ಸಕಲ ಸರಕಾರಿ ಗೌರವಗಳೊಂದಿಗೆ ಎಸ್.ಜಾನಕಿ ಅಂತ್ಯಕ್ರಿಯೆ

ಮೈಸೂರು : ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದ ಸಾರ್ವಕಾಲಿಕ ಶ್ರೇಷ್ಠ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ರವಿವಾರ ನೆರವೇರಿತು.
ಮೈಸೂರು ನೆಲದಲ್ಲಿಯೇ ಮಣ್ಣಾಗಬೇಕೆಂಬ ಎಸ್.ಜಾನಕಿ ಅವರ ಆಸೆಯಂತೆಯೇ ಎಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಫಾರಂ ಹೌಸ್ನಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಯಿತು.
ಮೊಮ್ಮಗಳು ಅಪ್ಸರಾ ಅಜ್ಜಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಮೈಸೂರು ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಗೌರವವನ್ನು ಸಲ್ಲಿಸುವ ಮೂಲಕ ಗಾನಕೋಗಿಲೆಗೆ ಭಾವಪೂರ್ಣ ವಿದಾಯ ಹೇಳಲಾಯಿತು.
ಸರಕಾರದ ಪರವಾಗಿ ಮೈಸೂರು ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಂಗೀತ ನಿರ್ದೇಶಕ ಹಂಸಲೇಖ ಮುಂತಾದವರಿದ್ದರು.
ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೈಸೂರಿನಿಂದ ಕಣಿಯನಹುಂಡಿ ಗ್ರಾಮಕ್ಕೆ ಸಾಗಿದ ವೇಳೆ ಹತ್ತಾರು ಗ್ರಾಮಗಳ ಜನರು ಅಂತಿಮ ದರ್ಶನ ಪಡೆದುಕೊಂಡರು.
ಮೇರು ಕಲಾವಿದೆಗೆ ಗಾಯನ ನಮನ
ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನ ಪಡೆಯಲು ಬಂದವರು ಜಾನಕಮ್ಮ ಹಾಡಿದ ಹಾಡುಗಳನ್ನು ಹಾಡುತ್ತ ಅಭಿಮಾನ ಮೆರೆದರು. ಕೆಲವರು ದುಃಖಿತರಾಗಿ ಕಣ್ಣೀರಿಟ್ಟರು.
ಗಾಯಕ ವಿಜಯ್ ಪ್ರಕಾಶ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದ ಮಕ್ಕಳ ತಂಡದೊಂದಿಗೆ ಆಗಮಿಸಿ ಎಸ್.ಜಾನಕಿ ಅವರ ಜನಪ್ರಿಯ ಹಾಡುಗಳಾದ 'ನೋಡು ಬಾ ನೋಡು ಬಾ ನಮ್ಮೂರ...' ಸೇರಿದಂತೆ ಹಲವು ಗೀತೆಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಜಾನಕಿ ಅವರು ಎಲ್ಲ ಗಾಯಕ-ಗಾಯಕಿಯರಿಗೂ ಆದರ್ಶ ಮತ್ತು ಸ್ಫೂರ್ತಿ ಎಂದು ವಿಜಯ್ ಪ್ರಕಾಶ್ ಹೇಳಿದರು.
"ಜಾನಕಮ್ಮ ಅವರದ್ದು ಅತ್ಯಂತ ಪರಿಪೂರ್ಣವಾದ ಜೀವನ. ಅವರು ದೊಡ್ಡ ದೈವಭಕ್ತೆ ಹಾಗೂ ಎಲ್ಲಾ ಭಾಷೆ, ಧರ್ಮಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದರು. ಅವರ ಪ್ರಿಯ ಶಿಷ್ಯ ಒಪ್ಪಿಗೆ ನೀಡಿದರೆ ಜಾನಕಮ್ಮ ಅವರ ಹೆಸರಿನಲ್ಲಿ ಒಂದು ಭವ್ಯ ಸಂಗೀತ ಮೆಮೋರಿಯಲ್' (ಸ್ಮಾರಕ) ನಿರ್ಮಾಣ ಮಾಡುತ್ತೇವೆ. ಈ ಕಾರ್ಯಕ್ಕೆ ಸರಕಾರ ಕೂಡ ಕೈಜೋಡಿಸಬೇಕು"
ಹಂಸಲೇಖ, ಸಂಗೀತ ನಿರ್ದೇಶಕ.






