ಪ್ರಧಾನಿ ಮೋದಿ ‘ಮೇಕ್ ಇನ್ ಇಂಡಿಯಾ’ ಎಲ್ಲಿ?; ಛತ್ರಿಯನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಸ್ಥಿತಿ : ಸಂತೋಷ್ ಲಾಡ್

ಸಂತೋಷ್ ಲಾಡ್
ಬೆಂಗಳೂರು : ಛತ್ರಿಯನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. 200 ಮಿಲಿಯನ್ ಡಾಲರ್ ರಫ್ತು ವ್ಯಾಪಾರ ಕುಸಿದಿದೆ. ಆದರೆ, ಪ್ರಧಾನಿ ಮೋದಿ ಹೇಳಿಕೊಳ್ಳುತ್ತಿದ್ದ ‘ಮೇಕ್ ಇನ್ ಇಂಡಿಯಾ’ ಯೋಜನೆ ಎಲ್ಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ರವಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇಶದ ಜನರಿಗೆ ಸುಳ್ಳು ಭರವಸೆ ನೀಡಿ, ದಿಕ್ಕು ತಪ್ಪಿಸುವುದೇ ಕೇಂದ್ರದ ಬಿಜೆಪಿ ನೇತೃತ್ವ ಸರಕಾರದ ಕೆಲಸ. ವಿದೇಶದಲ್ಲಿರುವ ಕಪ್ಪುಹಣ ತರುತ್ತೇವೆ, ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತೇವೆ ಎಂದಿದ್ದರು. ಇದೀಗ ಅವು ಎಲ್ಲ ಎಲ್ಲಿ ಹೋದವು? ಎಂದು ಕೇಳಿದರು.
ದೇಶದಲ್ಲಿ ಭ್ರಷ್ಟ ಚಾರ ಇಲ್ಲ ಎಂದು ಯಾವ ಮಾನದಂಡದ ಆಧಾರದ ಮೇಲೆ ಬಿಜೆಪಿಯವರು ಹೇಳುತ್ತಿದ್ದಾರೆ. ಭಾರತವನ್ನು ವಿಶ್ವಗುರು ಎಂದು ಬಿಂಬಿಸಲಾಗುತ್ತಿದೆ. ಆದರೆ, ಅಕ್ಕಪಕ್ಕದ ಯಾವ ದೇಶದ ಜೊತೆ ನಾವು ಚೆನ್ನಾಗಿದ್ದೇವೆ ಎಂದು ಕೇಳಿದ ಸಂತೋಷ್ ಲಾಡ್, ಅದಾನಿ ಬಂದರಿನಲ್ಲಿ 21 ಸಾವಿರ ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳು ಸಿಕ್ಕಿವೆ ಎಂದು ವಾಗ್ದಾಳಿ ನಡೆಸಿದರು.
ಬೆಟ್ಟಿಂಗ್ ಆಪ್ನಲ್ಲಿ ದಂಧೆ ನಡೆಸುವವರಿಂದ ಹಾಗೂ ದನದ ಮಾಂಸ ರಫ್ತು ಮಾಡುವವರಿಂದ ಬಿಜೆಪಿ ಪಕ್ಷ ಚಂದಾ ವಸೂಲಿ ಮಾಡಿ ಪಕ್ಷದ ಕಚೇರಿ ನಿರ್ಮಾಣ ಮಾಡುತ್ತಿದೆ. ಇವರನ್ನು ದೇಶದ ಜನತೆ ನಂಬಬೇಕೇ? ಎಂದು ಸಂತೋಷ್ ಲಾಡ್ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.







