ಮಾ.1 ರಂದು ಪಿಯುಸಿ ಪರೀಕ್ಷೆ ಕಾರಣ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ: ಕಾಂಗ್ರೆಸ್
ನಮಾಝ್ ಗಾಗಿ ಶುಕ್ರವಾರ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನ ಏರ್ಪಡಿಸಲಾಗಿದೆ ಎಂದ ಬಿಜೆಪಿಗೆ ತಿರುಗೇಟು

ಬೆಂಗಳೂರು: ಮಾರ್ಚ್ 1ನೇ ತಾರೀಖಿನಂದು ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಕಾರಣ ಅ ದಿನದ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ನಮಾಝ್ ಮಾಡುವುದಕ್ಕಾಗಿ ಶುಕ್ರವಾರ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್, "ಸುಳ್ಳು ಅಪಪ್ರಚಾರದ ಮೂಲಕ ಪ್ರಚೋದನೆಗೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಕನಿಷ್ಠ ಮರ್ಯಾದೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಮಾರ್ಚ್ ಒಂದನೇ ತಾರೀಖಿನಂದು ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಕಾರಣ ಅ ದಿನದ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನ ನಡೆಸಲಾಗುತ್ತಿದೆ. ಮಾರನೇ ದಿನ ಶನಿವಾರ ಪಿಯುಸಿ ಪರೀಕ್ಷೆ ಇಲ್ಲದ ಕಾರಣ ಎಸೆಸ್ಸೆಲ್ಸಿ ಪರೀಕ್ಷೆ ಬೆಳ್ಳಿಗೆಯೇ ಆರಂಭವಾಗುತ್ತದೆ. ಪರೀಕ್ಷಾ ಕೇಂದ್ರಗಳ ಕೊರತೆ ಹಾಗೂ ಗೊಂದಲ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದೇವೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ನಮಾಝ್ ಮಾಡುವುದಕ್ಕಾಗಿ ಶುಕ್ರವಾರ ಎಸೆಸ್ಸೆಲ್ಸಿ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಏರ್ಪಡಿಸಲಾಗಿದೆ ಎನ್ನುವ ಬಿಜೆಪಿ ಗಾಂಪರು ಅದೇ ದಿನ ಬೆಳಿಗ್ಗೆ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನಮಾಝ್ ಮಾಡುವ ಅಗತ್ಯವಿಲ್ಲವೇ ಎಂಬುದನ್ನು ಉತ್ತರಿಸಲಿ!
ಈ ಸುಳ್ಳು ಹರಡಲು ಕಾರಣಕರ್ತನಾದ ಮಾಜಿ ಪತ್ರಕರ್ತ!?, ಹಾಲಿ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋನೆಮನೆ ಹೊಟ್ಟೆಗೆ ತಿನ್ನುವುದು ಏನನ್ನು ಎಂಬುದನ್ನು ತಿಳಿಸಲಿ. ಈತ ಮುಖ್ಯಸ್ಥನಾಗಿದ್ದ ಮಾಧ್ಯಮ ಸಂಸ್ಥೆಯೂ ಆತ ಹೇಳಿದ ಸುಳ್ಳನ್ನೇ ಪ್ರಸಾರ ಮಾಡಿದೆ ಎಂದರೆ ಆತ ನಿಜಕ್ಕೂ ಪತ್ರಕರ್ತನಾಗಿ ಮಾಜಿಯಾಗಿದ್ದಾನಾ ಎಂಬ ಅನುಮಾನ ಮೂಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.







