ಸರಕಾರಕ್ಕೆ ಪಠ್ಯ ಪರಿಷ್ಕರಣೆಯ ವರದಿ ಸಲ್ಲಿಸಿದ ಡಾ.ಮಂಜುನಾಥ ಹೆಗಡೆ ನೇತೃತ್ವದ ಸಮಿತಿ: ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಿಗೆ ನೂತನ ಪಠ್ಯಪುಸ್ತಕಗಳು
ಪಠ್ಯಗಳಲ್ಲಿ ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಸೇರಿ ಹಲವು ಅಧ್ಯಾಯಗಳು ಸೇರ್ಪಡೆ

ಬೆಂಗಳೂರು: ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ಮಾರ್ಗಸೂಚಿಯಂತೆ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಜಿ.ಹೆಗಡೆ ನೇತೃತ್ವದ ಪರಿಷ್ಕರಣಾ ಸಮಿತಿಯು ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದು, 2024-25ನೆ ಸಾಲಿನಿಂದ ಮುದ್ರಿಸಿ ಶಾಲೆಗಳಿಗೆ ವಿತರಿಸಲು ಸರಕಾರ ಅನುಮತಿಸಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಕೈಬಿಟ್ಟಿದ್ದ ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಸೇರಿ ಹಲವು ಅಧ್ಯಯ, ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಪಠ್ಯವನ್ನು ಪುನಾಃ ಮಂಜುನಾಥ ಜಿ.ಹೆಗಡೆ ಸಮಿತಿಯು ಸೇರ್ಪಡೆ ಮಾಡಿದೆ. ನಾಗೇಶ್ ಹೆಗಡೆ, ಪಿ.ಲಂಕೇಶ್ರವರ ಲೇಖನವನ್ನೂ ಸೇರಿಸಿದ್ದು, ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕರೆಂದು ನೂತನ ಪಠ್ಯಗಳಲ್ಲಿ ದಾಖಲಿಸಲಾಗಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟುಗಳು ಮತ್ತು ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತ ವಾಗದಂತೆ, ಪರಿಷ್ಕರಣೆಗೆ ಒಳಪಟ್ಟ ಪಠ್ಯಪುಸ್ತಕಗಳ ಮೂಲ ಸ್ವರೂಪ ಬದಲಾಗದಂತೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನಷ್ಟೇ ಗಮನದಲ್ಲಿರಿಸಿಕೊಂಡು ಈ ಪರಿಷ್ಕರಣೆಯನ್ನು ನಡೆಸಲಾಗಿದೆ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ಪಠ್ಯಪುಸ್ತಕ ಪರಿಷ್ಕರಣಾ ವರದಿಯನ್ನು ಪ್ರಕಟಿಸಿದೆ.
ಪ್ರಸ್ತುತ ಪರಿಷ್ಕರಣ ಸಮಿತಿಗೆ ಪೂರ್ವದಲ್ಲಿಯೇ ಶಾಲಾ ಶಿಕ್ಷಣ ಇಲಾಖೆಯು ಹೊರಡಿಸಿದ್ದ ‘2023-24ನೆ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆ’ಯ ಅಂಶಗಳನ್ನು ಸಮಿತಿಯು ಅಳವಡಿಸಿಕೊಂಡಿದೆ. ವಿವಿಧ ಸಂಘಟನೆಗಳು, ವ್ಯಕ್ತಿಗಳು ಹಾಗೂ ಸರಕಾರದ ಇಲಾಖೆಗಳು ಪಠ್ಯಪುಸ್ತಕದಲ್ಲಿ ನಿರ್ದಿಷ್ಟ ವಿಷಯಾಂಶವನ್ನು ಅಳವಡಿಸುವ, ಕೈಬಿಡುವ, ಪರಿಷ್ಕರಿಸುವ ಕುರಿತು ಮಾಡಿದ ಎಲ್ಲ ಮನವಿಗಳನ್ನು ಪರಿಶೀಲಿಸಿ ಸೂಕ್ತವೆನಿಸಿದ ಸಲಹೆಗಳನ್ನು ಪರಿಷ್ಕರಣೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದೆ.
