ಮಹಾತ್ಮ ಗಾಂಧಿಯನ್ನು ಹಿಂಸೆಯ ಪ್ರತಿಪಾದಕರನ್ನಾಗಿ ಚಿತ್ರಿಸುತ್ತಿರುವ ಬಿಜೆಪಿ : ಪ್ರಿಯಾಂಕ್ ಖರ್ಗೆ

"ಅಂದು - ಗೋಡ್ಸೆಯಿಂದ ಗಾಂಧಿ ಹತ್ಯೆ; ಇಂದು - ಗೋಡ್ಸೆವಾದಿಗಳಿಂದ ಗಾಂಧಿವಾದದ ಹತ್ಯೆ"
ಬೆಂಗಳೂರು : ʼಮಹಾತ್ಮನ ಮಹತ್ವ ಅರಿಯದ ಆರೆಸ್ಸೆಸ್ ಹಾಗೂ ಬಿಜೆಪಿ ಮಹಾತ್ಮ ಗಾಂಧಿಯವರನ್ನು ಹಿಂಸೆಯ ಪ್ರತಿಪಾದಕರನ್ನಾಗಿ ಚಿತ್ರಿಸಿ ಜಾಹೀರಾತು ನೀಡುವ ಮೂಲಕ ಮತ್ತೊಮ್ಮೆ ಮಹಾತ್ಮ ಗಾಂಧೀಜಿಗೆ ಅವಮಾನಿಸಿದೆʼ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ʼಅಂದು - ಗೋಡ್ಸೆಯಿಂದ ಗಾಂಧಿ ಹತ್ಯೆ. ಇಂದು - ಗೋಡ್ಸೆವಾದಿಗಳಿಂದ ಗಾಂಧಿವಾದದ ಹತ್ಯೆ. ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಪ್ರಬಲವಾಗಿ ನೀಡಿದ್ದವರು ಮಹಾತ್ಮ ಗಾಂಧಿ. ಗಾಂಧಿ ಎಂದಿಗೂ ಅವರ ಕೈಲಿದ್ದ ಕೋಲನ್ನು ಎತ್ತಿ ಹಲ್ಲೆಗೆ ಬಳಸಿದವರಲ್ಲ, ಗಾಂಧಿ ಎಂದಿಗೂ ಸುಳ್ಳಿನ ಮಾರ್ಗ ತೋರಿದವರಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
ʼಮಹಾತ್ಮ ಗಾಂಧಿಯವರನ್ನು ದೈಹಿಕವಾಗಿ ಮುಗಿಸಿಹಾಕಿದ್ದಲ್ಲದೆ ಈಗ ಅವರ ಸಿದ್ದಾಂತವನ್ನೂ ಮುಗಿಸಿಹಾಕುವ ಕೆಲಸಕ್ಕೆ ಕೈ ಹಾಕಿರುವ ಬಿಜೆಪಿಯಿಂದ ಗಾಂಧೀಜಿಯನ್ನು ಮತ್ತು ಅವರ ತತ್ವಗಳನ್ನು ನಾವು ರಕ್ಷಿಸಬೇಕಿದೆʼ ಎಂದು ಹೇಳಿದ್ದಾರೆ.
Next Story







