ರಾಹುಲ್ ಗಾಂಧಿ-ಸಿದ್ದರಾಮಯ್ಯನವರ ರಿಮೋಟ್ ಕಂಟ್ರೋಲ್ನಿಂದ ನಡೆಯುವ ಸರಕಾರ : ಆರ್.ಅಶೋಕ್

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಚನೆಯಾದ ಹೊಸ ಸರಕಾರ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ರಿಮೋಟ್ ಕಂಟ್ರೋಲ್ನಿಂದ ನಡೆಯಲಿದೆ. ಇದರಿಂದ ಜನರಿಗೆ ಏನೂ ಹೊಸತು ಸಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿರುವುದು ಹಳೆ ಸಿನಿಮಾದ ಪೋಸ್ಟರ್ ಬದಲಾದಂತಿದೆ. ಮುಖ್ಯಮಂತ್ರಿ ನಿವಾಸದ ಮುಂಭಾಗದ ಫಲಕದಲ್ಲಿ ಹೆಸರು ಬದಲಾಗಿದೆಯೇ ಹೊರತು ಜನರ ಕಷ್ಟಗಳು ನೀಗಿಲ್ಲ. ರಾಜ್ಯಕ್ಕೆ ಹೊಸ ಸಚಿವರು ಸಿಗುತ್ತಾರೆ ಎಂಬ ನಿರೀಕ್ಷೆ ಇದ್ದರೂ, ಹೊಸ ಮುಖಗಳು ಕಂಡಿಲ್ಲ. ಸಿದ್ದರಾಮಯ್ಯನವರ ಮಗ ಯತೀಂದ್ರ ಸಚಿವರಾಗಿ ಬಂದಿದ್ದಾರೆಯೇ ಹೊರತು ಹೊಸದೇನೂ ಇಲ್ಲ ಎಂದರು.
ಮಳೆಯಿಂದಾಗಿ ಬೆಳೆಹಾನಿಯಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿದೆ. ಐಪಿಎಲ್ ಸಂಭ್ರಮಾಚರಣೆಯಲ್ಲಿ ಹನ್ನೊಂದು ಅಮಾಯಕರ ಹತ್ಯೆಯಾಯಿತು. ಭ್ರಷ್ಟಾಚಾರದ ನೋವಿನಿಂದ ಅಧಿಕಾರಿಗಳ ಸಾವು, ಸರ್ಕಾರದ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು, ಮೈಕ್ರೋ ಫೈನಾನ್ಸ್ ಒತ್ತಡದಿಂದ ಜನರ ಸಾವು, ಸಂಬಳ ಸಿಗದೆ ನೌಕರರ ಸಾವು, ಆಸ್ಪತ್ರೆ ಗೋಡೆ ಕುಸಿದು ಬೀದಿ ಬದಿ ವ್ಯಾಪಾರಿಗಳ ಸಾವು, ಬೆಂಗಳೂರು ಸೇರಿದಂತೆ ಎಲ್ಲ ಕಡೆ ರಸ್ತೆಗಳಲ್ಲಿ ಗುಂಡಿಗಳ ಹಾವಳಿ ಹೀಗೆ ಅನೇಕ ಸಮಸ್ಯೆಗಳು ಇನ್ನೂ ಇದೆ. ಜನರು ಉತ್ತಮ ಆಡಳಿತ ಕೇಳಿದರೆ, ಕಾಂಗ್ರೆಸ್ ಪಕ್ಷ ಕುರ್ಚಿಯ ಬದಲಾವಣೆ ಮಾತ್ರ ಮಾಡಿದೆ ಎಂದರು.
ಬೆಂಗಳೂರಿನಲ್ಲಿ ನೂರಾರು ಕಟೌಟ್ಗಳನ್ನು ಅಳವಡಿಸಲಾಗಿದೆ. ಫಲಕ ಹಾಕಬೇಡಿ ಎಂದು ಸಿಎಂ ಹೇಳಿದರೂ ಅವುಗಳನ್ನು ಅಳವಡಿಸಲಾಗಿದೆ. ಅಂದರೆ ಮುಖ್ಯಮಂತ್ರಿ ಏನೇ ಹೇಳಿದರೂ ಅದು ಅನುಷ್ಠಾನವಾಗುವುದಿಲ್ಲ ಎಂಬುದು ಸಾಬೀತಾಗಿದೆ ಎಂದರು.
ಮಹಿಳಾ ವಿರೋಧಿ ಕಾಂಗ್ರೆಸ್ :
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ವಿರೋಧಿಸಿದೆ. ನಿನ್ನೆ ನಡೆದ ಪದಗ್ರಹಣ ಸಮಾರಂಭದಲ್ಲಿ ಒಬ್ಬರೇ ಒಬ್ಬ ಮಹಿಳೆಗೆ ಅವಕಾಶ ನೀಡಿಲ್ಲ. ಕಾಂಗ್ರೆಸ್ ಮಹಿಳೆಯರಿಗೆ ಮೋಸ ಮಾಡಿದೆ ಎಂದರು.
