ಸುಪ್ರೀಂ ಕೋರ್ಟ್ ನಲ್ಲಿ ದರ್ಶನ್ ಜಾಮೀನು ಯತ್ನ ವಿಫಲ

Photo Credit: Instagram/darshanthoogudeepashrinivas
ಹೊಸದಿಲ್ಲಿ, ಜು. 3: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ನಟ ದರ್ಶನ್ ನಡೆಸಿದ ಮತ್ತೊಂದು ಪ್ರಯತ್ನಕ್ಕೂ ಹಿನ್ನಡೆಯಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ತುರ್ತು ಸಂದರ್ಭಗಳಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಈ ಅರ್ಜಿ ಪೂರ್ಣ ಪ್ರಮಾಣದ ವಿಚಾರಣೆಯ ಹಂತ ತಲುಪಲೇ ಇಲ್ಲ. ಸುಪ್ರೀಂ ಕೋರ್ಟ್ನ ರಿಜಿಸ್ಟ್ರಾರ್ ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವ ಹಂತದಲ್ಲೇ ತಿರಸ್ಕರಿಸಿದ್ದು, ಈ ಅರ್ಜಿ ವಿಚಾರಣೆಗೆ ಅರ್ಹವಾಗಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಹಾಗೆಯೇ, ಒಂದು ವರ್ಷದೊಳಗೆ ಪ್ರಮುಖ ಸಾಕ್ಷಿಗಳ ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ದರ್ಶನ್ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಅದು ಹೇಳಿತ್ತು. ಇದರ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಜಾಮೀನು ಸಂಬಂಧಿ ಆದೇಶದಲ್ಲಿ ಮಾರ್ಪಾಡು ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಜಾಮೀನು ಕೋರಲು ಅನುಮತಿ ನೀಡಬೇಕು ಎನ್ನುವುದು ಅವರ ಮನವಿಯಾಗಿತ್ತು.
ಆದರೆ, ರಿಜಿಸ್ಟ್ರಾರ್ ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ನಿರಾಕರಿಸಿದ್ದಾರೆ.
ಈ ಹಿಂದೆ ದರ್ಶನ್ ಅವರಿಗೆ ವೈದ್ಯಕೀಯ ಆಧಾರದಲ್ಲಿ ಜಾಮೀನು ಮಂಜೂರಾಗಿತ್ತು ಹಾಗೂ ಅವರು ಕೆಲವು ತಿಂಗಳುಗಳ ಕಾಲ ಜೈಲಿನಿಂದ ಹೊರಗಿದ್ದರು. ಆದರೆ, ನಂತರ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಗೊಳಿಸಿತು ಹಾಗೂ ಅವರ ಜಾಮೀನು ಅರ್ಜಿಗಳ ಮೇಲೆ ಮಿತಿಗಳನ್ನು ಹೇರಿತು.
ಒಂದು ವರ್ಷದವರೆಗೆ ನಟ ದರ್ಶನ್ ಸಾಮಾನ್ಯ ಜಾಮೀನು ಕೋರದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿತ್ತು.
►ಕಾನೂನು ತಂಡದಲ್ಲಿ ಬದಲಾವಣೆ
ಈ ಅವಧಿಯಲ್ಲಿ, ದರ್ಶನ್ ಅವರ ಕಾನೂನು ತಂಡದಲ್ಲೂ ಬದಲಾವಣೆಯಾಗಿದೆ. ಈ ಹಿಂದೆ ದರ್ಶನ್ ಮತ್ತು ಇತರ ಇಬ್ಬರು ಆರೋಪಿಗಳ ಪರವಾಗಿ ವಾದ ಮಂಡಿಸುತ್ತಿದ್ದ ಸುನೀಲ್ ಕುಮಾರ್ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಈಗ ಹಷ್ಮತ್ ಪಾಷಾ ದರ್ಶನ್ ಪರವಾಗಿ ಕೆಲಸ ಮಾಡುತ್ತಿದ್ದಾರೆ.






