‘ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ’ ವರದಿ ಅಧಿವೇಶನದಲ್ಲಿ ಮಂಡಿಸಿ : ಸುನಿಲ್ ಕುಮಾರ್ ಆಗ್ರಹ

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಸಿದ್ದಪಡಿಸಿದ ‘ಕರ್ನಾಟಕ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಗಣತಿ) ವರದಿಯ ಕುರಿತು ರಾಜ್ಯ ಸರಕಾರ ತನ್ನ ನಿಲುವು ಪ್ರಕಟ ಮಾಡಬೇಕು. ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಬುಧವಾರ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 450ಕೋಟಿ ರೂ.ಗಳಿಗೂ ಹೆಚ್ಚು ಜನರ ತೆರಿಗೆ ಹಣವನ್ನು ವೆಚ್ಚ ಮಾಡಿ ನಡೆಸಲಾದ ಸಮೀಕ್ಷೆಯ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ. ಅಧಿವೇಶನದಲ್ಲಿ ಅದಕ್ಕಾಗಿ ಪ್ರತ್ಯೇಕ ಸಮಯ ನಿಗದಿಪಡಿಸಬೇಕು. ವರದಿಯಲ್ಲಿ ಏನಿದೆ ಎಂದು ತಿಳಿಯಲು ನಾವು ಬಯಸಿದ್ದೇವೆ ಎಂದರು.
ಸರಕಾರದ ಬಳಿ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವೇ ಇಲ್ಲದಿದ್ದರೆ ಬಜೆಟ್ ಕಾರ್ಯಕ್ರಮಗಳನ್ನು ಹೇಗೆ ಮಾಡಲು ಸಾಧ್ಯ. ಸೌಲಭ್ಯಗಳನ್ನು ಹೇಗೆ ಕೊಡಲು ಸಾಧ್ಯ. ಈ ಸರಕಾರ ಯಾವುದನ್ನು ಘೋಷಣೆ ಮಾಡುತ್ತದೊ ಅದನ್ನು ಪೋಷಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಆಗಿನ ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಮಧುಸೂದನ್ ನಾಯಕ್ ವರದಿ ಸ್ವೀಕಾರ ಮಾಡಿದರು. ಕಾಂತರಾಜು ವರದಿಯನ್ನೂ ಹಿಂದಿನ ಸಿಎಂ ತೆಗೆದುಕೊಳ್ಳಲೇ ಇಲ್ಲ. ನಂತರ ಜಯಪ್ರಕಾಶ್ ಹೆಗ್ಡೆ ವರದಿಯನ್ನು ಸಂಪುಟದ ಮುಂದೆ ತಂದರೂ ಸಹೋದ್ಯೋಗಿಗಳು ವಿರೋಧ ಮಾಡಿದರು ಎಂದು ಚರ್ಚೆ ಮಾಡಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಹಿಂದೇಟು ಹಾಕಿದರು. ಇದೀಗ ಮಧುಸೂದನ್ ನಾಯಕ್ ವರದಿಯನ್ನೂ ಸರಕಾರ ಕಸದ ಬುಟ್ಟಿಗೆ ಹಾಕಬಾರದು ಎಂದು ಆಗ್ರಹಿಸಿದರು.
ಒಬಿಸಿ ವರದಿಯ ಬಗ್ಗೆ ಪ್ರಶ್ನಿಸುವ ಹಕ್ಕು ರಾಜ್ಯದ ಜನರಿಗಿದೆ. ವರದಿ ಬಹಿರಂಗವಾದರೆ ಬಿಜೆಪಿಗೆ ಆತಂಕ ಇಲ್ಲ. ಭಾಷಣದಲ್ಲಿ ಮಾತ್ರ ಅಹಿಂದ ಬಗ್ಗೆ ಸರಕಾರ ಮಾತನಾಡಬಾರದು. ವರದಿಯಲ್ಲಿ ಜಾತಿಗಳೆಷ್ಟಿವೆ ಎಂದು ತಿಳಿಯುವುದು ನಮ್ಮ ಉದ್ದೇಶವಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಏನಿದೆ ಎಂದು ನೋಡುವುದು ನಮ್ಮ ಉದ್ದೇಶ ಎಂದು ಹೇಳಿದರು.






