ಹಿಂ.ವರ್ಗದ ಯುವ ಕೈಗಾರಿಕೋದ್ಯಮಿಗಳಿಗೆ ಪ್ರತ್ಯೇಕ ನಿಧಿ ಸ್ಥಾಪಿಸುವಂತೆ ಆಗ್ರಹಿಸಿ ಸಿಎಂಗೆ ಸಂತೋಷ್ ಲಾಡ್ ಪತ್ರ

ಬೆಂಗಳೂರು : ಹಿಂದುಳಿದ ವರ್ಗದ ಉದಯೋನ್ಮುಖ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಮೀಸಲಾದ ಪ್ರತ್ಯೇಕ ನಿಧಿ ಸ್ಥಾಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಹಿಂದುಳಿದ ವರ್ಗ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಂತೋಷ್ ಲಾಡ್ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ 2015ರಲ್ಲಿ ನಡೆದ ಸಮೀಕ್ಷೆ ಪ್ರಕಾರ, ಹಿಂದುಳಿದ ವರ್ಗಗಳ ಸಂಖ್ಯೆ ಸುಮಾರು ಶೇ.70ರಷ್ಟು (4.42 ಕೋಟಿ) ಇದ್ದು, ಒಬಿಸಿ ವರ್ಗದ ವ್ಯಾಪ್ತಿಯಲ್ಲಿ 1880 ಜಾತಿ ಮತ್ತು ಉಪಜಾತಿಗಳು ಬರುತ್ತವೆ. ಈ ವರ್ಗದ ಉದಯೋನ್ಮುಖ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಮೀಸಲಾದ ಯಾವುದೇ ಪ್ರತ್ಯೇಕ ಬಂಡವಾಳ/ಅನುದಾನ ವ್ಯವಸ್ಥೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಆದುದರಿಂದ, ಈ ವರ್ಗದ ಯುವ ಉದ್ಯಮಿಗಳು ಕೈಗಾರಿಕೆ ಸ್ಥಾಪನೆ ವಲಯದಿಂದ ದೂರ ಉಳಿಯುತ್ತಿದ್ದಾರೆ. ಹಾಗಾಗಿ, ಹಿಂದುಳಿದ ವರ್ಗದ ಯುವ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲು ಸರಕಾರದ ಹಂತದಲ್ಲಿ ಒಂದು ನಿಧಿ ಸ್ಥಾಪಿಸುವುದು ಅನಿವಾರ್ಯವಾಗಿದೆ. ಈ ಸಂಬಂಧ ನೀತಿ ರೂಪಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಸಂತೋಷ್ ಲಾಡ್ ಕೋರಿದ್ದಾರೆ.
ಅನುದಾನ ಕ್ರೋಢೀಕರಣ ಹೇಗೆ?: ಪ್ರತ್ಯೇಕ ನಿಧಿಗೆ ಅನುದಾನ ಕ್ರೋಢೀಕರಿಸುವ ಸಂಬಂಧ ತಮ್ಮ ಪತ್ರದಲ್ಲಿ ವಿವರಿಸಿರುವ ಅವರು, ಈ ನಿಧಿಗೆ ಸರಕಾರದಿಂದ ಅನುದಾನ ಒದಗಿಸುವುದು, ಖಾಸಗಿ ವಲಯದ ವಿವಿಧ ರೀತಿಯ ಹೂಡಿಕೆದಾರರಿಂದ ಹೂಡಿಕೆಗೆ ಅವಕಾಶ ಮಾಡಿಕೊಡಬಹುದಾಗಿದೆ ಎಂದು ಹೇಳಿದ್ದಾರೆ.
ನವೋದ್ಯಮ ಸ್ಥಾಪನೆಗೆ ಅವಕಾಶ: ಈ ಪ್ರತ್ಯೇಕ ನಿಧಿಯಿಂದ, ಸರಕಾರ ಮತ್ತು ಖಾಸಗಿ ವಲಯದ ಹೂಡಿಕೆದಾರರು ಅಂತಿಮಗೊಳಿಸುವ ಹಿಂದುಳಿದ ವರ್ಗಗಗಳ ಯುವ ಉದ್ಯಮಿಗಳಿಗೆ ನವೋದ್ಯಮಗಳನ್ನು ಆರಂಭಿಸಲು ಅನುದಾನ ಒದಗಿಸಬಹುದು. ಇದರಿಂದ ಹಿಂದುಳಿದ ವರ್ಗದ ಉದ್ಯಮಿಮಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದ್ದಾರೆ ಎಂಬ ಆಶಾಭಾವನೆಯನ್ನು ಸಂತೋಷ್ ಲಾಡ್ ವ್ಯಕ್ತಪಡಿಸಿದ್ದಾರೆ.







