‘ವಿಬಿ ಜಿ ರಾಮ್ ಜಿ’ ಅಡಿ ಮಾನವ ದಿನ ಸೃಜನೆ ಮಾಡದ ಪಿಡಿಒಗಳ ಅಮಾನತಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಸಚಿವ ಈಶ್ವರ ಖಂಡ್ರೆ
ಬೆಂಗಳೂರು: ಕಳೆದ ತಿಂಗಳಿನಿಂದ ಮನ್ರೇಗಾ ಬದಲಿಗೆ ಜಾರಿಯಾಗಿರುವ ವಿಬಿಜಿ ರಾಮ್ ಜಿಯಲ್ಲಿ ಉದ್ಯೋಗ ನೀಡದೆ, ಮಾನವ ದಿನ ಸೃಜನೆ ಮಾಡದೆ ನಿರ್ಲಕ್ಷ್ಯ ತೋರಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, 2025ರ ಜುಲೈ ತಿಂಗಳಲ್ಲಿ ಮನ್ರೇಗಾ ಅಡಿ ಉದ್ಯೋಗ ನೀಡಿ, ಮಾನವ ದಿನ ಸೃಜಿಸಿದ್ದ ಪಂಚಾಯತಿಗಳಲ್ಲಿ ಈ ವರ್ಷ ಜುಲೈನಲ್ಲಿ ಒಬ್ಬರಿಗೂ ಉದ್ಯೋಗ ನೀಡದಿದ್ದರೆ ಅಂತಹವರಿಗೆ ನೋಟಿಸ್ ಜಾರಿ ಮಾಡಿ ಎಂದರು.
ಬೆಂಗಳೂರು ಸುತ್ತಮುತ್ತ 382 ರೂ. ಕೂಲಿಗೆ ಜನರು ಮುಂದೆ ಬರುವುದಿಲ್ಲ ಎನ್ನಬಹುದು, ಆದರೆ, ಗ್ರಾಮೀಣ ಪ್ರದೇಶದ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮೀಣ ಅರ್ಹ ಫಲಾನುಭವಿಗಳಿಗೆ ಕೆಲಸ ನೀಡದೆ ಕರ್ತವ್ಯಲೋಪ ಎಸಗಿದ್ದಲ್ಲಿ ಕಾರಣ ಕೇಳಿ ನೋಟಿಸ್ ನೀಡಿ, ಉತ್ತರ ಪಡೆದು, ಒಂದೊಮ್ಮೆ ನಿರ್ಲಕ್ಷ್ಯ, ಉದಾಸೀನತೆ ಸಾಬೀತಾದಲ್ಲಿ ಅಮಾನತು ಮಾಡುವಂತೆ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಸೂಚನೆ ನೀಡಿದರು.
ವಿಬಿಜಿ ರಾಮ್ ಜಿಯಡಿ ಪ್ರತಿ ದಿನ 5 ಲಕ್ಷ ಮಾನವದಿನ ಸೃಜನೆ ಆಗುವವರೆಗೆ ಕಾರ್ಯದರ್ಶಿಗಳು, ಆಯುಕ್ತರು ಎಲ್ಲ ಜಿಲ್ಲಾ ಪಂಚಾಯತಿಗಳ ಸಿಇಓಗಳೊಂದಿಗೆ ನಿತ್ಯ ವರ್ಚುವಲ್ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಬೇಕು. ಅದೇ ರೀತಿ ಸಿಇಓಗಳು ಇಓ, ಪಿಡಿಓಗಳೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು ಎಂದು ಸೂಚಿಸಿದರು.