ಮಕ್ಕಳ ಪಠ್ಯಪುಸ್ತಕದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಪಠ್ಯಪುಸ್ತಕಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಎರಡು ಸಂಪುಟಗಳಾಗಿ ವಿಭಾಗಿಸುವ ಸರಕಾರದ ನಿರ್ಣಯಕ್ಕೆ ಅನುಸಾರವಾಗಿ, ಎರಡೂ ಸಂಪುಟಗಳಲ್ಲಿನ ಕಲಿಕಾಂಶಗಳು, ಪಾಠಗಳು ಸರಳತೆಯಿಂದ ಸಂಕೀರ್ಣತೆಯೆಡೆಗೆ ಸಾಗುವಂತೆ ವ್ಯವಸ್ಥಿತವಾಗಿ ಅಳವಡಿಸಲಾಗಿದೆ. ಕನ್ನಡ ಭಾಷೆ ಪಠ್ಯಪುಸ್ತಕಗಳಲ್ಲಿ ಪ್ರಮುಖ ಸಾಹಿತಿಗಳಿಗೆ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳಿಗೂ ಪ್ರಾಶಸ್ತ್ಯ ನೀಡಲಾಗಿದೆ ಎಂದು ತಿಳಿಸಿದೆ.
ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪರಿಷ್ಕರಣೆ
6ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಇತಿಹಾಸದ ಪರಿಚಯ ಮತ್ತು ಆರಂಭಿಕ ಸಮಾಜದ ಕುರಿತ ಮಾಹಿತಿ ಇರುವ ಅಧ್ಯಾಯವನ್ನು ಹೊಸದಾಗಿ ಸೇರಿಸಲಾಗಿದೆ. ‘ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಅಧ್ಯಾಯದಲ್ಲಿ ಎಲ್ಲ ಮಾಹಿತಿಗಳನ್ನು ನವೀಕರಿಸಲಾಗಿದ್ದು, ಹೊಸ ಚಿತ್ರಗಳು ಮತ್ತು ವಿವರಣೆಗಳನ್ನು ಸೇರಿಸಲಾಗಿದೆ.
ಚಂದ್ರಶೇಖರ್ ಕಂಬಾರ, ನಾಲ್ವಡಿ ಕೃಷ್ಣರಾಜ ಒಡೆಯರ್, ಎಚ್.ಎಲ್. ನಾಗೇಗೌಡ, ಡಾ. ಸಿದ್ದಲಿಂಗಯ್ಯ, ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಶಾಂತವೇರಿ ಗೋಪಾಲಗೌಡರ ಹಾಗೂ ಕೊಪ್ಪಳದ ಗವಿಮಠದ ಭಾವಚಿತ್ರಗಳನ್ನು ವಿವರಗಳೊಂದಿಗೆ ಸೇರಿಸಲಾಗಿದೆ. ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳು ಮತ್ತು ಉತ್ತರ ಭಾರತದ ರಾಜ ಮನೆತನಗಳನ್ನು ಕ್ರಮವಾಗಿ ಒಂದೆಡೆ ತಂದು ಚರ್ಚಿಸಿ, ರಾಜಮನೆತನಗಳ ಪಟ್ಟಿಯನ್ನು ಸೇರಿಸಲಾಗಿದೆ.
ದಕ್ಷಿಣ ಭಾರತದ ಪ್ರಾಚೀನ ರಾಜವಂಶಗಳುʼ ಅಧ್ಯಾಯದಲ್ಲಿ ‘ಗುಳ್ಳಕಾಯಜ್ಜಿಯ ಕಥೆ’ ಎಂಬ ಜಾನಪದ ಕಥೆ ಪಠ್ಯಕ್ಕೆ ಪೂರಕವಾಗದ ಕಾರಣಕ್ಕೆ ಕೈಬಿಡಲಾಗಿದೆ. ‘ವೇದ ಕಾಲದ ಸಂಸ್ಕೃತಿ’ ಮತ್ತು ‘ಹೊಸ ಧರ್ಮಗಳ ಉದಯ’ ಪಾಠಗಳನ್ನು ಸೇರಿಸಲಾಗಿದೆ. ಪೌರ ಮತ್ತು ಪೌರತ್ವ ಪಾಠವನ್ನು ಲಿಂಗ ಸಮಾನತೆಯ ನೆಲೆಯಲ್ಲಿ ಪರಿಷ್ಕರಿಸಲಾಗಿದೆ. ನಮ್ಮ ಸಂವಿಧಾನ ಪಾಠದಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಭಾಗಿಯಾದ ಮಹಿಳಾ ಸದಸ್ಯರ ವಿವರ ಮತ್ತು ಭಾವಚಿತ್ರವನ್ನು ಸೇರಿಸಲಾಗಿದೆ.
