ಬೆಂಗಳೂರು- ಮೈಸೂರು ಹೆದ್ದಾರಿ ಬಳಿ ದರೋಡೆ; ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಬೆದರಿಸಿ ಚಿನ್ನದ ಸರ ಕಸಿದು ಪರಾರಿ
![ಬೆಂಗಳೂರು- ಮೈಸೂರು ಹೆದ್ದಾರಿ ಬಳಿ ದರೋಡೆ; ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಬೆದರಿಸಿ ಚಿನ್ನದ ಸರ ಕಸಿದು ಪರಾರಿ ಬೆಂಗಳೂರು- ಮೈಸೂರು ಹೆದ್ದಾರಿ ಬಳಿ ದರೋಡೆ; ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಬೆದರಿಸಿ ಚಿನ್ನದ ಸರ ಕಸಿದು ಪರಾರಿ](https://www.varthabharati.in/h-upload/2023/07/01/1160657-robbery-1553490366.webp)
ಫೋಟೋ- PTI
ಮಂಡ್ಯ, ಜು.1: ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿಯನ್ನು ಬೆದರಿಸಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಶುಕ್ರವಾರ ತಡರಾತ್ರಿ ಮದ್ದೂರು ಬಳಿ ನಡೆದಿದೆ.
ಕೊಡಗು ಜಿಲ್ಲೆ, ಮಡಿಕೇರಿ ತಾಲೂಕು ಅರಪಟ್ಟು ಗ್ರಾಮದ ಇಂಟೀರಿಯರ್ ಡಿಸೈನರ್ ಮುತ್ತಪ್ಪ ಕೆ.ಕೆ. ಅವರನ್ನ ಮೂವರು ದುಷ್ಕರ್ಮಿಗಳು ಡ್ಯಾಗರ್ ತೋರಿಸಿ ಬೆದರಿಸಿ ಅವರ ಬಳಿಯಿದ್ದ 65 ಗ್ರಾಂ. ಚಿನ್ನದ ಸರ ಕಸಿದಿದ್ದಾರೆ ಎಂದು ವರದಿಯಾಗಿದೆ.
ಮೆದುಳು ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ತೆರಳಿದ್ದ ಮುತ್ತಪ್ಪ, ಇನೋವಾಕಾರಿನಲ್ಲಿ ವಾಪಸ್ ಆಗುತ್ತಿದ್ದಾಗ ತಲೆಸುತ್ತು ಕಾರಣ ಮದ್ದೂರಿನ ಐಶ್ವರ್ಯ ವಿದ್ಯಾಸಂಸ್ಥೆ ಬಳಿಯ ಸರ್ವೀಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಮುತ್ತಪ್ಪ ಅವರ ಬಳಿಗೆ ಬಂದ ಬಂದ ಮೂವರು ತಾವು ಪೊಲೀಸರು. ನೀವು ಕುಡಿದಿದ್ದೀರಾ ಇಲ್ಲವಾ ಪರೀಕ್ಷಿಸಬೇಕು ಬಾಗಿಲು ತೆಗೆಯಿರಿ ಎಂದು ಹೇಳಿದ್ದು, ಬಾಗಿಲು ತೆಗೆದೊಡನೆ ಕಾರಿನ ಒಳನುಗ್ಗಿ ಡ್ರ್ಯಾಗನ್ ತೋರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ವಿಚಾರ ತಿಳಿದು ಸಣ್ಣಪುಟ್ಟ ಗಾಯಗಳಾಗಿದ್ದ ಮುತ್ತಪ್ಪ ಅವರನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿದಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಮದ್ದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮವಹಿಸಿದ್ದಾರೆ.