ಎಸ್ಐಆರ್ ನೋಟಿಸ್ಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಉಲಮಾಗಳ ಕರೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್)ಗೆ ಸಂಬಂಧಿಸಿದಂತೆ ನೋಟಿಸ್ಗಳನ್ನು ಸ್ವೀಕರಿಸಿರುವ ಮತದಾರರು, ಅಗತ್ಯ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಂಡು, ನಿಗದಿತ ಅವಧಿಯಲ್ಲಿ ಮತದಾರರ ನೋಂದಣಾಧಿಕಾರಿ ಎದುರು ಹಾಜರಾಗಿ ತಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ರಾಜ್ಯದ ಉಲಮಾಗಳು ಕರೆ ನೀಡಿದ್ದಾರೆ.
ಮಂಗಳವಾರ ನಗರದ ಮಸ್ಜಿದೆ ಖಾದ್ರಿಯಾದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಫಝ್ಲುರ್ರಹೀಮ್ ಮುಜದ್ದಿದಿ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎಂದು ಮೈಮರೆಯಬಾರದು. ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ನೋಟಿಸ್ ಪಡೆಯಲಿರುವ ಮತದಾರರ ಪಟ್ಟಿಯಿದೆ. ಅದರಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಹೇಳಿದರು.
ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋದರೆ ಭವಿಷ್ಯದಲ್ಲಿ ಪಾಸ್ಪೋರ್ಟ್, ಆಧಾರ್, ಪಡಿತರ ಚೀಟಿ, ಆಸ್ತಿ ಖರೀದಿ ಮತ್ತು ಮಾರಾಟ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಎಸ್ಐಆರ್ ಗೆ ಸಂಬಂಧಿಸಿದಂತೆ ಮಸೀದಿಗಳು, ಮದ್ರಸಾಗಳು, ಸ್ವಯಂ ಸೇವಾ ಸಂಸ್ಥೆಗಳು, ಯುವಕರು ತಮ್ಮ ಪ್ರದೇಶಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ, ಜನರಿಗೆ ಮಾರ್ಗದರ್ಶನ ನೀಡಿದ್ದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮ, ಜಾತಿಯ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ನೆರವು ನೀಡುವ ಮೂಲಕ ಮಾನವೀಯತೆಯ ಮಾದರಿಯನ್ನು ಇಲ್ಲಿನ ಜನ ಸ್ಥಾಪಿಸಿದ್ದಾರೆ. ನಾವು ಒಟ್ಟಾಗಿ ಸೇವೆ ಸಲ್ಲಿಸಿದರೆ, ಪ್ರಗತಿಯ ಹಾದಿಗಳನ್ನು ಸುಗಮಗೊಳಿಸಬಹುದು ಎಂದು ಫಝ್ಲುರ್ರಹೀಮ್ ಮುಜದ್ದಿದಿ ಅಭಿಪ್ರಾಯಪಟ್ಟರು.
ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ ಮಾತನಾಡಿ, ಕರಡು ಮತದಾರರ ಪಟ್ಟಿಯೆ ಅಂತಿಮವಲ್ಲ. ನೋಟಿಸ್ ಹಾಗೂ ಕ್ಲೇಮುಗಳ ಅವಧಿಯಲ್ಲಿ ಹೆಸರುಗಳು ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಗಳು ಇವೆ. ಆದುದರಿಂದ, ಈ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಯಾವುದೇ ಕಾರಣಕ್ಕೂ ಅಂತಿಮ ಮತದಾರರ ಪಟ್ಟಿಯಿಂದ ಹೆಸರುಗಳು ಕೈ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟು ಹೋಗಿದ್ದರೆ ತಕ್ಷಣ ಸಂಬಂಧಪಟ್ಟ ಬಿಎಲ್ಒಗಳನ್ನು ಸಂಪರ್ಕಿಸಿ, ಅವರಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ನೋಟಿಸ್ ಬಂದರೆ ಮತದಾರರ ನೋಂದಣಾಧಿಕಾರಿ ಕೇಳಿರುವ ದಾಖಲೆಗಳನ್ನು ಸಮಪರ್ಕವಾಗಿ ಹಾಜರು ಪಡಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಎಸ್ಐಆರ್ ಕುರಿತು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುತ್ತಿರುವ ಮಸೀದಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳು, ಯುವಕರು ಈ ಮಾನವೀಯ ಸೇವೆಯನ್ನು ಎಸ್ಐಆರ್ ಪ್ರಕ್ರಿಯೆ ಮುಗಿಯುವವರೆಗೂ ಮುಂದುವರೆಸಬೇಕು ಎಂದು ಇಫ್ತಿಕಾರ್ ಅಹ್ಮದ್ ಖಾಸ್ಮಿ ಕೋರಿದರು.
ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯ ಎರಡನೆ ಹಂತ ಪ್ರಾರಂಭವಾಗಿದೆ. ಈಗಾಗಲೆ ಮತದಾರರ ಕರಡು ಪಟ್ಟಿ ಹಾಗೂ ಎಎಸ್ಡಿಡಿಒ ಎಂದು ಗುರುತಿಸಲಾಗಿರುವ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟ ಮಾಡಿದೆ ಎಂದರು.
ರಾಜ್ಯದಲ್ಲಿ ಮ್ಯಾಪಿಂಗ್ ಆಗದ ಹಾಗೂ ತಾರ್ಕಿಕ ವಿರೋಧಾಭಾಸಗಳನ್ನು ಹೊಂದಿರುವ ಸುಮಾರು 43.80 ಲಕ್ಷ ಜನರಿಗೆ ಚುನಾವಣಾ ಆಯೋಗವು ಬಿಎಲ್ಒಗಳ ಮೂಲಕ ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದೆ. ಆದುದರಿಂದ, ನೋಟಿಸ್ಗಳನ್ನು ಸ್ವೀಕರಿಸಿದವರು ಯಾವುದೆ ಕಾರಣವಿಲ್ಲದೆ ನಿರ್ದಿಷ್ಟ ದಿನಾಂಕ, ಸಮಯ ಮತ್ತು ಸ್ಥಳಕೆ ತಲುಪಿ ಅಗತ್ಯ ದಾಖಲೆಗಳನ್ನು ಮತದಾರರ ನೋಂದಣಾಧಿಕಾರಿಗೆ ಸಲ್ಲಿಸುವುದು ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಅನೇಕ ಕಡೆ ಮತದಾರರು ಚುನಾವಣಾ ಆಯೋಗದ ನೋಟಿಸ್ಗಳನ್ನು ಸ್ವೀಕರಿಸಲು ಹಾಗೂ ಮತದಾರರ ನೋಂದಣಾಧಿಕಾರಿ ಎದುರು ಹಾಜರಾಗಲು ಆಸಕ್ತಿ ತೋರುತ್ತಿಲ್ಲ ಎಂಬ ವರದಿಗಳು ಬರುತ್ತಿವೆ. ಯಾವುದೆ ಕಾರಣಕ್ಕೂ ಇಂತಹ ಪ್ರವೃತ್ತಿಗೆ ಪ್ರೋತ್ಸಾಹ ನೀಡಬಾರದು. ಇದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಶಬ್ಬೀರ್ ಅಹ್ಮದ್ ನದ್ವಿ ಎಚ್ಚರಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ನೋಟಿಸ್ ಪಡೆಯುವವರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಂತಹ ಮತದಾರರ ಹೆಸರು ಪ್ರಸಕ್ತ ಸಾಲಿನ ಅಕ್ಟೋಬರ್ನಲ್ಲಿ ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಮುಸ್ಲಿಮ್ ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೌಲಾನಾ ಆಸಿಮ್, ಮುಫ್ತಿ ಮುಹಮ್ಮದ್ ಹುಸೇನ್ ಉಪಸ್ಥಿತರಿದ್ದರು.






