ಅಸಾಧಾರಣ ಸಂದರ್ಭಗಳಲ್ಲಿ ವಿದ್ಯುತ್ ಉತ್ಪಾದಕರಿಗೆ ರಾಜ್ಯ ಸರ್ಕಾರಗಳೂ ಆದೇಶ ನೀಡಬಹುದು: ಹೈಕೋರ್ಟ್

ಕರ್ನಾಟಕ ಹೈಕೋರ್ಟ್ (File Photo: PTI)
ಬೆಂಗಳೂರು: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಉಂಟಾಗಿದ್ದ ವಿದ್ಯುತ್ ಕೊರತೆ ಸರಿದೂಗಿಸಲು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಉತ್ಪಾದಕ ಕಂಪನಿಗಳು ಗರಿಷ್ಠ ಪ್ರಮಾಣದ ವಿದ್ಯುತ್ ಅನ್ನು ಸರ್ಕಾರದ ಗ್ರಿಡ್ಗೆ ಪೂರೈಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಎತ್ತಿ ಹಿಡಿದಿರುವ ಹೈಕೋರ್ಟ್, ಅಸಾಧಾರಣ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರಕ್ಕೆ ಇರುವಂತೆ ರಾಜ್ಯ ಸರ್ಕಾರಕ್ಕೂ ಅಂಥ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಗರಿಷ್ಠ ಪ್ರಮಾಣದ ವಿದ್ಯುತ್ ಅನ್ನು ಸರ್ಕಾರದ ಗ್ರಿಡ್ಗೆ ಪೂರೈಸುವಂತೆ ಹೊರಡಿಸಲಾಗಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಸರ್ಕಾರದ ಮೇಲ್ಮನವಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಅನು ಸಿವರಾಮನ್ ಹಾಗೂ ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿದ್ಯುತ್ ಕೊರತೆಯಂಥ ಅಸಾಧಾರಣ ಸಂದರ್ಭಗಳಲ್ಲಿ ರಾಜ್ಯದ ವ್ಯಾಪ್ತಿಯಲ್ಲಿರುವ ವಿದ್ಯುತ್ ಉತ್ಪಾದಕ ಕಂಪನಿಗಳಿಗೆ ರಾಜ್ಯದ ಗ್ರಿಡ್ಗೆ ವಿದ್ಯುತ್ ಪೂರೈಸುವಂತೆ ಆದೇಶಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇರುವಂತೆ ವಿದ್ಯುತ್ ಕಾಯ್ದೆ ಸೆಕ್ಷನ್ 11ರ ಅಡಿ ರಾಜ್ಯ ಸರ್ಕಾರಕ್ಕೂ ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸಿ ಬೇರೆ ರಾಜ್ಯಗಳಿಗೆ ಕಂಪನಿಗಳು ವಿದ್ಯುತ್ ಪೂರೈಸಿದರೂ ಕೆಲವು ಸಂದರ್ಭದಲ್ಲಿ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದ ಅಡಿ ಸೂಕ್ತ ನಿರ್ದೇಶನ ಮತ್ತು ಪರಿಹಾರ ಖಾತ್ರಿಪಡಿಸಲು ರಾಜ್ಯ ಸರ್ಕಾರವೇ ಸೂಕ್ತ ಸರ್ಕಾರವಾಗಿದೆ ಎಂಬುದು ಕಾಯ್ದೆಯ ಸೆಕ್ಷನ್ 11ರ ಸುಸಂಬದ್ಧ ವ್ಯಾಖ್ಯಾನವಾಗಿದೆ. ಸೆಕ್ಷನ್ 11ರ ಪ್ರಕಾರ ಅಸಾಧಾರಣ ಸಂದರ್ಭ, ಸನ್ನಿವೇಶಗಳು ಪ್ರಾದೇಶಿಕ ಸ್ವರೂಪದ್ದಾಗಿದ್ದು, ನಿರ್ದಿಷ್ಟ ಬಿಕ್ಕಟ್ಟುಗಳ ಸಮಯದಲ್ಲಿ ರಾಜ್ಯದೊಳಗೆ ಭೌತಿಕವಾಗಿ ನೆಲೆಗೊಂಡಿರುವ ವಿದ್ಯುತ್ ಉತ್ಪಾದಕ ಕಂಪನಿಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಿಯಂತ್ರಣ ನೀಡುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ:
ಮುಂಗಾರು ವೈಫಲ್ಯದಿಂದ ಜಲಾಶಯಗಳು ಭರ್ತಿಯಾಗದೇ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿ ರಾಜ್ಯ ಸರ್ಕಾರಕ್ಕೆ 3,000-3,500 ಮೆಗಾ ವ್ಯಾಟ್ನಷ್ಟು ವಿದ್ಯುತ್ ಕೊರತೆಯಾಗಿತ್ತು. ಇದರಿಂದ ರಾಜ್ಯ ಸರ್ಕಾರ ಪ್ರತಿ ಯೂನಿಟ್ಗೆ 4.86 ರೂ. ನಂತೆ ತಾತ್ಕಾಲಿಕ ಟಾರಿಫ್ ಭಾಗವಾಗಿ ಗರಿಷ್ಠ ಪ್ರಮಾಣದ ವಿದ್ಯುತ್ ಅನ್ನು ಸರ್ಕಾರದ ಗ್ರಿಡ್ಗೆ ಪೂರೈಸುವಂತೆ ಎಲ್ಲ ವಿದ್ಯುತ್ ಉತ್ಪಾದಕ ಕಂಪನಿಗಳಿಗೆ 2023ರ ಅಕ್ಟೋಬರ್ 16ರಂದು ಕಾಯ್ದೆಯ ಸೆಕ್ಷನ್ 11ರ ಅಡಿ ಆದೇಶ ಹೊರಡಿಸಿತ್ತು.
ಸರ್ಕಾರದ ಆದೇಶ ಪ್ರಶ್ನಿಸಿ ಎನ್ಎಸ್ ಶುಗರ್ಸ್ ಲಿಮಿಟೆಡ್, ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್ ಮತ್ತು ಅಲ್ಟಿಲಿಯಮ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು 2024ರ ಮಾರ್ಚ್ 11ರಂದು ಪುರಸ್ಕರಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕಾಯ್ದೆಯ ಸೆಕ್ಷನ್ 11ರ ಅಡಿ ಅಸಾಧಾರಣ ಸಂದರ್ಭಗಳಲ್ಲಿ ಅಂತರ ರಾಜ್ಯ ವಿದ್ಯುತ್ ಪ್ರಸರಣದಲ್ಲಿ ತೊಡಗಿರುವ ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಸೂಕ್ತ ಸರ್ಕಾರವಾಗಿದೆ ಎಂದು ಆದೇಶಿಸಿತ್ತು.
ಜತೆಗೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗ್ರಿಡ್ಗಳು ಷರತ್ತಿಗೆ ಒಳಪಟ್ಟು ರಫ್ತು ಮಾಡುವ ಗರಿಷ್ಠ ಪ್ರಮಾಣದ ವಿದ್ಯುತ್ ಅನ್ನು ರಾಜ್ಯದ ಗ್ರಿಡ್ಗಳಿಗೆ ಪೂರೈಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿತ್ತು. ಇದನ್ನು ರಾಜ್ಯ ಸರ್ಕಾರ ವಿಭಾಗೀಯ ನ್ಯಾಯಪೀಠದಲ್ಲಿ ಪ್ರಶ್ನಿಸಿತ್ತು.