ಸಮಾನತೆಯ ಹಕ್ಕನ್ನು ಚರ್ಚಿಸುವಾಗ ಲಿಂಗತ್ವ ಅಲ್ಪಸಂಖ್ಯಾತರಿಗೆ ಇರುವ ಅವಕಾಶಗಳನ್ನು ಸೇರಿಸಲಾಗಿದೆ. ‘ಸ್ಥಳೀಯ ಆಡಳಿತ’ದ ಬದಲಿಗೆ ಹೆಚ್ಚು ವಿಸ್ತಾರವಾದ ಹಿನ್ನೆಲೆಯನ್ನು ಒದಗಿಸುವ ‘ಪ್ರಭುತ್ವದ ಪ್ರಕಾರಗಳು’ ಅಧ್ಯಾಯವನ್ನು ಸೇರಿಸಲಾಗಿದೆ. ‘ಸ್ಥಳೀಯ ಆಡಳಿತ’ವು 8ನೆ ತರಗತಿಯ ‘ಸ್ಥಳೀಯ ಸ್ವಯಂ ಸರಕಾರ’ ಅಧ್ಯಾಯದ ಪುನರಾವರ್ತನೆ ಆಗಿರುವುದರಿಂದ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
‘ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕು-ಕರ್ತವ್ಯಗಳು’ ಅಧ್ಯಾಯವನ್ನು ತಿದ್ದುಪಡಿ ಮಾಡಿ, ಮಕ್ಕಳ ಹಕ್ಕುಗಳನ್ನು ಸೇರಿಸಲಾಗಿದೆ. ಅಧ್ಯಾಯಗಳು ಹಾಗೂ ವಿವರಣೆಗಳನ್ನು ವಿಷಯಾನುಕ್ರಮದಲ್ಲಿ ಮರುಜೋಡಣೆ ಮಾಡಲಾಗಿದೆ. ಭೂಪಟಗಳನ್ನು ನವೀಕರಿಸಲಾಗಿದೆ. ಜಿಲ್ಲೆ, ತಾಲ್ಲೂಕು, ಹೋಬಳಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನವೀಕರಿಸಲಾಗಿದೆ.
7ನೆ ತರಗತಿಯ ಸಮಾಜ ವಿಜ್ಞಾನದಲ್ಲಿ ಭಾರತಕ್ಕೆ ಐರೋಪ್ಯರ ಆಗಮನ ಮತ್ತು ಬ್ರಿಟೀಷ್ ಆಳ್ವಿಕೆಯ ಪರಿಣಾಮಗಳು ಪಾಠದ ವಿವರಣೆಯಲ್ಲಿ ಸ್ಪಷ್ಟತೆಯನ್ನು ತರಲು 2017-18ರ ಪರಿಷ್ಕರಣ ಪಠ್ಯಪುಸ್ತಕದಲ್ಲಿನ ಮಾಹಿತಿಗಳನ್ನು ಪಡೆದು ಮರು ನಿರೂಪಿಸಲಾಗಿದೆ.
ತಿದ್ದೋಲೆಯಂತೆ ‘ಮೈಸೂರು ಮತ್ತು ಇತರ ಸಂಸ್ಥಾನಗಳು’ ಅಧ್ಯಾಯವನ್ನು ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು’ ಎಂಬ ಅಧ್ಯಾಯವನ್ನು ಸೇರ್ಪಡೆ ಮಾಡುವುದರೊಂದಿಗೆ ಸ್ವಾತಂತ್ರ್ಯ ಚಳುವಳಿಯ ನಿರೂಪಣೆಯಲ್ಲಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾಹಿತಿ ಸೇರಿಸಲಾಗಿದೆ.
ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕರೆಂದು ದಾಖಲಿಸಲಾಗಿದೆ. ‘ರಿಲಿಜಿಯನ್’ಗಳು ಎಂಬ ಶೀರ್ಷಿಕೆಯನ್ನು ‘ಧರ್ಮಗಳು’ ಎಂದು ಬದಲಾಯಿಸಲಾಗಿದೆ. ಪೌರನೀತಿಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಪರಿಚಯಿಸುವ ಅಧ್ಯಾಯವನ್ನು ಸೇರಿಸಲಾಗಿದೆ.
