ರಾಷ್ಟ್ರಗೀತೆ ಬಗ್ಗೆ ಕಾಗೇರಿ ಹೇಳಿಕೆ ಶುದ್ಧ ಅಸಂಬದ್ಧ : ಸಚಿವ ಪ್ರಿಯಾಂಕ್ ಖರ್ಗೆ

ವಿಶ್ವೇಶ್ವರ ಹೆಗಡೆ ಕಾಗೇರಿ/ಪ್ರಿಯಾಂಕ್ ಖರ್ಗೆ
ಕಲಬುರಗಿ : ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಬ್ರಿಟಿಷರನ್ನು ಸ್ವಾಗತಿಸಲು ಬರೆಯಲಾಗಿದೆ. ʼವಂದೇ ಮಾತರಂʼ ಅನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು' ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಚಿವ ಖರ್ಗೆ, ಕಾಗೇರಿ ಅವರು ನಮ್ಮ ರಾಷ್ಟ್ರಗೀತೆಯು "ಬ್ರಿಟಿಷ್" ಸ್ವಾಗತಗೀತೆ ಎಂದು ಪ್ರತಿಪಾದಿಸಿದ್ದಾರೆ. ಇದು ಶುದ್ಧ ಅಸಂಬದ್ಧ ಹೇಳಿಕೆ ಎಂದು ಖಂಡಿಸಿದ್ದಾರೆ.
ಮತ್ತೊಂದು ದಿನ, ಮತ್ತೊಂದು ಆರೆಸ್ಸೆಸ್ "ವಾಟ್ಸಾಪ್ ಇತಿಹಾಸ" ಪಾಠ ಎನ್ನುವ ಶೀರ್ಷಿಕೆಯಿಟ್ಟು ಕಾಗೇರಿ ಅವರಿಗೆ ಇತಿಹಾಸದ ಪಾಠ ಮಾಡಿದ್ದಾರೆ.
ʼತಾವು ಇತಿಹಾಸವನ್ನು ಮತ್ತೆ ನೋಡಲು ಬಯಸುವುದಿಲ್ಲ ಎಂದು ಸಂಸದರು ಹೇಳುತ್ತಾರೆ. ಆದರೆ, ಪ್ರತಿಯೊಬ್ಬ ಬಿಜೆಪಿ, ಆರೆಸ್ಸೆಸ್ ನಾಯಕರು, ಕಾರ್ಯಕರ್ತರು ಮತ್ತು "ಸ್ವಯಂಸೇವಕರು" Rashtriya Swayamsevak Sangh (RSS) ಮುಖವಾಣಿ ಸಂಘಟನೆಯ ಸಂಪಾದಕೀಯಗಳನ್ನು ಓದುವ ಮೂಲಕ ಇತಿಹಾಸವನ್ನು ಪುನರ್ ವಿಮರ್ಶಿಸಬೇಕು. ಸಂವಿಧಾನ, ತ್ರಿವರ್ಣ ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಅಗೌರವಿಸುವ ದೊಡ್ಡ ಸಂಪ್ರದಾಯವನ್ನು ಆರೆಸ್ಸೆಸ್ ಹೊಂದಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು, ಈ viRSS ಅನ್ನು ಗುಣಪಡಿಸಬೇಕಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರವೀಂದ್ರನಾಥ್ ಟ್ಯಾಗೋರ್ ಅವರು 1911ರಲ್ಲಿ ʼಭರೋತೋ ಭಾಗ್ಯೋ ಬಿಧಾತʼ ಎಂಬ ಸ್ತುತಿಗೀತೆಯನ್ನು ಬರೆದರು; ಅದರ ಮೊದಲ ಚರಣ 'ಜನ ಗಣ ಮನ'ವಾಯಿತು. ಇದನ್ನು ಮೊದಲು ಡಿಸೆಂಬರ್ 27, 1911 ರಂದು ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಹಾಡಲಾಯಿತು - ರಾಜಮನೆತನಕ್ಕೆ ಗೌರವವಾಗಿ ಅಲ್ಲ ಎಂದು ಉಲ್ಲೇಖಿಸಿದ್ದಾರೆ.
ಇದು "ಭಾರತ ಭಾಗ್ಯ ವಿಧಾತ"ನನ್ನು ವಂದಿಸುತ್ತದೆ ಮತ್ತು ಇದು "ಜಾರ್ಜ್ V, ಜಾರ್ಜ್ VI ಅಥವಾ ಬೇರೆ ಯಾವುದೇ ಜಾರ್ಜ್ ಆಗಿರಲು ಸಾಧ್ಯವೇ ಇಲ್ಲ" ಎಂದು ಸ್ವತಃ ಟ್ಯಾಗೋರ್ ಅವರು 1937 ಮತ್ತು 1939 ರಲ್ಲಿ ಸ್ಪಷ್ಟಪಡಿಸಿದ್ದರು ಎಂದು ಇತಿಹಾಸದ ತುಣುಕುಗಳನ್ನು ಮೆಲುಕು ಹಾಕುವ ಮೂಲಕ ಸಂಸದ ಕಾಗೇರಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.







