ರಾಜ್ಯ ಬಜೆಟ್ | ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 7,900 ಕೋಟಿ ರೂ.ಪ್ರಸ್ತಾವನೆ ಸಲ್ಲಿಕೆ : ಝಮೀರ್ ಅಹ್ಮದ್

ಬೆಂಗಳೂರು : ರಾಜ್ಯ ಸರಕಾರದ 2026-27ನೇ ಸಾಲಿನ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 7,900 ಕೋಟಿ ರೂ. ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಗುರುವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ಆಯೋಜಿಸಲಾಗಿದ್ದ 2025-26ನೆ ಸಾಲಿನ ಸ್ವಾವಲಂಬಿ ಸಾರಥಿ, ವೃತ್ತಿ ಪ್ರೋತ್ಸಾಹ ಸೇರಿದಂತೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ರೂ.ಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಕಳೆದ ವರ್ಷ ನಮ್ಮ ಇಲಾಖೆಗೆ 4,500 ಕೋಟಿ ರೂ.ಗಳನ್ನು ನೀಡಿದ್ದರು. 2026-27ನೆ ಸಾಲಿಗೆ 7900 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಸಿದ್ದೇವೆ. ಕನಿಷ್ಠ 6000 ರಿಂದ 6500 ಕೋಟಿ ರೂ.ಸಿಗುವ ನಿರೀಕ್ಷೆಯಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಅಲ್ಪಸಂಖ್ಯಾತರ ಸಮುದಾಯದವರು ನವೋದ್ಯಮಗಳನ್ನು ಆರಂಭಿಸಲು 2025-26ನೆ ಸಾಲಿನಲ್ಲಿ ಎಲಿವೇಟ್ ಮೈನಾರಿಟೀಸ್ ಕಾರ್ಯಕ್ರಮದ ಮೂಲಕ 30 ನವೋದ್ಯಮಗಳನ್ನು ಗುರುತಿಸಿ 9 ಕೋಟಿ ರೂ.ಆರ್ಥಿಕ ನೆರವು ಒದಗಿಸಲಾಗಿದೆ. ಪ್ರತಿಯೊಂದು ನವೋದ್ಯಮವು 21 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳ ನೆರವು ಪಡೆದಿದೆ ಎಂದು ಅವರು ಹೇಳಿದರು.
ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ 12,751 ವಿದ್ಯಾರ್ಥಿಗಳಿಗೆ 131.39 ಕೋಟಿ ರೂ., ವಿದೇಶ ಶಿಕ್ಷಣ ಯೋಜನೆಯಡಿ 200 ಫಲಾನುಭವಿಗಳಿಗೆ 20 ಕೋಟಿ ರೂ., ನೇರ ವ್ಯಾಪಾರ ಸಾಲ ಯೋಜನೆಯಡಿ 100 ಫಲಾನುಭವಿಗಳಿಗೆ 15 ಕೋಟಿ ರೂ.ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಮುದಾಯ ಆಧಾರಿತ ತರಬೇತಿ ಯೋಜನೆಯಡಿ 1085 ಫಲಾನುಭವಿಗಳಿಗೆ 6.56 ಕೋಟಿ ರೂ. ನೆರವು ಒದಗಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ವೃತ್ತಿ ಪ್ರೋತ್ಸಾಹ ಯೋಜನೆಯಡಿ 550 ಫಲಾನುಭವಿಗಳಿಗೆ 50 ಸಾವಿರ ರೂ.ಸಬ್ಸಿಡಿ ಹಾಗೂ 50 ಸಾವಿರ ರೂ.ಸಾಲ ಸೇರಿದಂತೆ ಒಟ್ಟು ತಲಾ 1 ಲಕ್ಷ ರೂ.ಗಳಂತೆ 5.50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಶ್ರಮ ಶಕ್ತಿ ಯೋಜನೆಯಡಿ 1000 ಫಲಾನುಭವಿಗಳಿಗೆ ತಲಾ 50 ಸಾವಿರ ರೂ.(25 ಸಾವಿರ ರೂ.ಸಬ್ಸಿಡಿ ಹಾಗೂ 25 ಸಾವಿರ ರೂ.ಸಾಲ)ಗಳಂತೆ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಚಾಲಕರು ಮಾಲಕರು ಆಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿರುವ ಸ್ವಾವಲಂಬಿ ಸಾರಥಿ ಯೋಜನೆಯಡಿ(ಟ್ಯಾಕ್ಸಿ ಮತ್ತು ಗೂಡ್ಸ್) 623 ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ 174 ಫಲಾನುಭವಿಗಳಿಗೆ ಗೂಡ್ಸ್ ಆಟೋಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಒಟ್ಟು 797 ಫಲಾನುಭವಿಗಳಿಗೆ 20 ಕೋಟಿ ರೂ.ಗಳ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಮನುಷ್ಯನಿಗೆ ಶಿಕ್ಷಣ ತುಂಬಾ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಶಿಕ್ಷಣವು ಒಂದು ಪ್ರಬಲ ಅಸ್ತ್ರ. ಪ್ರತಿಯೊಬ್ಬರಿಗೂ ತನ್ನ ಹಾಗೂ ತನ್ನ ಕುಟುಂಬದ ಭವಿಷ್ಯ ರೂಪಿಸಲು ಶಿಕ್ಷಣ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮಾತನಾಡಿ, 2025-26ನೆ ಸಾಲಿನಲ್ಲಿ ಕೆಎಂಡಿಸಿ ವತಿಯಿಂದ ವಿವಿಧ ಸವಲತ್ತುಗಳಿಗಾಗಿ ಆನ್ಲೈನ್ ಮೂಲಕ 60 ಸಾವಿರ ಮಂದಿ ಅರ್ಜಿ ಹಾಕಿದ್ದರು. ಇದರಲ್ಲಿ 20 ಸಾವಿರ ಅರ್ಜಿಗಳನ್ನು ಸ್ವೀಕೃತಗೊಳಿಸಿ ಸುಮಾರು 250 ಕೋಟಿ ರೂ.ವೆಚ್ಚದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಅಲ್ಪಸಂಖ್ಯಾತ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ರಾಜ್ಯ ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳು ಅದರ ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಮೌಲಾನಾ ಮಕ್ಸೂದ್ ಇಮ್ರಾನ್, ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ವ್ಯವಸ್ಥಾಪಕ ನಿರ್ದೇಶಕ ಶೇಖ್ ಲತೀಫ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






