ದೇಶದ ಸೈನಿಕರಿಗೆ ಬೆಂಬಲ ಸೂಚಿಸಿ ನಾಳೆ ತಿರಂಗಾ ಯಾತ್ರೆ : ಅಶ್ವತ್ಥ ನಾರಾಯಣ್

ಡಾ.ಸಿ.ಎನ್.ಅಶ್ವತ್ಥನಾರಾಯಣ್
ಬೆಂಗಳೂರು : ಭಯೋತ್ಪಾದಕರ ವಿರುದ್ಧ ʼಆಪರೇಷನ್ ಸಿಂಧೂರʼ ನಡೆಸುತ್ತಿರುವ ದೇಶದ ಸೈನಿಕರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ತಂಡಕ್ಕೆ ಬೆಂಬಲವನ್ನು ನೀಡಲು ನಾಗರಿಕ ವೇದಿಕೆಯ ಮೂಲಕ ಮೇ 11ರ ಬೆಳಗ್ಗೆ 10.30ಕ್ಕೆ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದರು.
ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲೇಶ್ವರದ ಮಂತ್ರಿಮಾಲ್ನ ಸಂಪಿಗೆ ರಸ್ತೆಯ ಆಟದ ಮೈದಾನದಿಂದ ಪ್ರಾರಂಭವಾಗಿ 18ನೇ ಕ್ರಾಸ್ ವರೆಗೂ 616 ಮೀಟರ್ ಉದ್ದದ ರಾಷ್ಟ್ರಧ್ವಜದ ಬಾವುಟದೊಂದಿಗೆ ತಿರಂಗಾ ಯಾತ್ರೆ ಜರುಗಲಿದೆ ಎಂದು ತಿಳಿಸಿದರು.
ಪಕ್ಷಾತೀತವಾಗಿ, ಜಾತ್ಯತೀತವಾಗಿ ಮತ್ತು ಧರ್ಮಾತೀತವಾಗಿ ಎಲ್ಲಾ ಸಂಘಟನೆಗಳು ಮತ್ತು ಬೆಂಗಳೂರಿನ ನಾಗರಿಕರು ಒಂದಾಗಿ ಒಗ್ಗಟಿನಿಂದ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಅಶ್ವತ್ಥ ನಾರಾಯಣ್, ದೇಶದ ಒಗ್ಗಟ್ಟನ್ನು ಎತ್ತಿಹಿಡಿಯಲು ಮತ್ತು ಆಪರೇಷನ್ ಸಿಂಧೂರ ನಡೆಸುತ್ತಿರುವ ಸೈನಿಕರೊಂದಿಗೆ ಇಡೀ ದೇಶ ನಿಂತಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ನಾಗರಿಕರು ಒಗ್ಗಟ್ಟಿನಿಂದ ಒಂದಾಗಬೇಕು ಎಂದು ಮನವಿ ಮಾಡಿದರು.