ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸ್ಥಾನ ಇಲ್ಲ: ಸುರೇಶ್ ಕುಮಾರ್ ಕಾಲೆಳೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ‘ಪ್ರತಿಪಕ್ಷ ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸೂಕ್ತವಾದ ಸ್ಥಾನಮಾನ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ಹಿರಿಯ ಸದಸ್ಯ ಎಸ್.ಸುರೇಶ್ ಕುಮಾರ್ ಕಾಲೆಳೆದ ಪ್ರಸಂಗ ನಡೆಯಿತು.
ಶುಕ್ರವಾರ ವಿಧಾನಸಭೆಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಕುರಿತಂತೆ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡುವ ಮುನ್ನ, ವಿಪಕ್ಷ ನಾಯಕ ಆರ್.ಅಶೋಕ್, ‘ಇವತ್ತು ಹೊಸಬಟ್ಟೆ ಹಾಕಿದ್ದೀರಾ’ ಎಂದು ಸಿಎಂ ಸಿದ್ದರಾಮಯ್ಯರನ್ನು ಪ್ರಶಂಸಿದ್ದರು. ‘ಇಲ್ಲ ಹೊಸಬಟ್ಟೆಯಲ್ಲ, ಇದು ಹಳೆಯ ಬಟ್ಟೆ’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
‘ಕೇಸರಿ ಧರಿಸಿದ್ದೀರಲ್ಲ, ಅದನ್ನು ಗಮನಿಸಿದೆ’ ಅಶೋಕ್ ಹೇಳಿದಾಗ, ‘ನೀನು ಧರಿಸಿರುವುದು ಕೇಸರಿ. ನನ್ನ ಬಟ್ಟೆ ಕೇಸರಿ ಅಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ಸುರೇಶ್ ಕುಮಾರ್, ‘ಬಟ್ಟೆ ಮುಖ್ಯವಲ್ಲ. ಅದನ್ನು ಧರಿಸುವವರು ಮುಖ್ಯ ಎಂಬುದು ಅಶೋಕ್ಗೆ ಗೊತ್ತಿಲ್ಲ’ ಎಂದು ಚಟಾಕಿ ಹಾರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಪಾಪ ಸುರೇಶ್ ಕುಮಾರ್ ಬಹಳ ಬುದ್ಧಿವಂತರು. ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸೂಕ್ತ ಸ್ಥಾನಮಾನ ಇಲ್ಲ ಎಂದು ಕಾಲೆಳೆದರು. ಆಗ ಮಾತನಾಡಿದ ಸುರೇಶ್ ಕುಮಾರ್, ‘ಬಿಜೆಪಿ ಪಕ್ಷ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ಆರು ಬಾರಿ ಶಾಸಕನಾಗಿದ್ದೇನೆ. ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಈಗ ಮುಂದಿನ ಸಾಲಿನಲ್ಲಿ ಕುಳಿತಿದ್ದೇನೆ’ ಎಂದರು. ಆದರೂ, ‘ನಿಮನ್ನು ಸಚಿವ ಸ್ಥಾನದಿಂದ ತೆಗೆದರಲ್ಲ’ ಎಂದು ಸಿದ್ದರಾಮಯ್ಯ ಛೇಡಿಸಿದರು.







