ರಾಜ್ಯ ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯತೆ ಸಾಧಿಸಲು ರಾಜಕೀಯ ವ್ಯವಹಾರಗಳ ಸಮಿತಿ ರಚನೆ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ರಾಜ್ಯ ಸರಕಾರ ಹಾಗೂ ಪಕ್ಷದ ನಡುವೆ ಸಮನ್ವಯತೆ ಸಾಧಿಸಲು ಶೀಘ್ರದಲ್ಲಿಯೇ ರಾಜಕೀಯ ವ್ಯವಹಾರಗಳ ಸಮಿತಿ ಸ್ಥಾಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಭವನದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ನಿರ್ಮಾಣ ಶ್ರಮಿಕರ ಸಂಕಲ್ಪ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವ್ಯವಹಾರಗಳ ಸಮಿತಿ ಎಂಬುವುದು ಎಲ್ಲ ರಾಜ್ಯದಲ್ಲೂ ಇದೆ. ಕರ್ನಾಟಕದಲ್ಲೂ ಪಕ್ಷ ಮತ್ತು ಸರಕಾರದ ಮಧ್ಯೆ ಸಮನ್ವಯತೆ ಸಾಧಿಸಲು ಸದ್ಯದಲ್ಲೇ ರಚನೆ ಮಾಡುತ್ತೇವೆ.ಈ ಸಂಬಂಧ ಪಕ್ಷದ ಹಿರಿಯರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎಂದು ಮಾಹಿತಿ ನೀಡಿದರು.
ತುಳುಭಾಷೆಗೆ ರಾಜ್ಯದ ಎರಡನೆ ಹೆಚ್ಚುವರಿ ಅಧಿಕೃತ ಭಾಷೆ ಸ್ಥಾನ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾರೋ ಕೆಲವರು ರಾಜಕಾರಣ ಬೆರಸಿ ಮಾತನಾಡುತ್ತಿದ್ದಾರೆ. ಅವರಿಗೆ ತುಳು ಮತ್ತು ಕೊಡವ ಭಾಷೆಯ ಹಿನ್ನೆಲೆ ಅರಿವಿಲ್ಲ. ನಾನು ಸಂಸತ್ತಿನಲ್ಲಿದ್ದಾಗ ಕೊಡವ ಮತ್ತು ತುಳು ಭಾಷೆಯನ್ನು ಸಂವಿಧಾನದ ಪರಿಚ್ಛೇದ ಎಂಟಕ್ಕೆ ಸೇರಿಸಬೇಕೆಂದು ಚರ್ಚಿಸಲಾಗಿತ್ತು. ಈಗ ಬಹಳ ಸಂತೋಷದ ವಿಚಾರ ಎಂದರೆ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ತಿಳಿಸಿದರು.
ತುಳು ಭಾಷೆ ಮತ್ತು ಕೊಡವ ಭಾಷೆಗೆ ರಾಜ್ಯದ ಎರಡನೆ ಮತ್ತು ಮೂರನೆ ಸ್ಥಾನ ಭಾಷೆ ನೀಡಬೇಕೆಂದು ಬೇಡಿಕೆ ಇತ್ತು. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಈ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ತುಳು ಭಾಷೆ ಕೇವಲ ಭಾಷೆಯಲ್ಲ, ಬಹಳಷ್ಟು ಸಾಹಿತ್ಯಕಾರರು, ಜ್ಞಾನಪೀಠ ಪುರಸ್ಕೃತರು ಕೂಡ ಆ ಭಾಗದಲ್ಲಿ ಇದ್ದಾರೆ. ಆ ಎಲ್ಲ ಮಹನೀಯರಿಗೂ ಕೂಡ ಈ ತೀರ್ಮಾನ ಗೌರವ ಕೊಟ್ಟಂತಾಗಿದೆ ಎಂದರು.






