ರಾಷ್ಟ್ರೀಯ ಪುರಸ್ಕಾರಕ್ಕೆ ಅಯ್ಕೆಯಾದ ಶೀರ್ಷೇಂದು ಮುಖ್ಯೋಪಾಧ್ಯಾಯ

ಶಿವಮೊಗ್ಗ: ಕುಪ್ಪಳಿಯ ರಾಷ್ಟ್ರ ಕವಿ ಕುವೆಂಪು ಪ್ರತಿಷ್ಟಾನ(ರಿ) ದ ವತಿಯಿಂದ ಕೊಡಮಾಡುವ 2023 ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಬಂಗಾಳಿ ಭಾಷೆಯ ಸುಪ್ರಸಿದ್ಧ ಬರಹಗಾರರಾದ ಶೀರ್ಷೇಂದು ಮುಖ್ಯೋಪಾಧ್ಯಾಯ ಆಯ್ಕೆ ಆಗಿದ್ದಾರೆ.
ನ.17 ರಂದು ಬೆಂಗಳೂರಿನಲ್ಲಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸಂಚಾಲಕರಾಗಿದ್ದ ಆಯ್ಕೆ ಸಮಿತಿಯಲ್ಲಿ, ನಿರ್ಮಲ್ ಕಾಂತಿ ಭಟ್ಟಾಚಾರ್ಯ, ಗೀತಾ ವಿಜಯಕುಮಾರ್ ಹಾಗೂ ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ತೀರ್ಪುಗಾರಾಗಿದ್ದರು. ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನವಾದ ಡಿ.29 ರಂದು ಶೀರ್ಷೇಂದು ಮುಖ್ಯೋಪಧ್ಯಾಯ ಅವರಿಗೆ “ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಐದು ಲಕ್ಷ ರೂಪಾಯಿ ಮತ್ತು ಬೆಳ್ಳಿ ಪದಕಗಳನ್ನು ಒಳಗೊಂಡಿದೆ.
ಶೀರ್ಷೇಂದು ಮುಖ್ಯೋಪಾಧ್ಯಾಯ ಕುರಿತು:
ಶೀರ್ಷಂಧು ಮುಖ್ಯೋಪಧ್ಯಾಯ ಅವರು ಬಂಗಾಳಿ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ, ವರ್ತಮಾನದ ಬಹು ಮಹತ್ವದ ಮತ್ತು ಜನಪ್ರಿಯ ಲೇಖಕರು.ತಮ್ಮ ಹೊಸತನದ ಬರವಣಿಗೆಗಳಿಂದ ಬೆಂಗಾಳಿ ಭಾಷಾ ಸಾಹಿತ್ಯವನ್ನೂ, ತನ್ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಥೆ, ಕಾದಂಬರಿ, ಪ್ರವಾಸಕಥನ, ಮಕ್ಕಳ ಪುಸ್ತಕಗಳು ಸೇರಿ ಸುಮಾರು 90 ಕೃತಿಗಳು ಇದುವರೆಗೆ ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವೂ ಸೇರಿದಂತೆ ಹಲವಾರು ಪುರಸ್ಕಾರಗಳು ಶೀರ್ಷಂಧು ಅವರಿಗೆ ದೊರೆತಿವೆ.
ಪಾರ್ತಿಬೊ, ನಯನ್ ಶ್ಯಾಮ್, ಪರಪರ್ , ದುರ್ಬೀನ್, ಏಕಾದಶಿ ಓ ಭೂತ್ ಮೊದಲಾದ ಕೃತಿಗಳು ಅವರಿಗೆ ಅತ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿವೆ. ಭ್ರಮಣ್ ಸಮಗ್ರ ಅವರ ಪ್ರವಾಸ ಕಥನ, ಬೆಂಗಾಳಿಯಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಕೃತಿ.
ಇವರ ಕತೆಗಳ ಗಟ್ಟಿತನದಿಂದಾಗಿ, ಸಿನಿಮಾ ಕ್ಷೇತ್ರದ ಸಂಪರ್ಕವೂ ಅನಾಯಾಸವಾಗಿ ದೊರೆತಿರುತ್ತದೆ. 1992ರಲ್ಲಿ ರಿತುಪರ್ಣೋ ಅವರ ನಿರ್ದೇಶನದಲ್ಲಿ ತಯಾರಾಗಿ ಬಿಡುಗಡೆಯಾದ, ಶೀರ್ಷೇಂಧು ಅವರ ಹೈರೇರ್ ಅಂಗ್ತಿ ಕಥೆಯಾಧಾರಿತ, ಅದೇ ಹೆಸರಿನ ಸಿನಿಮಾದಿಂದ ಪ್ರಾರಂಭಿಸಿ, ಇದುವರೆಗೆ 17 ಸಿನಿಮಾಗಳು ಇವರ ಕಥೆ-ಕಾದಂಬರಿಯನ್ನು ಆಧರಿಸಿ ಬಂದಿವೆ. ಬಹುತೇಕ ಬಂಗಾಳಿಯ ಎಲ್ಲ ಪ್ರಮುಖ ಸಿನಿಮಾ ನಿರ್ದೇಶಕರೂ ಇವರ ಕಥೆ ಕಾದಂಬರಿಗಳನ್ನು ಆಧರಿಸಿ ಸಿನಿಮಾ ಮಾಡಿರುವುದು ವಿಶೇಷ.
ಜನಪ್ರಿಯ ಕತೆಗಾರರಾಗಿರುವ ಶೀರ್ಷೇಂಧು ಅವರನ್ನು ಸಹಜವಾಗಿ ಹಲವಾರು ಸಾಹಿತ್ಯ ಪುರಸ್ಕಾರಗಳೂ ಹುಡುಕಿಕೊಂಡು ಬಂದಿವೆ. ಮುಖ್ಯವಾಗಿ, ಮಕ್ಕಳ ಸಾಹಿತ್ಯಕ್ಕಾಗಿ ವಿದ್ಯಾಸಾಗರ ಪುರಸ್ಕಾರ (1985), ಎರಡು ಬಾರಿ ಆನಂದ ಪುರಸ್ಕಾರ (1973 ಮತ್ತು 1990), ಮನಮಿನ್ ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಬಹುಮಾನ (19689), ಬಂಗಬಿಭೂಷಣ್ ಪ್ರಶಸ್ತಿ (2012), ಎ.ಬಿ.ಪಿ. ಆನಂದ ಸೆರ ಬಂಗಾಳಿ ಪ್ರಶಸ್ತಿ ಮೊದಲಾದವು ಸೇರಿವೆ. ಇದಲ್ಲದೆ, 2021ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಕೂಡಾ ದೊರೆತಿರುತ್ತದೆ. ಅಶೋಕ್ ವಿಶ್ವನಾಥನ್ ಎಂಬುವವರು, ಸಾಹಿತ್ಯ ಅಕಾಡೆಮಿಗಾಗಿ ಶೀರ್ಷೇಂಧು ಮುಖ್ಯೋಪಧ್ಯಾಯ್ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ.







