ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡಲು ʼಗ್ರಾಮದನಿʼ ಪಾಡ್ಕಾಸ್ಟ್ ಲೋಕಾರ್ಪಣೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಅ. 4: ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಆಡಳಿತವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಇಲಾಖೆಯ ಎಲ್ಲ ಪತ್ರಗಳನ್ನು ಸರಳೀಕರಣ ಮಾಡಿ ಜನಸಾಮಾನ್ಯರಿಗೆ ಅರ್ಥೈಸುವ ನಿಟ್ಟಿನಲ್ಲಿ ‘ಗ್ರಾಮದನಿ’ ಪಾಡ್ಕಾಸ್ಟ್ ಕಾರ್ಯನಿರ್ವಹಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಹೊಸಹೆಜ್ಜೆ ಇಡುವುದರೊಂದಿಗೆ ಆರಂಭಿಸಿರುವ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಲಿರುವ ‘ಗ್ರಾಮದನಿ’ ಸರಣಿ ಪಾಡ್ಕಾಸ್ಟ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಇಂದಿನ ಮಾಧ್ಯಮದ ಯುಗದಲ್ಲಿ, ಸಮುದಾಯಕ್ಕೆ ಮಾಹಿತಿ ಮತ್ತು ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಹಿತಿ ಕೊರತೆಯನ್ನು ನೀಗಿಸಲು ತಂತ್ರಜ್ಞಾನದ ಸಮರ್ಪಕ ಬಳಕೆ ನೆರವಾಗಬಲ್ಲದು. ‘ಗ್ರಾಮದನಿ’ ಅಕ್ಷರಶಃ ‘ಗ್ರಾಮೀಣ ಕರ್ನಾಟಕದ ಧ್ವನಿ’ಯಾಗಲಿದ್ದು, ಇದು ಕೇವಲ ಮಾಹಿತಿ ನೀಡುವ ವೇದಿಕೆಯಾಗಿರದೆ ಶಕ್ತಿಯುತ ಅರಿವಿನ ಮಾಧ್ಯಮವಾಗಲಿದೆ ಎಂದು ಅವರು ತಿಳಿಸಿದರು.
ಸಾಮರ್ಥ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆ ಈ ಪಾಡ್ಕಾಸ್ಟ್ನ ಉದ್ದೇಶವಾಗಿದ್ದು, ಚುನಾಯಿತ ಪ್ರತಿನಿಧಿಗಳು, ಕ್ಷೇತ್ರ ಸಿಬ್ಬಂದಿಗಳು/ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಅವರಿಗೆ ಅಗತ್ಯವಾದ ಜ್ಞಾನವನ್ನು ತಲುಪಿಸಲು ಇದು ಸೂಕ್ತ ವೇದಿಕೆಯಾಗಲಿದೆ. ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳಿಗೆ ಸಂಬಂಧಿಸಿದ ನಿಯಮಗಳು, ಪಂಚಾಯತ್ ವ್ಯವಸ್ಥೆಯ ಡಿಜಿಟಲೀಕರಣ ಕುರಿತ ಮಾರ್ಗಸೂಚಿಗಳು, ಪಂಚತಂತ್ರ 2.0 ತಂತ್ರಾಂಶದಲ್ಲಿ ಇಂಡೀಕರಿಸುವ ವಿಧಾನ ಮುಂತಾದ ಹಲವು ಉಪಯುಕ್ತ ಸುತ್ತೋಲೆಗಳು ಮತ್ತು ಮಾರ್ಗಸೂಚಿಗಳನ್ನು ಇಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
‘ಗ್ರಾಮದನಿ’ ಪಾಡ್ಕಾಸ್ಟ್ ಸರಣಿಯು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಹಿತಿ ಪ್ರಸಾರ ಮಾಡುವ ಮತ್ತು ಆಡಳಿತ ಸುಧಾರಣೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಿ. ರಣದೀಪ್, ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಹಾಜರಿದ್ದರು.







