ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್, ಪೆನ್ಡ್ರೈವ್ ನಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿಲ್ಲ: ಡಿಸಿಪಿ ಸ್ಪಷ್ಟನೆ

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಹಾಗೂ ಪೆನ್ಡ್ರೈವ್ ಪತ್ತೆಯಾಗಿದ್ದು, ಅವುಗಳಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಸಿಟಿಯ ಡಿಸಿಪಿ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆದ ವೇಳೆ ಪ್ರಜ್ವಲ್ ರೇವಣ್ಣ ಅವರ ಬಳಿ ರೆಡ್ಮಿ ಫೋನ್, ಚಾರ್ಜರ್, ಸಿಮ್, ಪೆನ್ಡ್ರೈವ್, ಡೈರಿ ಪತ್ತೆ ಆಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಿಸಿಬಿ ದೂರು ದಾಖಲಿಸಿದೆ. ಆದರೆ , ಪೆನ್ಡ್ರೈವ್ನಲ್ಲಿ ವಿಡಿಯೋಗಳಿವೆ ಎಂಬ ವರದಿ ಸತ್ಯಕ್ಕೆ ದೂರುವಾದುದು ಎಂದರು.
ಜೈಲಿನಲ್ಲಿ ಸಿಕ್ಕ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿ ತನಿಖಾಧಿಕಾರಿಗಳಿಗೆ ನೀಡಲಾಗಿದೆ. ಮೊಬೈಲ್ಫೋನ್ ಹೇಗೆ ಜೈಲಿನೊಳಗೆ ಬಂತೆಂದು ತನಿಖೆ ನಡೆಸುತ್ತೇವೆ. ಮುಚ್ಚಿದ ಕವರ್ನಲ್ಲಿರುವ ನಿಷೇಧಿತ ವಸ್ತುಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರೈನನ್ನು ವಿಚಾರಣೆ ನಡೆಸಿಲ್ಲ. ಸಾಕ್ಷ್ಯದಾರಗಳು ಬಂದ ಬಳಿಕ ಆರೋಪಿಗಳ ವಿಚಾರಣೆ ನಡೆಸಲಾಗುತ್ತದೆ. ಜೈಲಿನಲ್ಲಿ ಜಾಮರ್ ಇದ್ದರೂ 2ಜಿ , 3ಜಿ ನೆಟ್ವರ್ಕ್ಗಳು ಸಿಗುತ್ತಿವೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ರೆಡ್ಮಿ ಕಂಪನಿಗೂ ಪತ್ರ ಬರೆಯುತ್ತೇವೆ. ಈಗಾಗಲೇ ಜೈಲಿನಲ್ಲಿ ಈ ಹಿಂದೆ ಸಿಕ್ಕ ಸಿಮ್ಕಾರ್ಡ್ ಪರಿಶೀಲಿಸಲಾಗಿದ್ದು, ಎಲ್ಲವೂ ನಕಲಿ ಐಡಿ ಮೂಲಕ ತೆಗೆದುಕೊಂಡಿದ್ದಾರೆ. ಎಲ್ಲದರ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ನೀಡುತ್ತೇವೆ ಎಂದು ಅವರು ಹೇಳಿದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್ನಲ್ಲಿ ಮೊಬೈಲ್, ಪೆನ್ಡ್ರೈವ್ ಹಾಗೂ ಡೈರಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಈ ಮೊಬೈಲ್ ಮತ್ತು ಪೆನ್ಡ್ರೈವ್ಗಳನ್ನು ಪರಿಶೀಲಿಸಿದಾಗ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ವರದಿಗಳನ್ನು ಪೊಲೀಸರು ಅಲ್ಲಗಳೆದಿದ್ದಾರೆ.
ಕಾರಾಗೃಹದಲ್ಲಿ ಫೋನ್, ಪೆನ್ಡ್ರೈವ್ ಪತ್ತೆ: ಎಫ್ ಐ ಆರ್ ದಾಖಲು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಫೋನ್ ಹಾಗೂ ಒಂದು ಪೆನ್ಡ್ರೈವ್ ಪತ್ತೆಯಾಗಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಆಗಸ್ಟ್ 11 ರಂದು ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಆರ್. ಅಂದಾನಿ ಹಾಗೂ ಸಿಬ್ಬಂದಿ ದತ್ತು ಚವ್ಹಾಣ್ ನೇತೃತ್ವದಲ್ಲಿ ನಡೆದ ಅನಿರೀಕ್ಷಿತ ತಪಾಸಣೆ ವೇಳೆ, ಭದ್ರತಾ ವಿಭಾಗದ ಖಾಲಿ ಜಾಗದಲ್ಲಿದ್ದ ಕಲ್ಲುಗಳ ಕೆಳಗೆ ಸಿಮ್ ರಹಿತ ಎರಡು ರೆಡ್ಮಿ ಆಂಡ್ರಾಯ್ಡ್ ಮೊಬೈಲ್ಗಳು ಹಾಗೂ 32 ಜಿಬಿ ಸ್ಟೀಲ್ ಪೆನ್ ಡ್ರೈವ್ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ತಂದವರು ಮತ್ತು ಬಳಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನನ್ವಯ, ಪೊಲೀಸರು ಕರ್ನಾಟಕ ಕಾರಾಗೃಹಗಳ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