ಪ್ರಮಾಣವಚನದ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಸಂವಿಧಾನದ ಪುಸ್ತಕ ಹಿಡಿದುಕೊಂಡಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಿಎಂಗೆ ಎಲ್ಲ ಅಧಿಕಾರ ನೀಡಿದ್ದಾರೆ. ಆದರೆ ಸಚಿವ ಸಂಪುಟದಲ್ಲಿ ಡಿ.ಕೆ.ಶಿ ಕಡೆಗಿನ ಯಾವುದೇ ಶಾಸಕರು ಇಲ್ಲ. ಅಂದರೆ ಎಲ್ಲವನ್ನೂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ತೀರ್ಮಾನ ಮಾಡಿದೆ. ಡಿ.ಕೆ.ಶಿ ಅವರಿಗೆ ಯಾವುದೇ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ ಈಗಾಗಲೇ ಇ-ಖಾತಾ ಹೆಸರಲ್ಲಿ ದಂಧೆ ನಡೆಯುತ್ತಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದರೆ ಇನ್ನಷ್ಟು ದಂಧೆ ನಡೆಯುತ್ತದೆ. ಸರ್ವರ್ ಡೌನ್ ಎಂದು ಹೇಳಿ ಜನರನ್ನು ವಂಚಿಸಲಾಗುತ್ತಿದೆ. ಲಂಚ ಕೊಟ್ಟರೆ ಮಾತ್ರ ಸರ್ವರ್ ಕೆಲಸ ಮಾಡುತ್ತದೆ ಎಂದು ಹರಿಹಾಯ್ದರು.
ನೇಮಕದ ಬಗ್ಗೆ ಸುಳ್ಳು ಭರವಸೆ
56,000 ಹುದ್ದೆಗಳ ಸರ್ಕಾರಿ ನೇಮಕಾತಿ ಬಗ್ಗೆಯೂ ಸುಳ್ಳು ಹೇಳಲಾಗಿದೆ. ಈ ಹಿಂದೆಯೇ ಇದರ ಬಗ್ಗೆ ತೀರ್ಮಾನವಾಗಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಇಷ್ಟೊಂದು ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ನಲ್ಲಿ ಹಣಕಾಸು ಕೊರತೆ ಇದೆ. ಇಂತಹ ಸ್ಥಿತಿಯಲ್ಲಿ ಹೊಸ ನೇಮಕಾತಿ ಮಾಡಲು ಸಾಧ್ಯವೇ ಇಲ್ಲ ಎಂದರು.
ಕಾಂಗ್ರೆಸ್ ನಿರಾಶ್ರಿತರಿಗೆ ಭಾರತ್ ಜೋಡೊ ಸಂಘಟನೆ
ಭಾರತ್ ಜೋಡೋಗೂ ಸರಕಾರಕ್ಕೂ ಏನು ಸಂಬಂಧವಿದೆ? ಇದರಿಂದ ಕಾಂಗ್ರೆಸ್ನ ನಿರಾಶ್ರಿತರಿಗೆ ಪ್ರಯೋಜನವಾಗಲಿದೆಯೇ ಹೊರತು ಯುವಜನರಿಗೆ ಉಪಯೋಗವಿಲ್ಲ. ಈಗಾಗಲೇ ಗುತ್ತಿಗೆದಾರರಿಗೆ ಬಾಕಿ ಕೊಡಬೇಕಿದೆ. ಆ ಹಣವನ್ನು ಕೊಟ್ಟರೆ ಸಾಕಿತ್ತು. ಉತ್ತರ ಕರ್ನಾಟಕದಲ್ಲಿ ಮಕ್ಕಳು ಶಾಲೆಯ ಒಳಗೆ ಹೋಗದಂತಹ ಸ್ಥಿತಿ ಇದೆ. ಇಂತಹ ಶಾಲೆಗಳನ್ನು ಅಭಿವೃದ್ಧಿ ಮಾಡಿದರೆ ಸಾಕಾಗಿದೆ. ಸುಖಾಸುಮ್ಮನೆ ಘೋಷಣೆಗಳನ್ನು ಮಾಡಿದರೆ ಸಾಲುವುದಿಲ್ಲ. ಅಬಕಾರಿ ಬಿಟ್ಟರೆ ಎಲ್ಲ ಇಲಾಖೆಗಳಲ್ಲಿ ಆದಾಯ ಕಡಿಮೆಯಾಗಿದೆ. ಯೋಜನೆಗಳನ್ನು ಘೋಷಣೆ ಮಾಡಿ, ಅದನ್ನು ಜಾರಿ ಮಾಡದೆ ನಂತರ ಕೇಂದ್ರ ಸರಕಾರ ಅನುದಾನ ನೀಡಿಲ್ಲ ಎಂದು ಆರೋಪ ಮಾಡುತ್ತಾರೆ ಎಂದು ದೂರಿದರು.
ಹಣಕಾಸು ಶ್ವೇತಪತ್ರ ಮಂಡಿಸಿ
ಕೇರಳಂನ ನೂತನ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ತಮ್ಮ ರಾಜ್ಯದ ಆರ್ಥಿಕ ಸ್ಥಿತಿ- ಗತಿಯ ನೈಜ ಚಿತ್ರಣವನ್ನು ಜನರ ಮುಂದಿಡುವ ಉದ್ದೇಶದಿಂದ ಹಣಕಾಸು ಶ್ವೇತಪತ್ರ ಮಂಡಿಸಿರುವುದು ಸ್ವಾಗತಾರ್ಹ. ಅದೇ ಮಾದರಿಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಕುರಿತು ಶ್ವೇತಪತ್ರ ಮಂಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.