8ನೆ ತರಗತಿ ಇತಿಹಾಸ ವಿಭಾಗದಲ್ಲಿ ‘ಆಧಾರಗಳು’ ಎಂಬ ಅಧ್ಯಾಯವನ್ನು ಪರಿಷ್ಕರಿಸಿ, ಪ್ರಾಕ್ತನ ಆಧಾರಗಳ ಅರ್ಥ ಮತ್ತು ಪ್ರಾಮುಖ್ಯತೆಯೊಂದಿಗೆ ವಿಷಯಾಂಶವನ್ನು ಸೇರ್ಪಡೆ ಮಾಡಲಾಗಿದೆ. ‘ಭರತವರ್ಷ’ ಎಂಬ ಅಧ್ಯಾಯ ಶೀರ್ಷಿಕೆಯನ್ನು ‘ಭರತ ವರ್ಷ: ಭಾರತದ ಭೌಗೋಳಿಕ ಲಕ್ಷಣಗಳು ಮತ್ತು ಪ್ರಾಗೈತಿಹಾಸಿಕ ಕಾಲ’ ಎಂದು ನಿರ್ದಿಷ್ಟಪಡಿಸಲಾಗಿದೆ.
‘ಸಿಂಧೂ-ಸರಸ್ವತಿ ನಾಗರಿಕತೆ’ ಎಂಬ ಅಧ್ಯಾಯ ಶೀರ್ಷಿಕೆಯನ್ನು ‘ಪ್ರಾಚೀನ ಭಾರತದ ನಾಗರಿಕತೆಗಳು: ಸಿಂಧು-ಸರಸ್ವತಿ ನಾಗರಿಕತೆ ಮತ್ತು ವೇದಗಳ ಕಾಲ’ ಎಂದು ಬದಲಾಯಿಸಿದೆ. ‘ಸನಾತನ ಧರ್ಮ’ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ, ವ್ಯವಸ್ಥಿತವಾದ ನಿರೂಪಣೆಯನ್ನು ನೀಡಲಾಗಿದೆ.
‘ಜೈನ ಮತ್ತು ಬೌದ್ಧ ಮತಗಳು’ ಶೀರ್ಷಿಕೆಯನ್ನು ‘ಜೈನ ಮತ್ತು ಬೌದ್ಧ ಧರ್ಮಗಳು’ ಎಂದು ಬದಲಾಯಿಸಿ, ಈ ಧರ್ಮಗಳ ಉದಯದ ಹಿನ್ನೆಲೆಯನ್ನು ಸೇರ್ಪಡೆ ಮಾಡಲಾಗಿದೆ. ಮಾನ್ಯಖೇಟದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಳುಕ್ಯರು ಅಧ್ಯಾಯದಲ್ಲಿ ‘ವೀರಶೈವ ಪಂಥದ ಮೌಲ್ಯಗಳು’ ಬದಲಾಗಿ ‘ಬಸವಾದಿ ಶಿವಶರಣ ಮೌಲ್ಯಗಳು’ ಪದವನ್ನು ಬಳಸಲಾಗಿದೆ.
9ನೆ ತರಗತಿಯ ಇತಿಹಾಸದ ‘ಭಕ್ತಿಪಂಥ’ ಅಧ್ಯಾಯದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ಸಂತ ಶಿಶುನಾಳ ಶರೀಫರ ಕುರಿತ ಮಾಹಿತಿಯನ್ನು ಸೇರಿಸಲಾಗಿದೆ. 10ನೆ ತರಗತಿಯ ಇತಿಹಾಸದ ‘ಭಾರತಕ್ಕೆ ಯೂರೋಪಿಯನ್ನರ ಆಗಮನ’ ಅಧ್ಯಾಯದಲ್ಲಿ ಮಾರ್ತಾಂಡ ವರ್ಮನ ಕುರಿತು ವಿವರಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ.
