ಕರ್ನಾಟಕದ ತೊಗರಿ ಬೆಳೆಗಾರರಿಗೆ ವಾರ್ಷಿಕ 1550 ಕೋಟಿ ರೂ.ನಷ್ಟ: ಬಿಜೆಪಿ ವಿರುದ್ಧ ಸುರ್ಜೇವಾಲ ವಾಗ್ದಾಳಿ

ಬೆಂಗಳೂರು: ಭಾರತದ ಒಟ್ಟು ತೊಗರಿ ಉತ್ಪಾದನೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಶೇ.50ರಷ್ಟು ಪಾಲು ಹೊಂದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ತೊಗರಿ ಬೆಳೆಗಾರರು ವಾರ್ಷಿಕ 1550 ಕೋಟಿ ರೂ.ನಷ್ಟ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2024-25ರಲ್ಲಿ ಒಂದು ಕ್ವಿಂಟಾಲ್ ತೊಗರಿಗೆ ಕನಿಷ್ಠ ಬೆಂಬಲ ಬೆಲೆ(ಎಂ.ಎಸ್.ಪಿ) 7550 ರೂ.ಆಗಿತ್ತು. 2025-26ರಲ್ಲಿ ಎಂ.ಎಸ್.ಪಿ ಕ್ವಿಂಟಾಲ್ಗೆ 8 ಸಾವಿರ ರೂ.ನಿಗದಿ ಮಾಡಿದ್ದಾರೆ ಎಂದು ಹೇಳಿದರು.
2024-25ರಲ್ಲಿ ಎಂ.ಎಸ್.ಪಿ ಪ್ರತಿ ಕ್ವಿಂಟಾಲ್ಗೆ 7500 ರೂ.ಇದ್ದರೂ 6 ಸಾವಿರ ರೂ.ಗಳಿಗೆ ಒಂದು ಕ್ವಿಂಟಾಲ್ ತೊಗರಿ ಮಾರಾಟ ಮಾಡುವಂತೆ ರಾಜ್ಯದ ರೈತರನ್ನು ಒತ್ತಾಯಿಸಲಾಗಿತ್ತು. 2024-25ರಲ್ಲಿ ಕರ್ನಾಟಕದಲ್ಲಿ ಒಟ್ಟು ತೊಗರಿ ಉತ್ಪಾದನೆ 10 ಲಕ್ಷ ಕ್ವಿಂಟಾಲ್ ಆಗಿತ್ತು ಎಂದು ಅವರು ಮಾಹಿತಿ ನೀಡಿದರು.
ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ ತನ್ನ 2025-26ರ ವರದಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ರೈತರಿಗೆ ತೊಗರಿ ಉತ್ಪಾದನೆಯ ವೆಚ್ಚ ಕ್ವಿಂಟಾಲ್ಗೆ 11,032 ರೂ.ಎಂದು ಗಮನ ಸೆಳೆದಿದೆ ಮತ್ತು ಕ್ವಿಂಟಾಲ್ಗೆ 16,548 ರೂ. ಎಂ.ಎಸ್.ಪಿ ನೀಡುವಂತೆ ಬೇಡಿಕೆ ಇಟ್ಟಿದೆ ಎಂದು ದಾಖಲಿಸಿದೆ. ಆದರೂ, ಮೋದಿ ಸರಕಾರವು ಕರ್ನಾಟಕದ ರೈತರಿಗೆ ದ್ರೋಹ ಬಗೆದು ಎಂ.ಎಸ್.ಪಿಯನ್ನು ಕ್ವಿಂಟಾಲ್ಗೆ 8 ಸಾವಿರ ರೂ.ನಿಗದಿ ಮಾಡಿದೆ ಎಂದು ಅವರು ದೂರಿದರು.
ಕೇಂದ್ರ ಕೃಷಿ ಸಚಿವಾಲಯದ ದತ್ತಾಂಶದ ಪ್ರಕಾರ 2020-23ನೆ ಸಾಲಿನಲ್ಲಿ ಭಾರತದ ರೈತರು 276.90 ಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಉತ್ಪಾದಿಸಿದ್ದಾರೆ. ಆದರೆ, ಮೋದಿ ಸರಕಾರವು ಕೇವಲ 1.2 ಲಕ್ಷ ಟನ್ ಮಾತ್ರ ಎಂ.ಎಸ್.ಪಿ ಯಡಿ ಖರೀದಿಸಿದೆ. 2021ರ ಮೇ 15ರಿಂದ ರೈತ ಸಮುದಾಯಕ್ಕೆ ಹಾನಿ ಮಾಡಲು ಮತ್ತು ಕೆಲವು ವ್ಯಾಪಾರಿಗಳು ಮತ್ತು ಆಮದುದಾರರಿಗೆ ಪ್ರಯೋಜನವನ್ನು ನೀಡಲು ‘ಸುಂಕ ರಹಿತ’ವಾಗಿ ತೊಗರಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಅನುಮತಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
2025ರ ಜ.20ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ 2026ರ ಮಾ.31ರವರೆಗೆ ತೊಗರಿಯನ್ನು ‘ಸುಂಕ ರಹಿತ’ವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. 2022-23ರಲ್ಲಿ ವಿದೇಶಗಳಿಂದ 24.9 ಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. 2023-24ರಲ್ಲಿ ಅದು 48.4 ಲಕ್ಷ ಟನ್ಗಳಿಗೆ ತಲುಪಿದೆ. 2024-25ರಲ್ಲಿ 67 ಲಕ್ಷ ಟನ್ ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಸುರ್ಜೇವಾಲ ಹೇಳಿದರು.
