ಕಾಂಗ್ರೆಸ್ ಪಕ್ಷಕ್ಕೆ ಜನಾದೇಶವಿದ್ದರೂ ಸರಕಾರ ಅಸ್ಥಿರಕ್ಕೆ ಬಿಜೆಪಿ-ಜೆಡಿಎಸ್ ಯತ್ನ : ರಣದೀಪ್ ಸುರ್ಜೇವಾಲ

ರಣದೀಪ್ ಸಿಂಗ್ ಸುರ್ಜೇವಾಲ (PTI)
ಬೆಂಗಳೂರು : ‘ಬಿಜೆಪಿಯವರಿಗೆ ಜನಾಭಿಪ್ರಾಯ ಮೂಲಕ ಸರಕಾರವನ್ನು ಅಸ್ಥಿರ ಮಾಡಲು ಆಗುತ್ತಿಲ್ಲ. ಹೀಗಾಗಿ ರಾಜ್ಯಪಾಲರನ್ನು ಬಳಸಿಕೊಂಡು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈಗ ರಾಜಭವನವನ್ನು ಕೇಸರಿ ಭವನವನ್ನಾಗಿ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದಿಲ್ಲಿ ದೂರಿದ್ದಾರೆ.
ಬುಧವಾರ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ‘ಆರೂವರೆ ಕೋಟಿ ಮತದಾರರು ಕಾಂಗ್ರೆಸ್ಗೆ 136 ಸ್ಥಾನಗಳನ್ನು ನೀಡುವ ಮೂಲಕ ಸ್ಥಿರ ಸರಕಾರಕ್ಕೆ ಬೆಂಬಲ ನೀಡಿದ್ದಾರೆ. ಶೇ.43ರಷ್ಟು ಮಂದಿ ಪಕ್ಷದ ಪರವಾಗಿ ಮತ ಚಲಾಯಿಸುವ ಮೂಲಕ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರವು ಜನರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದರೂ ಸರಕಾರವನ್ನು ಅಸ್ಥಿರಗೊಳಿಸುವ ಯತ್ನವನ್ನು ಬಿಜೆಪಿ-ಜೆಡಿಎಸ್ ನಾಯಕರು ಮಾಡುತ್ತಿದ್ದು, ಇದರಲ್ಲಿ ಯಶಸ್ಸು ಕಾಣುವುದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಬಿಜೆಪಿಯವರು ಬೇರೆ ಬೇರೆ ರಾಜ್ಯಗಳಲ್ಲಿ ಸರಕಾರವನ್ನು ಕೆಡವಿದಂತೆ ಕರ್ನಾಟಕದಲ್ಲಿಯೂ ಹಿಂಬಾಗಿಲ ಮೂಲಕ ಕೆಡವಲು ಪ್ರಯತ್ನ ಮಾಡುತ್ತಿದೆ. ಇದಕ್ಕೆ ರಾಜ್ಯಪಾಲರನ್ನು ದಾಳವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇನ್ನು ಕಾನೂನು ರೀತಿಯಲ್ಲಿ ಕಾಂಗ್ರೆಸ್ ಯಾವುದೇ ರೀತಿಯ ಅಪರಾಧ, ಹಗರಣವನ್ನು ಮಾಡಿಲ್ಲ ಎಂಬುದು ಬಿಜೆಪಿಯವರಿಗೂ ಗೊತ್ತು. ಇಲ್ಲದಿದ್ದರೆ ಕಾನೂನು ಹೋರಾಟವನ್ನೇ ಅವರು ನಡೆಸುತ್ತಿದ್ದರು. ಅದು ಬಿಟ್ಟು ವಾಮಮಾರ್ಗ ಅನುಸರಿಸುತ್ತಿರಲಿಲ್ಲ. ಹೀಗಾಗಿ ಪಾದಯಾತ್ರೆ ಎಂಬ ಬೀದಿ ನಾಟಕ ಮಾಡುತ್ತಿದ್ದಾರೆ. ಆದರೆ, ನಾವು ಎಚ್ಚರವಾಗಿಯೇ ಇದ್ದೇವೆ. ನಮ್ಮ ಸರಕಾರವನ್ನು ಕಿಂಚಿತ್ ಸಹ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸುರ್ಜೇವಾಲ ತಿರುಗೇಟು ನೀಡಿದ್ದಾರೆ.
