ಮಹಿಳೆಯರಿಗಾಗಿ ಶೀಘ್ರದಲ್ಲಿ ‘ಋತುತಾರೆ’ ಯೋಜನೆ : ಆರೋಗ್ಯ ಸಚಿವ ಯು.ಟಿ.ಖಾದರ್

ಬೆಂಗಳೂರು : ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಋತುಬಂಧ ಸಮಸ್ಯೆಗಳು ಹಾಗೂ ಮಾನಸಿಕ, ಆರೋಗ್ಯ ಒತ್ತಡ ನಿರ್ವಹಣೆಗಾಗಿ ರಾಜ್ಯ ಸರಕಾರ ಮಹಿಳೆಯರಿಗಾಗಿ ಶೀಘ್ರದಲ್ಲಿ ವಿಶೇಷವಾದ ‘ಋತುತಾರೆ' ಎಂಬ ನೂತನ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳವಾರ ನಗರದ ಆರೋಗ್ಯಸೌಧದಲ್ಲಿ ಆರೋಗ್ಯ ಋತುಬಂಧ, ಆರೋಗ್ಯ ಮಹಿಳೆ ಹಾಗೂ ಆರೋಗ್ಯ ಕುಟುಂಬ ವಿಷಯದ ಕುರಿತು ನಟಿ ರಮ್ಯಾ ಹಾಗೂ ಇತರೆ ತಜ್ಞರೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ನಂತರ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ನಟಿ ರಮ್ಯಾ ಮತ್ತು ಡಾ.ಜೋಷ್ನಾ ಅವರ ವಿಶೇಷ ಆಸಕ್ತಿ, ಮಹಿಳಾ ಸಮುದಾಯದ ಮೇಲಿರುವ ಕಾಳಜಿ ಮೇರೆಗೆ ಭವಿಷ್ಯದಲ್ಲಿ ಋತುತಾರೆ ಯೋಜನೆಯನ್ನು ತರಲು ಯೋಚಿಸಿದ್ದೇವೆ. ನಟಿ ರಮ್ಯಾ ಈ ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ವೈದ್ಯರ ಮಾಹಿತಿ ಪ್ರಕಾರ ಬಹಳಷ್ಟು ಸಹೋದರಿಯರು ಋತುಬಂಧದ ಕಾಲಘಟ್ಟದಲ್ಲಿ ಮಾನಸಿಕ ತೊಂದರೆಗೆ ಒಳಪಡುತ್ತಿದ್ದಾರೆ. ಅಂತಹ ಸಂದರ್ಭದಲ್ಲಿರುವವರನ್ನು ಗುರುತಿಸಿಕೊಂಡು ಅವರಿಗೆ ಬೇಕಾದಂತ ಜನತಾ ಕಾರ್ಯಕ್ರಮಗಳ ಮೂಲಕ ಮಾಹಿತಿ ಕೊಡಲಾಗುತ್ತದೆ. ಆ ಕಾಲಘಟ್ಟದಲ್ಲಿ ಅವರ ಜೀವನ ಶೈಲಿ, ಊಟೋಪಚಾರ ಹೇಗಿರಬೇಕು, ನಿದ್ರೆಯ ಸಮಯ ಎಷ್ಟಿರಬೇಕು ಎಂದು ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ಮಹಿಳಾ ತಜ್ಞೆ ಡಾ.ಜೋಷ್ನಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮಹಿಳೆಯರ ದತ್ತಾಂಶ ತೆಗೆದುಕೊಳ್ಳಲಿದ್ದು, ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೆನೋಪಾಸ್ ಕುರಿತು ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸಲಿದ್ದಾರೆ. ಈ ಯೋಜನೆ ಹಂತಹಂತವಾಗಿ ಕಾರ್ಯರೂಪಕ್ಕೆ ತಂದು ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿ ಮಾಡಿ ದೇಶಾದ್ಯಂತ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗುತ್ತದೆ ಎಂದು ಖಾದರ್ ತಿಳಿಸಿದರು.
ಈ ವೇಳೆಯಲ್ಲಿ ನಟಿ ರಮ್ಯಾ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.






