ಸಿದ್ದರಾಮಯ್ಯರನ್ನು ಕಡೆಗಣಿಸಿ ರಾಜಕಾರಣ ಮಾಡುವುದು ಸುಲಭವಲ್ಲ: ಸಿ.ಟಿ.ರವಿ

ಶಿವಮೊಗ್ಗ: ಸಚಿವರು ಖಾತೆಗಾಗಿ ಕ್ಯಾತೆ ತೆಗೆದಿರುವುದು ಸರಕಾರ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಇನ್ನೂ ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಆಗಿಲ್ಲ. ಈಗಲೇ ಅಸಮಾಧಾನ ಉಂಟಾದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಇವರನ್ನು ಸಂಭಾಳಿಸುವುದನ್ನು ಬಿಟ್ಟು ಸಿಎಂಗೆ ಬೇರೆ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದರು.
1,34,000 ಕೋಟಿ ರೂ. ಸಾಲ ಮಾಡಬೇಕಾಗುತ್ತದೆ ಎಂದು ಬಜೆಟ್ ಪೂರ್ವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಡಿಕೆಶಿ ಕೂಡ ಮತ್ತಷ್ಟು ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಇದು ಕೇಳಲು ಚಂದ. ಉಚಿತ ಬಸ್ ಪಾಸ್ ಎಂದರೆ ಇನ್ನಷ್ಟು ಸಾಲ ಮಾಡಬೇಕಾಗುತ್ತೆ ಎಂದರು.
ಡಿಕೆಶಿ ಅನುಭವ ಹೊಂದಿರುವ ಮುಖ್ಯಮಂತ್ರಿ ಆಗಿರಬಹುದು. ಆದರೆ, ರಾಜ್ಯವನ್ನು ಅಭಿವೃದ್ಧಿಪಡಿಸುವ ಇಚ್ಛಾ ಶಕ್ತಿಯ ಕೊರತೆ ಇದೆ. ಸಿದ್ದರಾಮಯ್ಯನವರನ್ನು ಕಡೆಗಣಿಸಿ ರಾಜಕಾರಣ ಮಾಡುವುದು ಅಷ್ಟು ಸುಲಭ ಅಲ್ಲ. ಮಾಸ್ ಲೀಡರ್ಸ್ ಅಧಿಕಾರದಲ್ಲಿರಲಿ, ಇಲ್ಲದಿರಲಿ ಅವರ ಪ್ರಭಾವ ಸರಕಾರದ ಮೇಲೆ ಇರುತ್ತದೆ ಎಂದರು.
ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕೆಂದು ರಾಮಲಿಂಗಾರೆಡ್ಡಿ ಮುನಿಸಿಕೊಂಡ ವಿಚಾರದ ಬಗ್ಗೆ ಮಾತನಾಡಿ, ಬೆಂಗಳೂರಿನಲ್ಲಿ ಅತಿವೃಷ್ಟಿಯಲ್ಲಿ ಲಾಭ ಇದೆ. ಬೆಂಗಳೂರಿನಲ್ಲಿ ಮಳೆಗೂ ಬೆಳೆಗೂ ಏನು ಸಂಬಂಧ ಇಲ್ಲ. ಬೆಂಗಳೂರಿನಲ್ಲಿ ಮಳೆ ಜಾಸ್ತಿ ಬಂದರೂ ಬರದಿದ್ದರೂ ಬೆಳೆ ಇರುತ್ತದೆ ಎಂದರು.
ರಾಜ್ಯದ ಮೂರು ವರ್ಷದ ಸರಕಾರದ ಅವಲೋಕನ ಮಾಡಿದಾಗ ಭ್ರಷ್ಟಚಾರ ರಹಿತ ಆಡಳಿತ ಕೊಡಬಹುದು ಅನಿಸುತ್ತಿಲ್ಲ. ಡಿಕೆಶಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಬರಲಿ ಎಂದು ನಿರೀಕ್ಷೆ ಮಾಡುತ್ತೇವೆ. ಡಿಕೆಶಿ ಆದಾಯದ ಹಾಗೇ ರಾಜ್ಯದ ಆದಾಯವೂ ಏರಿಕೆ ಆಗಲಿ. ನವ ಕರ್ನಾಟಕದ ನಿರ್ಮಾತೃ ಎಂಬ ಬಿರುದು ನಿಮಗೆ ಸಿಗುವಂತೆ ಆಗಲಿ ಎಂದರು.
ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅಣ್ಣಾಮಲೈ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ನಾನು ಒಪ್ಪುವುದಿಲ್ಲ. ಅಣ್ಣಾಮಲೈ ಮೂಲಕ ದೇಶಕ್ಕೆ ರಾಜ್ಯಕ್ಕೆ ಒಳ್ಳೆದಾಗಲಿ. ದೇಶಭಕ್ತಿಯನ್ನು ಉಳಿಸಿಕೊಂಡು ರಾಜಕಾರಣ ಮಾಡುವುದಾದರೆ ನಾನು ಯಾಕೆ ಬೇಡ ಎನ್ನಲಿ ಎಂದು ಪ್ರಶ್ನಿಸಿದರು.






