‘ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ’ ಅರ್ಜಿ ವಾಪಸ್ ಪಡೆದ ಟಾಟಾ ಪವರ್; ರೈತರ ಹೋರಾಟಕ್ಕೆ ಜಯ

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ(ಕೆಆರ್ ಇಸಿ) ಮುಂದೆ ಟಾಟಾ ಪವರ್ ಕಂಪೆನಿ ಸಲ್ಲಿಸಿದ್ದ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದ ‘ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ’ ಅರ್ಜಿಯನ್ನು ಹಿಂಪಡೆದಿದೆ. ಈ ಬೆಳವಣಿಗೆಯನ್ನು ಕಾರ್ಮಿಕ-ಜನಪರ ಸಂಘಟನೆಗಳು ಸ್ವಾಗತಿಸಿದ್ದು, ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಿಳಿಸಿದೆ.
ಶುಕ್ರವಾರ ಪ್ರಕಟಣೆ ನೀಡಿರುವ ಪ್ರಧಾನ ಕಾರ್ಯದರ್ಶಿ ಯಶವಂತ ಟಿ, ಕೆಇಆರ್ಸಿ ಮೂಲಗಳ ಪ್ರಕಾರ ಕಲಾಪದಲ್ಲಿ ಟಾಟಾ ಪವರ್ ಕಂಪೆನಿಯ ಪ್ರತಿನಿಧಿಯು, ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವ ಮನವಿ ಸಲ್ಲಿಸಿದರು. ವಿಚಾರಣೆ ವೇಳೆ ಅರ್ಜಿಯಲ್ಲಿ ಕೆಲ ಲೋಪಗಳು ಇರುವುದನ್ನು ಕೆಇಆರ್ಸಿ ಗಮನಿಸಿದ್ದು, ಬಳಿಕ ಅರ್ಜಿ ಹಿಂಪಡೆಯಲು ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿದೆ ಎಂದು ಹೇಳಿದ್ದಾರೆ.
ಟಾಟಾ ಕಂಪೆನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡದಂತೆ ಒತ್ತಾಯಿಸಿ ಎಡಪಕ್ಷಗಳು ವಿದ್ಯುತ್ ಖಾಸಗಿಕರಣ ವಿರೋಧಿಸಿ ಸಮಾವೇಶ ನಡೆಸಿದ್ದವು. ರಾಜ್ಯದ ಎಲ್ಲ ಜನರು ಆಕ್ಷೇಪಣೆ ಸಲ್ಲಿಸುವಂತೆ ಸಮಾವೇಶ ಮನವಿ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್, ಟಾಟಾ ಪವರ್ ಅರ್ಜಿ ಹಿಂಪಡೆಯಲು ನಡೆದ ಸಾರ್ವಜನಿಕ ಪ್ರತಿರೋಧ ಹಾಗೂ ವಿವಿಧ ಸಂಘಟನೆಗಳ ಒಗ್ಗಟ್ಟಿನ ಪ್ರಯತ್ನವೇ ಮುಖ್ಯ ಕಾರಣವೆಂದು ಹೇಳಿದೆ ಎಂದು ಅವರು ತಿಳಿಸಿದ್ದಾರೆ.




