ಬಿಡದಿ ಬಾಲಕಿಯ ಹತ್ಯೆ ಪ್ರಕರಣ | ಎಫ್ಎಸ್ಎಲ್ ವರದಿ ಪ್ರಕಾರ ಅತ್ಯಾಚಾರ ನಡೆದಿಲ್ಲ : ಎಸ್ಪಿ ಶ್ರೀನಿವಾಸ ಗೌಡ

ಎಸ್ಪಿ ಶ್ರೀನಿವಾಸ ಗೌಡ
ಬೆಂಗಳೂರು : ರಾಮನಗರ ಜಿಲ್ಲೆಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿಯ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಎಸ್ಎಲ್ ವರದಿ ಬಂದಿದ್ದು, ಅತ್ಯಾಚಾರ ನಡೆದಿಲ್ಲವೆಂದು ಖಚಿತವಾಗಿದೆ. ಈವರೆಗೆ ಯಾವುದೇ ಆರೋಪಿಯನ್ನು ಬಂಧಿಸಿಲ್ಲ ಎಂದು ರಾಮನಗರ ಎಸ್ಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಈ ಸಂಬಂಧ ಶನಿವಾರ ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ 10 ಜನರನ್ನು ವಿಚಾರಣೆ ಮಾಡಿದ್ದೆವು. ಆದರೆ, ಯಾರದ್ದೂ ಪಾತ್ರವಿರಲಿಲ್ಲ. ಈಗ ಎಫ್ಎಸ್ಎಲ್ ವರದಿ ಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ವರದಿ ನೀಡಿದೆ ಎಂದರು.
ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಆ ವರದಿಯ ಬಳಿಕ ಬಾಲಕಿ ಸಾವಿನ ಕಾರಣ ತಿಳಿಯುತ್ತದೆ. ನಾವು ಸಹ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ದೇಹದ ಮೇಲೆ ಸುಟ್ಟಕಲೆಗಳಿವೆ ಎಂದು ಜಾಲತಾಣದಲ್ಲಿ ವದಂತಿ ಹಬ್ಬಿಸಲಾಗಿತ್ತು. ಇದೆಲ್ಲವೂ ಕಪೋಲ ಕಲ್ಪಿತ. ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಶ್ರೀನಿವಾಸ ಗೌಡ ಹೇಳಿದರು.
ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ರೈಲಿಗೆ ಸಿಲುಕಿ ಬಾಲಕಿ ಮೃತಪಟ್ಟಿರುವುದಾಗಿ ಕಂಡು ಬಂದಿದೆ. ಆದರೆ ಸದ್ಯದಲ್ಲೇ ಖಚಿತವಾಗಿ ಹೇಳಲು ಬರುವುದಿಲ್ಲ. ಮರಣೋತ್ತರ ವರದಿ ಬರಬೇಕು ಎಂದು ಎಸ್ಪಿ ಶ್ರೀನಿವಾಸ ಗೌಡ ತಿಳಿಸಿದರು.







