಧ್ಯಮಗಳ ಸೃಷ್ಟಿಯೇ?, ಹೇಗೇ? ನೀವೇ ಸ್ಪಷ್ಟನೆ ಕೊಡಬೇಕು’ ಎಂದು ಆಗ್ರಹಿಸಿದರು.
ಬಳಿಕ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಔತಣಕೂಟಕ್ಕೆ ಆಹ್ವಾನಿಸಿದ್ದರು. ಹೀಗಾಗಿ ನಾನು ಅಲ್ಲಿಗೆ ಹೋಗಿದ್ದೆ. ಔತಣಕೂಟಕ್ಕೆ ಹೋಗುವುದು ತಪ್ಪಲ್ಲವಲ್ಲ. ನಾಳೆ ನೀವು(ವಿಪಕ್ಷ) ಕರೆದರೂ ಔತಣಕೂಟಕ್ಕೆ ಬರುತ್ತೇನೆ. ಸ್ಪೀಕರ್ ಅವರೂ ಮನುಷ್ಯನೇ ಅಲ್ಲವೇ?’ ಎಂದು ಸ್ಪಷ್ಟಣೆ ನೀಡಿದರು.
ಆಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುರೇಶ್ ಕುಮಾರ್, ‘ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಒಂಭತ್ತು ಮಂದಿ ಸಚಿವರೂ ಇಲ್ಲ. ಎಲ್ಲರೂ ಪಂಚತಾರಾ ಹೋಟೆಲ್ನಲ್ಲಿ ಇದ್ದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗಾದರೂ ವಿಧಾನಸಭೆ ಅಧಿವೇಶನ ಕಲಾಪವನ್ನು ಆ ಹೋಟೆಲ್ಗೆ ಸ್ಥಳಾಂತರಿಸಿ ಬಿಡಿ’ ಎಂದು ಹಾಸ್ಯದ ದಾಟಿಯಲ್ಲೇ ತಿರುಗೇಟು ನೀಡಿದರು.
ಇದಕ್ಕೆ ಉತ್ತರಿಸಿದ ಸ್ಪೀಕರ್ ಖಾದರ್ ಅವರು, ‘ನೀವು ಒಂದು ಸಲಹೆ ನೀಡಿದ್ದೀರಿ. ಆದರೆ, ಸದನದ ನಿಯಮಾವಳಿಯಲ್ಲಿ ಹಾಗೇ ಮಾಡಲು ಅವಕಾಶವಿಲ್ಲ’ ಎಂದು ಸ್ಪಷ್ಟಣೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ‘ಮೊದಲ ಸಾಲಿನ ಆಸನದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸುವ 9 ಸಚಿವರು ಗೈರು ಹಾಜರಾಗಿದ್ದಾರೆ. ಸದನದ ಕಲಾಪಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು.
ಬಳಿಕ ಸರಕಾರದ ಪರವಾಗಿ ಎದ್ದುನಿಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ನಾನು ಸೇರಿದಂತೆ ಮೂರ್ನಾಲ್ಕು ಮಂದಿ ಸಚಿವರು ಸದನದಲ್ಲಿದ್ದೇವೆ. ನೀವು(ಪ್ರತಿಪಕ್ಷಗಳು) ಹೇಳುವ ವಿಚಾರವನ್ನು ನಾವು ದಾಖಲಿಸಿಕೊಂಡು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇವೆ’ ಎಂದು ಸಮಜಾಯಿಷಿ ನೀಡಿದರು. ಆ ಬಳಿಕ ಸ್ಪೀಕರ್ ಖಾದರ್ ಅವರು ಆಯವ್ಯಯದ ಮೇಲಿನ ಚರ್ಚೆಗೆ ಅವಕಾಶ ಕಲ್ಪಿಸಿದರು.