ಹುಲಿ ಉಗುರು ಪ್ರಕರಣ; ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್

ಅರವಿಂದ ಬೆಲ್ಲದ್
ಬೆಂಗಳೂರು: ರಾಜ್ಯದಲ್ಲಿ ಕೆಲವರು ಹುಲಿ ಉಗುರು ಕೊರಳಲ್ಲಿ ಧರಿಸುವುದು, ಹುಲಿ ಚರ್ಮವನ್ನು ಬಳಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದ್ದು, ಈ ಸಂಬಂಧ ಈಗಾಗಲೇ ಕೆಲವು ಬಂಧನಗಳಾಗಿವೆ.
ಈ ಬಗ್ಗೆ ಗುರುವಾರ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ʼಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಎಲ್ಲರ ವಿರುದ್ಧವೂ ಸಮಾನವಾಗಿಯೇ ಕ್ರಮ ತೆಗೆದುಕೊಳ್ಳಬೇಕುʼ ಎಂದು ಒತ್ತಾಯಿಸಿದರು.
ʼರಾಜ್ಯದಲ್ಲಿ ಬರ ಇದೆ, ರೈತರಿಗೆ, ಜನರಿಗೆ ವಿದ್ಯುತ್ ಸಮಸ್ಯೆ ಇದೆ. ಇದರ ಗಮನ ಬೇರೆ ಕಡೆ ಸೆಳೆಯಲು ಸರಕಾರ ಹುಲಿ ಉಗುರು ಪ್ರಕರಣ ಮುನ್ನೆಲೆಗೆ ತಂದಿದೆʼ ಎಂದು ದೂರಿದರು.
ಇನ್ನು ದರ್ಗಾಗಳಲ್ಲಿ ನವಿಲುಗರಿಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಆರೋಪಿಸಿರುವ ಅವರು, ಇದು ಕೂಡಾ ಕಾನೂನಿಗೆ ವಿರುದ್ಧವಾಗಿದೆ. ನವಿಲು ಗರಿಗಳನ್ನು ಇಟ್ಟುಕೊಂಡಿರುವ ದರ್ಗಾ, ಮಸೀದಿಗಳ ಮೇಲೆ ದಾಳಿ ಮಾಡಿ, ಮೌಲ್ವಿಗಳ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಅಲ್ಲದೇ, ನವಿಲು ಗರಿಗಳನ್ನು ಬಳಕೆ ಮಾಡುವ ಎಲ್ಲ ಮೌಲ್ವಿಗಳಿಗೂ ಏಳೇಳು ವರ್ಷ ಜೈಲು ಶಿಕ್ಷೆ ಕೊಡಿಸಿ ಎಂದು ಅವರು ಒತ್ತಾಯಿಸಿದರು.
ʼಸತ್ತ ಪ್ರಾಣಿಗಳ ಚರ್ಮ ಇಟ್ಟುಕೊಳ್ಳೋದು ನಮ್ಮ ಸಾಧು ಸಂತರು ಮೊದಲಿಂದಲೂ ಪಾಲಿಸಿಕೊಂಡು ಬಂದ ಪದ್ಧತಿ, ಸಲ್ಮಾನ್ ಖಾನ್ ಥರ ಜಿಂಕೆ ಸಾಯಿಸಿ ಅದರ ಚರ್ಮ ಬಳಸಲ್ಲ, ಕಾನೂನು ಪಾಲಿಸಿದರೆ ಶೇ.100 ರಷ್ಟು ಪಾಲಿಸಿ, ಕಾನೂನು ಕೇವಲ ಹಿಂದೂ ಸಮಾಜಕ್ಕೆ ಅನ್ವಯಿಸಲ್ಲ, ಮುಸ್ಲಿಮರಿಗೂ ಅನ್ವಯಿಸುತ್ತದೆʼ ಎಂದು ಅರವಿಂದ ಬೆಲ್ಲದ್ ಹೇಳಿದರು.