ಕಳೆದ ವರ್ಷ ರಾಜ್ಯದ 223 ತಾಲೂಕುಗಳಲ್ಲಿ ತೀವ್ರ ಬರ ಆವರಿಸಿತ್ತು. ಆದರೆ, ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಜನರ ಬಾಳಿಗೆ ಬೆಳಕಾಗಿ, ಆಸರೆಯಾಗಿ ಬದುಕಿನ ನಿರ್ವಹಣೆ ಮಾಡಲು ಅನುಕೂಲವಾಯಿತು. ಅನ್ನಭಾಗ್ಯ ಯೋಜನೆಯಡಿ 1.27ಕೋಟಿ ಬಡಜನರಿಗೆ ತಲಾ 5 ಕೆಜಿಯಂತೆ ಮಾಸಿಕವಾಗಿ ಸುಮಾರು 650 ಕೋಟಿ ರೂ.ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 5 ಸಾವಿರ ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1ಕೋಟಿ 57ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ನೀಡುತ್ತಿದ್ದು ಇದರ ಮೊತ್ತ 8,260 ಕೋಟಿ ರೂ. ಆಗಿದೆ.
ಶಕ್ತಿ ಯೋಜನೆಯಡಿ ಇದುವರೆಗೆ 250 ಕೋಟಿ ಉಚಿತ ಟಿಕೆಟ್ ಅನ್ನು ಪಡೆದು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದರ ಮೌಲ್ಯ 6 ಸಾವಿರ ಕೋಟಿ ರೂಪಾಯಿ ಆಗಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ 1 ಕೋಟಿ 20 ಲಕ್ಷ ಮನೆಯ ಯಜಮಾನಿಯರಿಗೆ ಮಾಸಿಕವಾಗಿ ತಲಾ 2 ಸಾವಿರ ರೂಪಾಯಿಯಂತೆ ಪ್ರತಿ ತಿಂಗಳು 2280 ಕೋಟಿ ರೂ. ಹಣವನ್ನು ನೇರವಾಗಿ ಅವರ ಖಾತೆಗೆ ಹಾಕಲಾಗುತ್ತಿದೆ. ಇನ್ನು ಯುವ ನಿಧಿ ಯೋಜನೆಯಡಿ 1ಲಕ್ಷ 20 ಸಾವಿರ ಪದವೀಧರ ಹಾಗೂ ಡಿಪ್ಲೊಮಾ ಪದವೀದರರಿಗೆ ಕ್ರಮವಾಗಿ 3ಸಾವಿರ ರೂ. ಹಾಗೂ 1,500ರೂ.ನೇರವಾಗಿ ಹಾಕುತ್ತಿದ್ದೇವೆ. ಈ ಮೂಲಕ ಜನರು ನೆಮ್ಮದಿಯ ಜೀವನ ನಡೆಸಲು ಅನುಕೂಲವನ್ನು ಮಾಡಿಕೊಡಲಾಗುತ್ತಿದೆ. ಈ ಮೂಲಕ ಮಧ್ಯಮ ವರ್ಗದ ಜನರ ಆಶಯವನ್ನು ಕಾಂಗ್ರೆಸ್ ಸರಕಾರ ಪೂರೈಸುತ್ತಾ ಬಂದಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಸುಳ್ಳು ಕಥೆ ಸೃಷ್ಟಿ: ಸರಕಾರದ ಅಭಿವೃದ್ಧಿ ಕೊಡುಗೆ, ಜನಪರ ಯೋಜನೆಗಳನ್ನು ಬಿಜೆಪಿ-ಜೆಡಿಎಸ್ನವರು ಸಹಿಸುತ್ತಿಲ್ಲ. ಹೀಗಾಗಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸುತ್ತಿದ್ದರೂ ಹಗರಣಗಳ ಬಗ್ಗೆ ಸುಳ್ಳು ಕಥೆಯನ್ನು ಸೃಷ್ಟಿ ಮಾಡಿ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅವರು ದೂರಿದ್ದಾರೆ.
1.20ಲಕ್ಷ ಕೋಟಿ ರೂ.ಮೀಸಲು: ಈ ಗ್ಯಾರಂಟಿ ಯೋಜನೆಗಳ ಜತೆಗೆ ಕಾಂಗ್ರೆಸ್ ಸರಕಾರವು 3.71 ಲಕ್ಷ ಸಾವಿರ ಕೋಟಿ ರೂ.ಗಾತ್ರದ ಆಯವ್ಯಯದಲ್ಲಿ 1.20ಲಕ್ಷ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. 58ಸಾವಿರ ಕೋಟಿ ರೂ.ಗ್ಯಾರಂಟಿಗಳಿಗಾಗಿ ಮೀಸಲಿಡಲಾಗಿದೆ. ಇದಲ್ಲದೆ, ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸರಕಾರ ಮುಂದಾಗಿದೆ. ಆದರೆ, ಬಿಜೆಪಿ-ಜೆಡಿಎಸ್ ಈ ಎಲ್ಲದಕ್ಕೂ ಅಡ್ಡಗಾಲು ಹಾಕಲು ಹೊರಟಿದೆ ಎಂದು ಸುರ್ಜೇವಾಲ ಕಿಡಿಕಾರಿದ್ದಾರೆ.