‘ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು’ ಅಧ್ಯಾಯದಲ್ಲಿ ಮೈಸೂರಿನ ಅರಸರ ಹಾಗೂ ಕಿತ್ತೂರು, ಸುರಪುರ, ಕೊಪ್ಪಳ, ಹಲಗಲಿಗಳ ಸ್ಥಳೀಯ ಬಂಡಾಯಗಳನ್ನು ಕ್ರಮಬದ್ಧವಾಗಿ ದಾಖಲಿಸಲಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ಅಧ್ಯಾಯದಲ್ಲಿ ಸಾವತ್ರಿಬಾಯಿ ಫುಲೆ, ಯುವ ಬಂಗಾಳಿ ಚಳವಳಿ ಮತ್ತು ಪೆರಿಯಾರ್ ರವರ ವಿಷಯಾಂಶಗಳನ್ನು ಸೇರ್ಪಡೆ ಮಾಡಲಾಗಿದೆ.
9ನೆ ತರಗತಿಯ ರಾಜ್ಯಶಾಸ್ತ್ರದ ಭಾರತದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ವಿವರಗಳನ್ನು ನವೀಕರಿಸಿ, ನೂತನ ಸಂಸತ್ ಭವನದ ಚಿತ್ರವನ್ನು ಸೇರಿಸಲಾಗಿದೆ. ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಮಾಹಿತಿಯನ್ನು ಸೇರ್ಪಡೆ ಮಾಡಲಾಗಿದೆ. 10ನೆ ತರಗತಿಯ ರಾಜ್ಯಶಾಸ್ತ್ರದ ‘ಸಾರ್ವಜನಿಕ ಆಡಳಿತ’ ಎಂಬ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ. ‘ಅನ್ಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ’ ಎಂಬ ಅಧ್ಯಾಯವು ಹಿಂದಿನ ತರಗತಿಗಳಲ್ಲಿ ಪುನರಾವರ್ತನೆ ಆಗಿರುವುದರಿಂದ ಕೈಬಿಡಲಾಗಿದೆ.
‘ಭಾರತದ ವಿದೇಶಾಂಗ ನೀತಿ’, ಮಹಿಳಾ ಮೀಸಲಾತಿಯ ಬಗ್ಗೆ ಇತ್ತೀಚಿನ ಮಸೂದೆಯ ʻನಾರೀ ಶಕ್ತಿ ವಂದನಾ ಅಧಿನಿಯಮ’, ಲಿಂಗತ್ವ ಅಲ್ಪ ಸಂಖ್ಯಾತರ ಕ್ಷೇಮ ಕುರಿತ ಮಾಹಿತಿಯನ್ನು ಸೇರ್ಪಡೆ ಮಾಡಲಾಗಿದೆ. ಹಸಿರು ಕ್ರಾಂತಿಯ ಹರಿಕಾರ ಡಾ. ಎಂ.ಎಸ್. ಸ್ವಾಮಿನಾಥನ್ ರವರಿಗೆ ಗೌರವಾರ್ಥಕವಾಗಿ ನೀಡಿರುವ ಭಾರತ ರತ್ನ ಪ್ರಶಸ್ತಿಯ ಮಾಹಿತಿಯನ್ನು ಸೇರಿಸಲಾಗಿದೆ.
ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕಗಳಲ್ಲಿ ಆಗಿರುವ ಬದಲಾವಣೆ
1 ರಿಂದ 5ನೆ ತರಗತಿಯ ಕನ್ನಡ ಭಾಷಾ ಪಠ್ಯಗಳಲ್ಲಿ ಕನ್ನಡದ ಹಿರಿಯ ಕವಿಗಳಾದ ಕೆ.ವಿ. ತಿರುಮಲೇಶ್ ಮತ್ತು ವಿ.ಜಿ. ಭಟ್ ರ ಮಕ್ಕಳ ಕವನಗಳನ್ನು ಪೂರಕ ಓದಿಗೆ ಹೊಸದಾಗಿ ನೀಡಲಾಗಿದೆ. ಮಹಿಳಾ ದಿನಾಚರಣೆ ಎಂಬ ಪಾಠದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಪರಿಚಯಿಸಲಾಗಿದೆ. ‘ಪ್ರಾಮಾಣಿಕತೆ’ ಎಂಬ ಪೂರಕ ಗದ್ಯವನ್ನು ಕೈಬಿಡಲಾಗಿದೆ. ಪುರಂದರದಾಸರರ ಕೀರ್ತನೆಯನ್ನು 5ನೆ ತರಗತಿಯಿಂದ 8ನೆ ತರಗತಿಗೆ ಸ್ಥಳಾಂತರಿಸಲಾಗಿದೆ.
