ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತುಹಾಕಲು ‘ಶೂನ್ಯ ಸಹಿಷ್ಣುತೆಯ ನೀತಿ’ ಜಾರಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತುಹಾಕುವ ಉದ್ದೇಶದಿಂದ ‘ಶೂನ್ಯ ಸಹಿಷ್ಣುತೆಯ ನೀತಿ’ಯನ್ನು (ಜಿರೊ ಟಾಲೆರೆನ್ಸ್ ನೀತಿ) ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದು, ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಕೇವಲ ಪೊಲೀಸ್ ಕ್ರಮಕ್ಕೆ ಸೀಮಿತಗೊಳಿಸದೆ, ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವದೊಂದಿಗೆ ವ್ಯಾಪಕ ಜನಾಂದೋಲನವಾಗಿ ರೂಪಿಸಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ-2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತಿಕ ಸಾಮಾರ್ಥ್ಯ ಕ್ಕೆ ಅನುಗುಣವಾಗಿ ರಾಜ್ಯದ ಯುವ ಜನರು ಬೆಳೆಯಬೇಕಾದರೆ, ಮಾದಕ ವಸ್ತುಗಳನ್ನು ಸಂಪೂರ್ಣ ನಾಶ ಮಾಡಬೇಕು. ಮಾದಕ ದ್ರವ್ಯದ ಜಾಲದ ಸುಳಿವು ಕಂಡು ಬಂದರೆ ಪೊಲೀಸರಿಗೆ, ಶಿಕ್ಷಕರಿಗೆ, ಪೋಷಕರಿಗೆ ಅಥವಾ ನೆರಹೊರೆಯವರಿಗೆ ತಿಳಿಸಬೇಕು ಎಂದರು.
ಗೃಹ ಇಲಾಖೆ ಜಾರಿಗೆ ತಂದಿರುವ ‘ಆಪರೇಷನ್ ರೈಸ್’(ರೆಫ್ಯೂಸ್, ಇನ್ಫಾರ್ಮ್, ಸಪೋರ್ಟ್, ಎಂಪವರ್) ಕಾರ್ಯಕ್ರಮ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ. ಯುವಜನರಲ್ಲಿ ಜಾಗೃತಿ ಮೂಡಿಸಲು ವಿಶೇಷವಾಗಿ ‘ಬೇಡ ಬ್ರೋ’ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು. ಅಭಿಯಾನದಡಿ ಕಾಲೇಜುಗಳು, ಶಾಲೆಗಳು, ವಿಶ್ವವಿದ್ಯಾಲಯಗಳು ಹಾಗೂ ಯುವ ಸಮುದಾಯ ಹೆಚ್ಚಿರುವ ಪ್ರದೇಶಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಡ್ರಗ್ಸ್ ಜಾಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾವಿರಾರು ಕಾರ್ಯಾಚರಣೆಗಳನ್ನು ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ವಿದೇಶಿ ಪ್ರಜೆಗಳ ಮೂಲಕ ನಡೆಯುತ್ತಿರುವ ಅಕ್ರಮ ಡ್ರಗ್ಸ್ ಜಾಲದ ವಿರುದ್ಧವೂ ವಿದೇಶಿಯರ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಮಾದಕ ವಸ್ತುಗಳ ವಿರುದ್ಧದ ಹೋರಾಟ ಕೇವಲ ಪೊಲೀಸ್ ಇಲಾಖೆಯ ಕೆಲಸವಲ್ಲ, ಇದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ನಮ್ಮ ಯುವಜನರ ಭವಿಷ್ಯ ರಕ್ಷಿಸಲು ಸರಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ‘ಬೇಡ ಬ್ರೋ’ ಎಂಬುದು ಕೇವಲ ಅಭಿಯಾನವಲ್ಲ, ಯುವಜನರಿಗೆ ಬದುಕು ಉಳಿಸುವ ಸಾಮಾಜಿಕ ಸಂದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇದುವರೆಗೆ ರಾಜ್ಯಾದ್ಯಂತ 6,651 ಜಾಗೃತಿ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, 5,090 ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಅಭಿಯಾನಗಳು ನಡೆದಿವೆ. ಜೊತೆಗೆ 1,406 ಸಂವೇದನಾಶೀಲ ಪ್ರದೇಶಗಳಲ್ಲಿ ವಿಶೇಷ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮಗಳು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಯುವಜನರು ಹಲವಾರು ಸಮಸ್ಯೆಗಳು ಹಾಗೂ ತಕ್ಷಣದ ಒತ್ತಡವನ್ನು ನಿವಾರಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮೊರೆ ಹೋಗುತ್ತಾರೆ. 18 ರಿಂದ 35 ವರ್ಷದವರು ಸಾಮೂಹಿಕವಾಗಿ ಮಾದಕ ವಸ್ತುಳ ವ್ಯಸನಕ್ಕೆ ದಾಸರಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಉಂಟಾಗುವ ಸಂಘಟಿತ ಅಪರಾಧಗಳಿಗೆ ಮಾದಕ ವಸ್ತುಗಳೇ ಕಾರಣವಾಗುತ್ತಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಹಾಳಾಗುತ್ತಿದೆ ಎಂದರು.
2025ರಲ್ಲಿ 216.93 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, 9,064 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2,611 ಮಾರಾಟಗಾರರ ವಿರುದ್ಧ, 6,455 ಗ್ರಾಹಕರ ವಿರುದ್ಧ, 41 ಮಂದಿ ತಯಾರಕರ ವಿರುದ್ಧ ಪ್ರಕರಣಗಳು ದಾಖಲಿಸಲಾಗಿತ್ತು. 2026ರ ಮೇ ಅಂತ್ಯಕ್ಕೆ 184.72 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, 6,651 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 1,406 ಮಾರಾಟಗಾರರ ವಿರುದ್ಧ, 5,090 ಗ್ರಾಹಕರ ವಿರುದ್ಧ, 17 ಮಂದಿ ತಯಾರಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ನಮ್ಮ ಸಮಾಜವನ್ನು ಮಾದಕ ದ್ರವ್ಯಗಳಿಂದ ಮುಕ್ತಗೊಳಿಸುವವರೆಗೂ ಮಾದಕ ವಸ್ತುಗಳ ವಿರುದ್ಧದ ಸಮರ ನಿಲ್ಲದು.
-ಡಾ. ಎಂ.ಎ. ಸಲೀಂ, ಪೊಲೀಸ್ ಮಹಾನಿರ್ದೇಶಕ






