ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧಿ ಕೇಂದ್ರಗಳ ಸ್ಥಗಿತ ಆದೇಶ ರದ್ದು; ರಾಜ್ಯ ಸರ್ಕಾರಕ್ಕೆ ಹಿನ್ನಡೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಜನೌಷಧಿ ಕೇಂದ್ರಗಳನ್ನು ಮುಚ್ಚುವಂತೆ ನಿರ್ದೇಶಿಸಿ ಕಳೆದ ಮೇ 14ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಧಾರವಾಡ ಪೀಠ ರದ್ದುಪಡಿಸಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ಎಲ್. ರಾಕೇಶ್ ಮಹಾಲಿಂಗಪ್ಪ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ವಿಸ್ತೃತ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಪೀಠ, ಬಡವರಿಗೆ ನೀಡಲಾಗುವ ಔಷಧಿಗಳನ್ನು ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ನೀಡುತ್ತಿರಲಿ, ಅದರಲ್ಲಿ ಸರ್ಕಾರದ ಒಂದು ವಿಭಾಗವು ಹಸ್ತಕ್ಷೇಪ ಮಾಡಲು ನ್ಯಾಯಾಲಯ ಅನುಮತಿ ನೀಡುವುದಿಲ್ಲ ಎಂದು ಮೌಖಿಕವಾಗಿ ನುಡಿಯಿತು.
ಅರ್ಜಿದಾರರ ವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಜನೌಷಧಿ ಕೇಂದ್ರಗಳ ಮಾಲೀಕರ ಜತೆ ಸಮಾಲೋಚಿಸದೆ ಅಥವಾ ಪೂರ್ವ ಎಚ್ಚರಿಕೆ ನೀಡದೆ ತರಾತುರಿಯಲ್ಲಿ ಸರ್ಕಾರ ಈ ಆದೇಶ ಜಾರಿಗೊಳಿಸಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಒಂದು ಸಣ್ಣ ಕೇಂದ್ರವು ಉಚಿತ ಔಷಧ ವಿತರಣೆಗೆ ಅಡ್ಡಿಯಾಗುತ್ತಿದೆ ಎಂದು ಸರ್ಕಾರ ಹೇಳುವುದನ್ನು ಒಪ್ಪಲಾಗದು. ಸರ್ಕಾರ ಮೊದಲಿಂದಲೂ ಉಚಿತವಾಗಿ ಔಷಧ ನೀಡುತ್ತಿದೆ. ಜನೌಷಧಿ ಕೇಂದ್ರಗಳಿಂದ ಸರ್ಕಾರದ ಉದ್ದೇಶಕ್ಕೆ ಅಡ್ಡಿಯಾಗುತ್ತಿಲ್ಲ, ಸರ್ಕಾರ ಮತ್ತು ಅರ್ಜಿದಾರರಿಬ್ಬರೂ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿವೆ ಎಂದು ವಿವರಿಸಿದ್ದರು.
ಮೂಲಸೌಕರ್ಯ ಅಭಿವೃದ್ಧಿ, ಔಷಧ ದಾಸ್ತಾನು, ಉಪಕರಣಗಳು ಮತ್ತು ಪೀಠೋಪಕರಣಗಳು, ಸಿಬ್ಬಂದಿ ವೇತನಗಳು, ಜನೌಷಧಿ ಕೇಂದ್ರ ನಡೆಸುವ ಉದ್ದೇಶಕ್ಕಾಗಿ ಅಗತ್ಯ ಪರವಾನಗಿ ಹಾಗೂ ಅನುಮತಿ ಪಡೆಯಲು ಅರ್ಜಿದಾರರು ಸಾಕಷ್ಟು ಹಣ ವ್ಯಯ ಮಾಡಿದ್ದಾರೆ. ಸರ್ಕಾರದ ವಿವಾದಿತ ಆದೇಶವು ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯ ಅರ್ಜಿದಾರರ ಜೀವನೋಪಾಯದ ಹಕ್ಕು ಮತ್ತು ಸಂವಿಧಾನದ ಪರಿಚ್ಛೇದ 21ರ ಅಡಿಯ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಆಕ್ಷೇಪಿಸಿದ್ದರು.
ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ರಾಜ್ಯ ಸರ್ಕಾರವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧವನ್ನು ಪೂರೈಸಲು ನಿರ್ಧರಿಸಿದೆ. ಆದ್ದರಿಂದ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಕಾರ್ಯಾಚರಣೆ ಅನಿವಾರ್ಯವಲ್ಲ. ಔಷಧಿ ಕೇಂದ್ರಗಳು ಹೊರಗೆ ಕಾರ್ಯನಿರ್ವಹಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಸರ್ಕಾರಿ ಆಸ್ಪತ್ರೆ ಆವರಣದೊಳಗಿನ ಸರ್ಕಾರಿ ಭೂಮಿಯಲ್ಲಿ ಮಾತ್ರ ಕೇಂದ್ರಗಳ ಕಾರ್ಯಾಚರಣೆ ನಿಲ್ಲಿಸಲು ಆದೇಶಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಆಕ್ಷೇಪವೇನು?
ಜನೌಷಧಿ ಕೇಂದ್ರಗಳು ಶೇ 50-90 ರಿಯಾಯಿತಿ ದರದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ. ಇದರಿಂದಾಗಿ ಬಡತನ ರೇಖೆಗಿಂತ ಕೆಳಗಿರುವವರು, ಸ್ಥಿರ ಆದಾಯ ಹೊಂದಿರುವ ಹಿರಿಯ ನಾಗರಿಕರು, ದಿನಗೂಲಿ ಕಾರ್ಮಿಕರು ಮತ್ತು ಔಷಧಿಗಳ ಅಗತ್ಯವಿರುವ ದೀರ್ಘಕಾಲದ ರೋಗಿಗಳಿಗೆ ಆರೋಗ್ಯ ಸೇವೆ ಲಭ್ಯವಾಗುತ್ತದೆ. ಆದ್ದರಿಂದ, ಇದು ಯಾವುದೇ ರೀತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಿಗೆ ಜನೌಷಧಿ ಕೇಂದ್ರಗಳನ್ನು ಮುಚ್ಚುವುದು ನಾಗರಿಕರ ಆರೋಗ್ಯದ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.