6 ಮತು 7ನೆ ತರಗತಿ ಕನ್ನಡ ಭಾಷಾ ಪಠ್ಯಗಳಲ್ಲಿ ಬಿ.ಎಸ್. ಕುರ್ಕಾಲ ಮತ್ತು ರಾಜಶೇಖರ ಕುಕ್ಕುಂದ ಅವರ ಕವನಗಳು ಮಕ್ಕಳ ವಯೋಮಾನಕ್ಕೆ ಮೀರಿದ್ದಾಗಿರುವುದರಿಂದ ಕೈಬಿಡಲಾಗಿದೆ. ಶ್ರೀನಿವಾಸ ಉಡುಪರ ಕವನವನ್ನು 10ನೆ ತರಗತಿಯ ತೃತೀಯ ಭಾಷೆ ಕನ್ನಡ ಪುಸ್ತಕದಲ್ಲಿ ಪೂರಕ ಪದ್ಯವಾಗಿ ಸ್ಥಳಾಂತರಿಸಲಾಗಿದೆ. ಕಯ್ಯಾರ ಕಿಞ್ಞಣ್ಣರೈ ಹಾಗೂ ಎಚ್.ಎಸ್.ಶಿವಪ್ರಕಾಶ್ ರವರ ಕವನಗಳನ್ನು ಹೊಸದಾಗಿ ಸೇರಿಸಲಾಗಿದೆ.
8 ರಿಂದ 10ನೆ ತರಗತಿಯಲ್ಲಿ ಕನ್ನಡ ಪುಸ್ತಕದಲ್ಲಿ ಚಂದ್ರಶೇಖರ ಕಂಬಾರರ ‘ಸೀಮೆ’, ಗಿರೀಶ್ ಕಾರ್ನಾಡ್ರ ‘ಅಧಿಕಾರ’, ದೇವಿದಾಸ ಬರೆದಿರುವ ʻಚಕ್ರಗ್ರಹಣʼ(ಯಕ್ಷಗಾನ), ಮರಿಯಪ್ಪ ಭಟ್ಟರ ‘ನಮ್ಮ ಭಾಷೆ’, ಎ.ಎನ್. ಮೂರ್ತಿರಾವ್ ಅವರ ‘ವ್ಯಾಘ್ರಗೀತೆ’, ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’, ಅಕ್ಕಮಹಾದೇವಿ ‘ವಚನಗಳು’, ಹಳಗನ್ನಡ ಪಠ್ಯ ದುರ್ಗಸಿಂಹನ ‘ವೃಕ್ಷ ಸಾಕ್ಷಿ’ ಪಾಠಕ್ಕೆ ಬದಲಾಗಿ ಎ.ಎಸ್. ಮೂರ್ತಿರಾಯರ ಲಲಿತ ಪ್ರಬಂಧವನ್ನು ಸೇರಿಸಲಾಗಿದೆ.
ಕನ್ನಡ ದ್ವಿತೀಯ ಭಾಷೆ ಪಠ್ಯಪುಸ್ತಕಗಳಲ್ಲಿ ಆಗಿರುವ ಬದಲಾವಣೆ
5 ರಿಂದ 7ನೆ ತರಗತಿಯಲ್ಲಿ ಹೊಸದಾಗಿ ಪೂರಕ ಓದಿಗಾಗಿ ಹೋಯ್ಸಳ ಅವರ ‘ಸಂತಮ್ಮಣ್ಣ’, ರಾಜರತ್ನಂ ಅವರ ‘ತುತ್ತೂರಿ’, ಅಡಿಗ ಅವರ ‘ದೇಶ ಪ್ರೇಮ’, ವಿ.ಜಿ. ಭಟ್ಟ ಅವರ ‘ಕನಸಿನಲ್ಲಿ’ ಸೇರಿಸಲಾಗಿದೆ. 8ನೆ ತರಗತಿ ‘ಬ್ಲಡ್ ಗ್ರೂಪ್’ ಕಥೆಯನ್ನು ಕೈಬಿಟ್ಟು ನೇಮಿಚಂದ್ರರ ‘ಏನಾದರೂ ಮಾಡಿ ದೂರಬೇಡಿ’ ಎಂಬ ಪರಿಸರ ಸಂರಕ್ಷಣೆ ಸಂಬಂಧಿತ ಗದ್ಯ ಲೇಖನವನ್ನು ಸೇರಿಸಲಾಗಿದೆ.
