ಸದಾ ಸುದ್ದಿಯಲ್ಲಿರಲು ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿರುತ್ತಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಬೆಂಗಳೂರು: ಪ್ರತಿನಿತ್ಯ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳಲು, ಸದಾ ಸುದ್ದಿಯಲ್ಲಿರುವ ಉದ್ದೇಶದಿಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನಾದ ತಮ್ಮನ್ನು ಯಾರೂ ಮುಟ್ಟಲಾಗದು ಎಂಬ ಭಾವನೆ ಅವರದು. ಆರೆಸ್ಸೆಸ್ ಅನ್ನು ಟೀಕಿಸುವುದನ್ನು ಬಿಟ್ಟು ನೀವೇನು ಮಾಡಿದ್ದೀರೆಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಹದಗೆಟ್ಟ ಕಾನೂನು-ಸುವ್ಯವಸ್ಥೆ ಕಡೆಗೆ ಗೃಹ ಸಚಿವರಾಗಿ ಗಮನ ಕೊಡದ ಪ್ರಿಯಾಂಕ್ ಖರ್ಗೆ ಅವರು, ಕೇವಲ ಆರೆಸ್ಸೆಸ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಕೂತಿದ್ದಾರೆ. ಹಿಂದೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಅಲ್ಲಿ ಅವರ ಸಾಧನೆ ಶೂನ್ಯ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಹೆಣ್ಣು ಮಕ್ಕಳ ನಾಪತ್ತೆ ವಿಚಾರದಲ್ಲಿ ಅವರು ಗಮನ ಕೊಡುವುದಿಲ್ಲ. ಒಂದೆಡೆ ತಂದೆಯ ಹಿಂದೆ ಅಡಗುವುದು, ನಿರಂತರ ಅಧಿಕಾರದಲ್ಲಿರುವ ಕುಟುಂಬದಿಂದ ಬಂದು ಬಲಿತರಾದರೂ ದಲಿತನೆಂಬ ನೆರಳನ್ನು ತೆಗೆದುಕೊಳ್ಳುತ್ತಾರೆ. ಮೊದಲು ಪೊಲೀಸ್ ಇಲಾಖೆಯನ್ನು ತಹಬಂದಿಗೆ ತನ್ನಿ ಎಂದು ಅವರು ಆಗ್ರಹಿಸಿದರು.






