ಬಿ.ದಯಾನಂದ್ ಸೇರಿ ಮೂವರ ಅಮಾನತು ಆದೇಶ ರದ್ದತಿಗಾಗಿ ಸಿಎಂಗೆ ನಿವೃತ್ತ ಐಪಿಎಸ್ ಅಧಿಕಾರಿಗಳ ಪತ್ರ

ಬಿ.ದಯಾನಂದ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ನಿರ್ಗಮಿತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಆದೇಶವನ್ನು ರದ್ದು ಪಡಿಸಬೇಕೆಂದು ಕೋರಿ ರಾಜ್ಯ ಸರಕಾರಕ್ಕೆ ಇಂಡಿಯನ್ ಪೊಲೀಸ್ ಫೌಂಡೇಶನ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪೂರ್ವ ತಯಾರಿ ಇಲ್ಲದೆ, ಏಕಾಏಕಿ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಬರುವಂತೆ ಆಹ್ವಾನಿಸಿತ್ತು. ಆರಂಭದಲ್ಲೇ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದರು. ಊಹೆಗೂ ಮೀರಿದ ಜನ ಕಾರ್ಯಕ್ರಮಗಳಿಗೆ ಬಂದಿದ್ದರಿಂದ ಪೊಲೀಸರಿಗೆ ಬಂದೋಬಸ್ತ್ ವೇಳೆ ಕಷ್ಟವಾಗಿದೆ. ಹೀಗಾಗಿ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹಿನ್ನೆಲೆ: ಐಪಿಎಲ್ನಲ್ಲಿ ಚೊಚ್ಚಲ ಬಾರಿಗೆ ಕಪ್ ಗೆದ್ದ ಬಳಿಕ ಜೂ.4ರಂದು ರಾಜ್ಯ ಸರಕಾರವು ಆರ್ಸಿಬಿ ಆಟಗಾರರಿಗೆ ಅಭಿನಂದನಾ ಕಾರ್ಯಕ್ರಮವನ್ನು ವಿಧಾನಸೌಧದ ಎದುರು ಆಯೋಜಿಸಿತ್ತು. ಕಾರ್ಯಕ್ರಮ ಆಯೋಜನೆಗೂ ಮುನ್ನ ಪೂರ್ವ ತಯಾರಿಗೆ ಸಮಯಾವಕಾಶ ಬೇಕೆಂದು ಪೊಲೀಸರು ತಿಳಿಸಿದ್ದರು. ಈ ಮಧ್ಯೆ ಆರ್ಸಿಬಿ ಆಡಳಿತ ಮಂಡಳಿ ಕಡೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಸಾಕಷ್ಟು ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.