ಹಠಾತ್ ಸಾವುಗಳ ಅಧ್ಯಯನಕ್ಕೆ ತಜ್ಞರು-ವಿಜ್ಞಾನಿಗಳ ಸಮಿತಿ ರಚನೆಗೆ ಸಿದ್ದರಾಮಯ್ಯ ಸೂಚನೆ
ರಾಜಾರಾಂ ತಲ್ಲೂರು ಪತ್ರಕ್ಕೆ ಸ್ಪಂದಿಸಿದ ಸಿಎಂ

ಸಿದ್ದರಾಮಯ್ಯ/ರಾಜಾರಾಂ ತಲ್ಲೂರು
ಬೆಂಗಳೂರು : ರಾಜ್ಯದಲ್ಲಿ ಸಂಭವಿಸುತ್ತಿರುವ ಹಠಾತ್ ಸಾವುಗಳ ಕುರಿತಂತೆ ಹಾಗೂ ಮುಂದೆ ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸಿ, ವರದಿ ಪಡೆದು, ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಹಿರಿಯ ಲೇಖಕ ರಾಜಾರಾಂ ತಲ್ಲೂರು ಅವರು ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆದು, ರಾಜ್ಯದಲ್ಲಿ ಹೃದಯಾಘಾತ, ಹೃದಯಸ್ತಂಭನ, ಮೆದುಳು ಸಂಬಂಧಿ, ನರ ಸಂಬಂಧಿ ಮತ್ತಿತರ ಕಾರಣಗಳಿಂದಾಗಿ ಯುವ ಜನರು ಹಠಾತ್ ಸಾವಿಗೀಡಾಗುತ್ತಿರುವುದು ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಪ್ರತಿ ಸಾವು ಅವರ ಅವಲಂಬಿತ ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿದೆ. ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕುʼ ಎಂದು ಕೋರಿದ್ದರು.
ರಾಜಾರಾಂ ಅವರ ಪತ್ರವನ್ನು ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಠಾತ್ ಸಾವಿನ ಬಗ್ಗೆ ಸಂಶೋಧನೆ ನಡೆಸಲು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸುವುದಾಗಿ ತಿಳಿಸಿದ್ದಾರೆ.
ಡಾ.ಶ್ರೀನಿವಾಸ ಕಕ್ಕಿಲ್ಲಾಯ ಸೇವೆ ಪಡೆಯಲು ಸಲಹೆ ನೀಡಿದ ರಾಜಾರಾಂ ತಲ್ಲೂರು :
ಜನವರಿ 28ರಂದು ನಾನು ಕಳುಹಿಸಿದ್ದ ಇಮೇಲ್ ಆಧರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡು, ಈ ಹಠಾತ್ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ಒಂದು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸಿ ವರದಿ ಪಡೆದು, ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ನಿನ್ನೆ (ಫೆ. 06) ಸೂಚಿಸಿದ್ದಾರೆ ಎಂದು ಎಂದು ಟಿಪ್ಪಣಿಯ ಪ್ರತಿ ಲಗತ್ತಿಸಿ ಸಾಮಾಜಿಕ ಜಾಲತಾಣದಲ್ಲಿ ಲೇಖಕ ರಾಜಾರಾಂ ತಲ್ಲೂರು ಪೋಸ್ಟ್ ಮಾಡಿದ್ದಾರೆ.
ರಾಜ್ಯಸರಕಾರ ವಿಳಂಬವಾಗಿಯಾದರೂ ಇಂತಹದೊಂದು ಅಗತ್ಯ ತೀರ್ಮಾನವನ್ನು ಕೈಗೊಳ್ಳುವುದಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಅದಕ್ಕಾಗಿ ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ ಋಣಿ. ಶಾಸಕಾಂಗ ತೆಗೆದುಕೊಳ್ಳಬಹುದಾದ ತೀರ್ಮಾನ ತೆಗೆದುಕೊಂಡಿದೆ. ಇನ್ನು, ಈ ನಿಟ್ಟಿನಲ್ಲಿ ಕ್ಷಿಪ್ರವಾಗಿ ಕಾರ್ಯಾಚರಿಸುವುದು, ಕಾರ್ಯಾಂಗದ ಮುಖ್ಯಸ್ಥರಾಗಿ, ರಾಜ್ಯದ ಮುಖ್ಯಕಾರ್ಯದರ್ಶಿಗಳ ಜವಾಬ್ದಾರಿ. ಸ್ವತಃ ತಾಯಿ ಮನಸ್ಸಿನ ಮುಖ್ಯಕಾರ್ಯದರ್ಶಿಯವರು (ಆ ದಂಪತಿ ಈ ಹಿಂದೆ ದ.ಕ.ದಲ್ಲಿ ಜಿಲ್ಲಾಧಿಕಾರಿ-ಜಿಪಂ ಮುಖ್ಯಾಧಿಕಾರಿ ಆಗಿ ಕೆಲಸ ಮಾಡಿದ್ದನ್ನು ಗಮನಿಸಿದ್ದೇನೆ; ನನ್ನ ಗೆಳೆಯರಿಂದ ಕೇಳಿ ತಿಳಿದಿದ್ದೇನೆ) ಈ ನಿಟ್ಟಿನಲ್ಲಿ ವಿಳಂಬ ಮಾಡುವುದಿಲ್ಲ ಎಂದುಕೊಂಡಿದ್ದೇನೆ ಎಂದಿದ್ದಾರೆ.
ಡಾ.ಶ್ರೀನಿವಾಸ ಕಕ್ಕಿಲ್ಲಾಯರಂತಹ, ಸಾಂಕ್ರಾಮಿಕ ರೋಗಗಳ ನಿರ್ವಹಣೆಯಲ್ಲಿ ಸಾಕಷ್ಟು ತಳಮಟ್ಟದ ಅನುಭವ ಹಾಗೂ ದೂರದೃಷ್ಟಿ ಇರುವ ವೈದ್ಯರ ಸೇವೆಯನ್ನು ಈ ನಿಟ್ಟಿನಲ್ಲಿ ಸರಕಾರ ಪಡೆಯುವಂತಾಗಲಿ. ಸರಕಾರ ಕ್ಷಿಪ್ರ ಕ್ರಮ ಕೈಗೊಂಡು, ಅಕಾರಣವಾಗಿ ಸಾಯಲಿರುವ ಕೆಲವಾದರೂ ಜೀವಗಳನ್ನು ಉಳಿಸುವುದು ಸಾಧ್ಯವಾದರೆ, ಅದಕ್ಕಿಂತ ದೊಡ್ಡ ಜನಸೇವೆ ಬೇರೆ ಇಲ್ಲ ಎಂದು ಹೇಳಿದ್ದಾರೆ.