8ನೆ ತರಗತಿಯಲ್ಲಿ ಯಾವುದೇ ಪೂರಕ ಓದು ಇರಲಿಲ್ಲವಾದ್ದರಿಂದ ‘ಒಗಟು’, ‘ಸರ್.ಎಂ.ವಿಶ್ವೇಶ್ವರಯ್ಯ’ ಮತ್ತು ‘ಬಸವಣ್ಣನ ವಚನಗಳ’ನ್ನೂ ಪೂರಕ ಓದಿಗೆ ಸೇರ್ಪಡೆ ಮಾಡಲಾಗಿದೆ.
9ನೆ ತರಗತಿಯಲ್ಲಿ ಎಸ್.ಜಿ. ನರಸಿಂಹಾಚಾರರ ‘ಗೋವಿನ ಚರಿತ್ರೆ’ ಹಾಗೂ ಮುಡ್ನಾಕೂಡು ಚಿನ್ನಸ್ವಾಮಿಯವರ ‘ಸಮುದ್ರ ಚುಂಬನ’ ಕವನಗಳನ್ನು ಸೇರಿಸಿ, ಪೂರಕ ಓದು ಪೂರ್ಣಗೊಳಿಸಲಾಗಿದೆ.
10ನೆ ತರಗತಿ ಮಕ್ಕಳ ಕಲಿಕೆಗೆ ಕಠಿಣವಾದ ವಿದೇಶಿ ಪ್ರವಾಸ ಕಥನ ‘ಟುಸ್ಸೋಡ್ ವ್ಯಾಕ್ಸ್ ಮ್ಯೂಸಿಯಂ’ ಲೇಖನವನ್ನು ಕೈಬಿಟ್ಟು ಜಿ.ಎಸ್. ಶಿವರುದ್ರಪ್ಪನವರ ‘ಗಂಗೆಯಲ್ಲಿ ದೀಪ ಮಾಲೆ’ ಪ್ರವಾಸ ಕಥನವನ್ನು ಸೇರಿಸಲಾಗಿದೆ.
ಪೂರಕ ಪಠ್ಯ ಕಡಿಮೆ ಇರುವುದರಿಂದ ಕವಿರಾಜ ಮಾರ್ಗದ ಕನ್ನಡ ನಾಡು ನುಡಿ ಕುರಿತ ಕವನಗಳನ್ನೂ, ಹಾ.ಮಾ.ನಾಯಕ್ ಹಾಗೂ ಗೌರೀಶ್ ಕಾಯ್ಕೀಣಿಯವರ ಲೇಖನಗಳನ್ನು ಸೇರಿಸಲಾಗಿದೆ.
ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕಗಳಲ್ಲಿ ಆಗಿರುವ ಬದಲಾವಣೆ
9 ಮತ್ತು 10ನೆ ತರಗತಿಯಲ್ಲಿ ಕೈಬಿಟ್ಟಿದ್ದ ನಾಗೇಶ್ ಹೆಗಡೆ, ಪಿ.ಲಂಕೇಶ್ ರವರ ಲೇಖನವನ್ನೂ, ಶ್ರೀನಿವಾಸ ಉಡುಪರವರ ಕವನವನ್ನೂ ಹೊಸದಾಗಿ ಸೇರಿಸಲಾಗಿದೆ.
ಕನ್ನಡ ಭಾಷೆ ಮತ್ತು ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿರುವ ಎಲ್ಲ ವಿಷಯಾಂಶಗಳು, ವ್ಯಾಕರಣಾಂಶಗಳು ಮತ್ತಿತರ ಆಧಾರಗಳಿಗೆ ಸಮಿತಿಯ ಸಂಯೋಜಕರು, ಅಧ್ಯಕ್ಷರು ಹಾಗೂ ಸದಸ್ಯರು ಜವಾಬ್ದಾರರಾಗಿದ್ದು, ಪಠ್ಯಗಳಲ್ಲಿರುವ ವಿಷಯಗಳಿಗೆ ಮುಂದಿನ ದಿನಗಳಲ್ಲಿ ಆಕ್ಷೇಪಣೆ ಬಂದಲ್ಲಿ, ಸಮಿತಿಯ ಸಂಯೋಜಕರ ಡಾ. ಮಂಜುಜಾಥ್ ಜಿ. ಹೆಗಡೆ ಉತ್ತರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.