ಕರ್ನಾಟಕದ ಕಲಬುರಗಿ, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ 3.7 ಲಕ್ಷ ಟನ್ಗಳಿಗಿಂತ ಹೆಚ್ಚು ಪ್ರೀಮಿಯಂ ಜಿಐ-ಟ್ಯಾಗ್ ಮಾಡಲಾದ ತೊಗರಿಯನ್ನು ಉತ್ಪಾದಿಸಿದರೆ, ನಾಫೆಡ್(ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಕೇವಲ 49 ಸಾವಿರ ಟನ್ಗಳನ್ನು ಎಂ.ಎಸ್.ಪಿ ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿದೆ. ಇದರಿಂದಾಗಿ 3.2 ಲಕ್ಷಕ್ಕೂ ಹೆಚ್ಚು ಟನ್ ತೊಗರಿಯನ್ನು ಎಂ.ಎಸ್.ಪಿ. ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ಸುರ್ಜೇವಾಲ ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಕೆನಡಾ ಹೊರತುಪಡಿಸಿ ಮ್ಯಾನ್ಮಾರ್, ಟಾಂಜಾನಿಯಾ ಮತ್ತು ಮೊಜಾಂಬಿಕ್ನಿಂದ ಅಗ್ಗದ, ಕಡಿಮೆ ಗುಣಮಟ್ಟದ ದ್ವಿದಳ ಧಾನ್ಯಗಳನ್ನು ಕೇಂದ್ರ ಸರಕಾರ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ, ದೀರ್ಘಾವಧಿಯ ಒಡಂಬಡಿಕೆ ಮಾಡಿಕೊಂಡಿದೆ. ಕೇಂದ್ರ ಸರಕಾರದ ಈ ನಡೆಯಿಂದಾಗಿ ಅತೀ ಹೆಚ್ಚು ತೊಗರಿ ಬೆಳೆಯುವಂತಹ ಕರ್ನಾಟಕ ಮತ್ತು ಮಹಾರಾಷ್ಟ್ರದ ರೈತರ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿಯುವಂತೆ ಮಾಡಲಾಗಿದೆ ಎಂದು ಅವರು ಕಿಡಿಗಾರಿದರು.
ಬಿಜೆಪಿ ಸರಕಾರ ದೇಶೀಯ ಉತ್ಪಾದನೆಯನ್ನು ಬೆಂಬಲಿಸುವುದಾಗಿ ಹೇಳಿಕೊಂಡರೂ, 21.7 ಲಕ್ಷ ಟನ್ ಬಟಾಣಿ ಮತ್ತು 15.1 ಲಕ್ಷ ಟನ್ ಕಡಲೆ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ. ಇದು ಗುಣಮಟ್ಟದ ದ್ವಿದಳ ಧಾನ್ಯಗಳನ್ನು ಉತ್ಪಾದಿಸುವಲ್ಲಿ ಹೂಡಿಕೆ ಮಾಡಿದ ಭಾರತೀಯ ರೈತರನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸುವಂತಾಗಿದೆ ಎಂದು ಸುರ್ಜೇವಾಲ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತರಿದ್ದರು.
‘ಕೇಂದ್ರ ಸಚಿವರು ರಾಜೀನಾಮೆ ನೀಡಲಿ’:
ಕೇಂದ್ರ ಸರಕಾರವು ರಾಜ್ಯದ ರೈತರ ಕತ್ತು ಹಿಸುಕುತ್ತಿದ್ದರೂ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಹಾಗೂ ಸ್ವಯಂ ಘೋಷಿತ ರೈತರ ಚಾಂಪಿಯನ್ ಎಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ? ರಾಜ್ಯದ ರೈತರಿಗೆ ಅನ್ಯಾಯ ವಾಗುತ್ತಿದ್ದರೂ ಅಧಿಕಾರಕ್ಕಾಗಿ ಕಣ್ಣು ಮುಚ್ಚಿಕುಳಿತಿರುವವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಬರಲಿ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದರು.







