ಮುಜರಾಯಿ ವ್ಯಾಪ್ತಿಯ ದೇಗುಲಗಳಲ್ಲಿ ನೀರಿನ ಬಾಟಲ್, ಪ್ಲಾಸ್ಟಿಕ್ ನಿಷೇಧ : ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ
ಬೆಂಗಳೂರು : ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ಆಗಸ್ಟ್ 15 ರಿಂದ ನೀರಿನ ಬಾಟಲ್ ಸೇರಿದಂತೆ ಎಲ್ಲ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಎಲ್ಲ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಆದೇಶ ಜಾರಿಗೆ ಎರಡು ತಿಂಗಳು ಸಮಯ ಕೊಡಲಾಗಿದೆ ಎಂದರು.
ಅರ್ಚಕರಿಗೆ ತಸ್ತೀಕ್ ನೇರ ವರ್ಗಾವಣೆ (ಡಿಬಿಟಿ) ಮೂಲಕ ನೀಡುತ್ತೇವೆ. ಈಗ 25,536 ಅರ್ಜಿಗಳ ಪೈಕಿ 14,433 ಸಾವಿರ ಅರ್ಜಿಗಳು ಬಂದಿವೆ. ಉಳಿದವರು ಬೇಗ ಮಾಹಿತಿ ನೀಡಿದರೆ ಅವರಿಗೂ ಡಿಬಿಟಿ ಮೂಲಕ ತಸ್ತೀಕ್ ಹಣ ನೀಡಲಾಗುವುದು ಎಂದ ಅವರು, 15,000 ಎಕರೆ ದೇವಸ್ಥಾನಗಳ ಆಸ್ತಿ ಇಂಡೀಕರಣ ಆಗಿದೆ. ಇನ್ನೂ 20,000 ಎಕರೆ ದೇವಸ್ತಾನಗಳ ಖಾತೆ ಮಾಡಬೇಕಾಗಿದೆ ಎಂದರು.
ಅದೇ ರೀತಿ, ಸೆಕ್ಷನ್ 31/7ರಂತೆ ಮೂರು ತಿಂಗಳ ಒಳಗೆ ಟೆಂಪಲ್ ಆಸ್ತಿಯ ಬಗ್ಗೆ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿದೆ. 3,470 ದಾಖಲೆ ಸೃಷ್ಟಿ ಮಾಡಲಾಗಿದೆ. 40,000 ಆಸ್ತಿಗಳ ಬಗ್ಗೆ ಅಧಿಸೂಚನೆ ಹೊರಡಿಸುತ್ತೇವೆ. ಗ್ರಾಮಾಂತರ ಮತ್ತು ನಗರ ಭಾಗದಲ್ಲಿ ಇರುವ ಮುಜರಾಯಿ ದೇವಾಲಯಗಳ ಆಸ್ತಿಗಳನ್ನು ಪ್ರತ್ಯೇಕ ಸರ್ವೇ ಮಾಡಬೇಕು. ದೇವಸ್ಥಾನ ಹೆಸರಿನಲ್ಲಿ ಖಾತೆ, ಆಸ್ತಿ ಪತ್ರ ದಾಖಲೆಗಳು ಸರಿಯಾಗಿ ಇರದಿದ್ದರೆ ಎಲ್ಲಾ ದೇವಾಲಯದ ಜಾಗ 3 ತಿಂಗಳ ಒಳಗಡೆ ಸರ್ವೇ ಮಾಡಿ ನೋಟಿಫಿಕೇಶನ್ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇನ್ನೊಂದೆಡೆ, ರಾಜ್ಯದ 31 ಜಿಲ್ಲೆಗಳಲ್ಲಿ ಧಾರ್ಮಿಕ ಪರಿಷತ್ ರಚನೆಗೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. 8 ಜಿಲ್ಲೆಯಲ್ಲಿ ಮಾತ್ರ ಧಾರ್ಮಿಕ ಪರಿಷತ್ ರಚನೆಯಾಗಿದ್ದು, ಉಳಿದ ಕಡೆ ಶೀಘ್ರವೇ ಮಾಡಬೇಕು. ಬೇರೆ ಬೇರೆ ರಾಜ್ಯದಲ್ಲಿ ಇರೋ ಮುಜರಾಯಿ ಇಲಾಖೆ ವಸತಿ ಭವನಗಳಲ್ಲಿ 3 ಸ್ಟಾರ್ ಸೌಲಭ್ಯಗಳನ್ನು ನೀಡಲು ನಿರ್ಧಾರ. ತಿರುಪತಿ, ತುಳಜಾಪುರ, ಪಂಡರಾಪುರ ಸೇರಿ ಹಲವು ಕಡೆ ಭವನಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಉಲ್ಲೇಖಿಸಿದರು.
ಚಾಮುಂಡೇಶ್ವರಿ ಬೆಟ್ಟದಲ್ಲಿ ಒತ್ತುವರಿ ಆಗಿದ್ದ 11 ಎಕರೆ ಜಾಗವನ್ನು ತೆರವು ಮಾಡಲಾಗಿದೆ. ಉಳಿದ ಜಾಗ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಬೇರೆ ರಾಜ್ಯದಲ್ಲಿ ಇರುವ ಭವನಗಳ ಕೊಠಡಿ ಬುಕ್ಕಿಂಗ್ ಅನ್ನು ಆನ್ಲೈನ್ ಮೂಲಕ ಜಾರಿ ಮಾಡಲು ವ್ಯವಸ್ಥೆ ರೂಪಿಸಲು ಸೂಚನೆ ನೀಡಲಾಗಿದೆ. ಹೊಸ ಪ್ರಾಧಿಕಾರಗಳ ಸಮಗ್ರ ಯೋಜನೆಗೆ ಕ್ರಮವಹಿಸಲಾಗಿದೆ. ಹುಲಿಗೆಮ್ಮ, ಮಲೆ ಮಹದೇಶ್ವರ, ಘಾಟಿ ಸುಬ್ರಮಣ್ಯ, ರೇಣುಕಾ ಎಲ್ಲಮ್ಮ, ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಮಾಸ್ಟರ್ ಪ್ಲ್ಯಾನ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.