ಮೇಲ್ಮನೆಯಲ್ಲಿ ಶಿಡ್ಲಘಟ್ಟದ ಮಹಿಳಾ ಅಧಿಕಾರಿ ನಿಂದನೆ ಪ್ರಕರಣ ಪ್ರತಿಧ್ವನಿ

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ಗೌಡ ನಿಂದಿಸಿದ ಪ್ರಕರಣ ವಿಧಾನಪರಿಷತ್ ಕಲಾಪದಲ್ಲಿ ಪ್ರತಿಧ್ವನಿಸಿ ಸದಸ್ಯರ ನಡುವೆ ತೀವ್ರ ಗದ್ದಲಕ್ಕೆ ಕಾರಣವಾಯಿತು.
ಮಂಗಳವಾರ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಈ ವಿಷಯ ಪ್ರಸ್ತಾಪಿಸಿ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಸರಕಾರಿ ಕೆಲಸಕ್ಕೆ ಅಡ್ಡಿಪಡಿಸುವವರ ಮೇಲೆ ಸೂಕ್ತ ಕ್ರಮ ಏಕೆ ಇಲ್ಲ? ಎಂದು ಪ್ರಶ್ನಿಸಿದರು.
ಪ್ರಕರಣ ನಡೆದು ಹಲವು ದಿನಗಳ ನಂತರವೂ ಸರಕಾರವಾಗಲೀ, ಸಂಬಂಧಪಟ್ಟ ಇಲಾಖೆ ವತಿಯಿಂದ ಸ್ವಯಂಪ್ರೇರಿತ ದೂರನ್ನೇ ದಾಖಲಿಸಲಿಲ್ಲ. ಈ ಬಗ್ಗೆ ಆ ಅಧಿಕಾರಿ ಮಾತ್ರ ವೈಯಕ್ತಿಕ ದೂರನ್ನು ನೀಡಿದ್ದಾರೆ. ಫೋನ್ ಮೂಲಕ ಅಧಿಕಾರಿಗೆ ಬೆಂಕಿ ಹಚ್ಚುತ್ತೇನೆ. ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಧಮ್ಕಿ ಹಾಕುತ್ತಾರೆ. ಹಾಗಾದರೆ ಮಹಿಳೆ ನಿರ್ಭೀತವಾಗಿ ಕೆಲಸ ಮಾಡಲು ಸಾಧ್ಯವಿಲ್ಲವೇ ಎಂದು ಸರಕಾರವನ್ನು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿ ಮಹಿಳೆಗೆ ನಿಂದನೆ ಮಾಡಿದವರ ಮೇಲೆ ಸೆಕ್ಷನ್ 79 ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ. ಅಲ್ಲದೆ, ರಾಜೀವ್ಗೌಡ ಮೇಲೆ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿದ ನಂತರ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಲು ನಿರಾಕರಿಸಿತು. ಇದರಲ್ಲಿ ಸರಕಾರದ ಪಕ್ಷಪಾತ ಧೋರಣೆ ಕಾಣುತ್ತದೆ ಎಂದು ಭಾರತಿ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಯಾವುದೇ ಪಕ್ಷದವರ ವಿರುದ್ಧ ಆರೋಪ ಮಾಡುತ್ತಿಲ್ಲ. ಇಲ್ಲಿ ಮಹಿಳೆಗೆ ಭಯಭೀತಿ ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದರೆ ಅವರಿಗೆ ರಕ್ಷಣೆ ಕೊಡುವವರು ಯಾರು? ಸರಕಾರಕ್ಕೆ ಇದರ ಬಗ್ಗೆ ಅರಿವಿಲ್ಲವೇ ಎಂದು ಭಾರತಿಶೆಟ್ಟಿ ಪ್ರಶ್ನಿಸಿದರು.
ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಧ್ಯಪ್ರವೇಶಿಸಿ, ಈ ಪ್ರಕರಣಕ್ಕೂ ಮುನ್ನ ರಾಜ್ಯದ ವಿವಿಧೆಡೆ ಮಹಿಳೆಯರ ಮೇಲೆ ನಡೆದಿರುವ ಪ್ರಕರಣಗಳ ಬಗ್ಗೆಯೂ ಮಾತನಾಡಿ ಎಂದಾಗ ಗದ್ದಲ ಉಂಟಾಯಿತು.
ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿ, ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಚಿಕ್ಕಬಳ್ಳಾಪುರ ಎಸ್ಪಿಯವರು ಆರೋಪಿ ರಾಜೀವ್ ಗೌಡನನ್ನು ಬಂಧಿಸಲು 3 ತಂಡಗಳನ್ನು ರಚಿಸಿದ್ದರು. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಕಠಿಣವಾದ ಕಾನೂನು ಕ್ರಮವನ್ನು ಜರುಗಿಸುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.







