ಸಮಸ್ತ 100 ನೇ ವಾರ್ಷಿಕ ಸಮ್ಮೇಳನ: ಜಿಫ್ರಿ ತಂಙಳ್ರಿಗೆ ರಾಜ್ಯ ಅತಿಥಿ ಗೌರವ

ಬೆಂಗಳೂರು, ಜ.25: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯ 100ನೇ ವಾರ್ಷಿಕ ಉದ್ಘಾಟನಾ ಮಹಾ ಸಮ್ಮೇಳನವನ್ನು ಜ.28ರ ಸಂಜೆ 5ಗಂಟೆಗೆ ಬೆಂಗಳೂರು ಅರಮನೆ ಮೈದಾನ(ಶಂಸುಲ್ ಉಲಮಾ ನಗರ)ದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ವಹಿಸಲಿದ್ದು, ಇವರು ವಿಶೇಷ ಪ್ರಕರಣದಡಿಯಲ್ಲಿ ರಾಜ್ಯ ಅತಿಥಿಗಳಾಗಿರುತ್ತಾರೆ.
ಹೀಗಾಗಿ, ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಸೂಕ್ತ ವಸತಿ, ಸಾರಿಗೆ ಹಾಗೂ ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಮಾಡುವಂತೆ ಬೆಂಗಳೂರು ಗುಪ್ತವಾರ್ತೆಯ ಅಪರ ಪೊಲೀಸ್ ಮಹಾನಿರ್ದೇಶಕರು, ಭದ್ರತೆ ಉಪ ಪೊಲೀಸ್ ಮಹಾನಿರೀಕ್ಷಕರು, ಗಣ್ಯರ ಭದ್ರತೆ ಉಪ ಪೊಲೀಸ್ ಆಯುಕ್ತರು, ರಾಜ್ಯ ಶಿಷ್ಟಾಚಾರದ ಸರಕಾರದ ಅಧೀನ ಕಾರ್ಯದರ್ಶಿ, ಕುಮಾರ ಕೃಪ ಅತಿಥಿ ಗೃಹದ ವಿಶೇಷಾಧಿಕಾರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ರಾಜ್ಯ ಶಿಷ್ಟಾಚಾರ) ಸರಕಾರದ ಅಧೀನ ಕಾರ್ಯದರ್ಶಿ-1 ಅವರು ಆದೇಶ ಹೊರಡಿಸಿದ್ದಾರೆ.





