ಸುಜಾತಾ ಭಟ್ಗೆ ರಕ್ಷಣೆ ಕೋರಿ ಧರ್ಮಸ್ಥಳ ಪ್ರಕರಣದ ಎಸ್ಐಟಿಗೆ ಪತ್ರದ ಬರೆದ ರಾಜ್ಯ ಮಹಿಳಾ ಆಯೋಗ

ಸುಜಾತಾ ಭಟ್
ಬೆಂಗಳೂರು, ಆ.28 : ಸುಜಾತಾ ಭಟ್ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೋರಿ ಧರ್ಮಸ್ಥಳ ಪ್ರಕರಣದ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಗುರುವಾರ ಪತ್ರ ಬರೆದಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ/ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಶವಗಳ ಹೂತಿಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ರಾಜ್ಯ ಸರಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸದ್ಯ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಅನನ್ಯಾ ಭಟ್ ನಾಪತ್ತೆ ಪ್ರಕರಣವೊಂದರ ದೂರುದಾರರಾದ ಸುಜಾತಾ ಭಟ್ ಅವರನ್ನು ಎರಡು ವಾರಗಳಿಂದ ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ ಹೇಳಿಕೆ ನೀಡಲು ಪೀಡಿಸುವುದು, ಅವರನ್ನು ತೇಜೋವಧೆ ಮಾಡಿ ಹೀಯಾಳಿಸಿ ಸುದ್ದಿ ಮಾಡುವುದು ನಡೆಯುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಾಧ್ಯಮದವರು ತಡ ರಾತ್ರಿಯಲ್ಲಿ ಸುಜಾತಾ ಭಟ್ ಅವರ ಮನೆಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡುವುದು, ಕಾರಿನಲ್ಲಿ ಕೂರಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುವ ಹಾಗೆ ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು, ಅವರನ್ನು ಮಾನಸಿಕವಾಗಿ ಕುಗ್ಗಿಸುವ ವರದಿ ಪ್ರಸಾರ ಮಾಡಿರುವುದನ್ನು ಆಯೋಗವು ಗಮನಿಸಿದೆ. ಮಹಿಳೆಯರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡಕ್ಕೆ ಮಹಿಳೆಯರು, ಸಂತ್ರಸ್ಥರು, ನಿರ್ಭೀತಿಯಿಂದ ದೂರನ್ನು ನೀಡಲು ಅವಕಾಶ ಮಾಡಿಕೊಟ್ಟು, ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು ಅವರಿಗೆ ರಕ್ಷಣೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ದೂರುದಾರೆ ಸುಜಾತಾ ಭಟ್ ಅವರು ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಂಭವವಿರುತ್ತದೆ. ಇದನ್ನು ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ವಿಶೇಷ ತನಿಖಾ ತಂಡದಿಂದ ಸುಜಾತಾ ಭಟ್ ಅವರಿಗೆ ಭದ್ರತೆ ಒದಗಿಸಿ, ನಿರ್ಭೀತಿಯಿಂದ ಅವರು, ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ತುರ್ತಾಗಿ ಕಳುಹಿಸಿಕೊಡಬೇಕು ಎಂದು ಪತ್ರದಲ್ಲಿ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮನವಿ ಮಾಡಿದ್ದಾರೆ.







